ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ 3 ದಿನಗಳನ್ನು ಪೂರೈಸಿದ್ದು ಗ್ರಾಮಾಂತರ ಭಾಗಗಳಲ್ಲಿಯೂ ಈ ಕಾರ್ಯಕ್ರಮ ವಿಸ್ತರಿಸುತ್ತಾ ಸಾಗಿದ್ದು ಜನ ದುರ್ಗಾ ಮಾತೆಯ ಆರಾಧನೆಯಲ್ಲಿ ಲೀನರಾಗಿರುವುದು ಕಂಡು ಬರುತ್ತಿದೆ.
ಹಳಿಯಾಳದ ಸಿದ್ದರಾಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ದೌಡ ಕೈಲಾಸ ಆಶ್ರಯ ನಗರ, ಕಾರ್ಮೇಲ್ ಶಾಲೆಯ ಮುಂಭಾಗದ ರಸ್ತೆ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆಯ ಮೂಲಕ ಯಲ್ಲಾಪೂರ ನಾಕೆ ಬಳಿಯ ಚವಾಟೆಪ್ಪ-ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲುಪಿದ್ದು ಶನಿವಾರ ಅಲ್ಲಿಂದ ದೌಡ ಮತ್ತೇ ಆರಂಭವಾಗಲಿದೆ.
ಇಂದು ಪಟ್ಟಣದಲ್ಲಿ ಸುಮಾರು 35ಕ್ಕೂ ಅಧಿಕ ಮಕ್ಕಳು ಅಕ್ಕಮಹಾದೇವಿ, ಭಾರತಾಂಬೆ, ದುರ್ಗಾಮಾತೆ, ಸರಸ್ವತಿ, ಶಾರದೆ, ಶಿವಾಜಿ ಮಹಾರಾಜರು, ಆಂಜನೇಯ ಹೀಗೆ ಹಲವು ಛದ್ಮವೇಷ ವೇಷ ಭೂಷಣಗಳಲ್ಲಿ ಕಂಗೊಳಿಸಿ ದೌಡಗೆ ಮೆರಗು ತಂದರು. ಕಾಕರಗಲ್ಲಿಯಲ್ಲಿ ಪುಟಾಣಿಯೊಬ್ಬ ಆಚಿಜನೇಯ(ಕಪಿರಾಯ) ರೂಪದಲ್ಲಿ ಪುಟ್ಟ ಮರವನ್ನೇರಿ ಕುಳಿತಿದ್ದು ಎಲ್ಲರ ಆಕರ್ಷಣೇಯ ಕೇಂದ್ರಬಿಂದುವಾಗಿತ್ತು.
ಇನ್ನೂ ಯಡೋಗಾ, ಮುರ್ಕವಾಡ, ತೇರಗಾಂವ ಹಾಗೂ ಬಿದ್ರೋಳ್ಳಿ ಗ್ರಾಮಗಳಲ್ಲಿಯೂ ದೌಡ 3ನೇ ದಿನ ಪೂರೈಸಿದೆ.
Leave a Comment