ಹಳಿಯಾಳ : ಧರ್ಮಜಾಗೃತಿ-ರಾಷ್ಟ್ರ ಪ್ರೇಮದ ಜಾಗರಣೆಗಾಗಿ ಕಳೆದ 7 ವರ್ಷಗಳಿಂದ ನವರಾತ್ರಿ ಉತ್ಸವದ ಸಂದರ್ಭದಲ್ಲಿ 9 ದಿನಗಳ ಕಾಲ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದುರ್ಗಾದೌಡ-ಧಾರ್ಮಿಕ ನಡಿಗೆ ಕಾರ್ಯಕ್ರಮದಿಂದ ಪ್ರೇರÀಣೆಗೊಂಡ ಕೆಲವು ಪ್ರಮುಖ ಗ್ರಾಮಗಳ ಜನರು, ತಮ್ಮ ಹಳ್ಳಿಗಳಲ್ಲೂ ದುರ್ಗಾದೌಡ ಪ್ರಾರಂಭಿಸಿದ್ದು ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ದೌಡ ನಡೆಸುತ್ತಿದ್ದಾರೆ.
ತಾಲೂಕಿನ ಪ್ರಮುಖ ಗ್ರಾಮಗಳಾದ ಯಡೋಗಾ, ತೇರಗಾಂವ ಹಾಗೂ ಮುರ್ಕವಾಡ ಗ್ರಾಮಗಳಲ್ಲಿ ದುರ್ಗಾದೌಡ ಪ್ರಾರಂಭಿಸಲಾಗಿದ್ದು ಪ್ರತಿದಿನ ಬೆಳಗಿನ ಜಾವ ದೌಡ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಗ್ರಾಮಾಂತರ ಭಾಗದ ಜನರು ಹಳಿಯಾಳ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಭಾನುವಾರಕ್ಕೆ ದೌಡ 5ದಿನ ಪೂರೈಸಿದೆ.
ಮುಂದಿನ ವರ್ಷದಿಂದ ಇನ್ನೂ 5 ಗ್ರಾಮಗಳಲ್ಲಿ ಈ ದುರ್ಗಾದೌಡಗೆ ಚಾಲನೆ ನೀಡಲಾಗುವುದು ಎಂದು ದುರ್ಗಾದೌಡ ಸ್ಥಾಪಕ ಸಂಘಟನೆ ಶಿವಪ್ರತಿಷ್ಠಾನದ ಪ್ರಮುಖರು ಮಾಧ್ಯಮಗಳಿಗೆ ತಿಳಿಸಿದರು. ಇನ್ನೂ ಹಳಿಯಾಳ ಪಟ್ಟಣದಲ್ಲಿ ನಡೆಯುತ್ತಿರುವ ದೌಡಗೆ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗುತ್ತಿದ್ದು ಪ್ರತಿದಿನ 6500ಕ್ಕೂ ಅಧಿಕ ಜನರು ಧಾರ್ಮಿಕ ನಡಿಗೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಪ್ರತಿದಿನ 50 ಕ್ಕೂ ಅಧಿಕ ಮಕ್ಕಳು ವಿವಿಧ ಛದ್ಮವೇಷಗಳಲ್ಲಿ ಕಂಗೋಳಿಸಿ ದೌಡನ ಆಕರ್ಷಣೆ ಹೆಚ್ಚಿಸುತ್ತಿದ್ದು ಅವರೆಲ್ಲರಿಗೂ ಶಿವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಅಭಿನಂದನೆ ಕೂಡ ಸಲ್ಲಿಸಲಾಗಿದೆ.
ಮಹಾರಾಷ್ಟ್ರ ರಾಜ್ಯ ಹಾಗೂ ಪಕ್ಕದ ಬೆಳಗಾವಿ, ಖಾನಾಪೂರಗಳನ್ನು ಹೊರತು ಪಡಿಸಿದರೇ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾತ್ರವೇ ಆಚರಿಸಲ್ಪಡುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಈಗಾಗಲೇ ಆಯಾ ಭಾಗದ ಜನರು ದುರ್ಗಾದೌಡನ್ನು ಸ್ವಾಗತಿಸಲು ತಮ್ಮ ಬಡಾವಣೆಗಳಲ್ಲಿ ವಿಶೇಷ ಅಲಂಕಾರ, ಭಗವಾಧ್ವಜಗಳಿಂದ ಕೇಸರಿ ವಾತಾವರಣ ಹಾಗೂ ರಸ್ತೆಗಳ ತುಂಬೆಲ್ಲ ಬಣ್ಣ-ಬಣ್ಣದ ದೊಡ್ಡ ರಂಗವಲ್ಲಿಗಳ ಚಿತ್ತಾರದಿಂದ ಆಕರ್ಷಕ ಕಾಣುವಂತೆ ಶೃಂಗರಿಸುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ವೀರ ವನಿತೆಯರು, ಪುರುಷರ ಛದ್ಮವೇಷ ತೊಡಿಸುವುದು. ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯದಲ್ಲಿ ದೇವತೆಗಳ, ವೀರ ಪುರುಷರು, ವನಿತೆಯರು, ಕ್ರಾಂತಿಕಾರಿಗಳ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸುವ ಮೂಲಕ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ.
ಭಾನುವಾರ ಪಟ್ಟಣದ ಕಸಬಾಗಲ್ಲಿಯ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ದೌಡ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ವೀರಕ್ತಮಠಕ್ಕೆ ತಲುಪಿದ್ದು ಸೋಮವಾರ ದಿ.15ರಂದು ಇಲ್ಲಿಂದ ದೌಡ ಆರಂಭವಾಗಲಿದ್ದು ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನಕ್ಕೆ ತಲುಪಿಲಿದೆ ಹಾಗೂ ದಿ.18ಕ್ಕೆ ದೌಡ ಮುಕ್ತಾಯವಾಗಲಿದೆ.
Leave a Comment