ಹೊನ್ನಾವರ: ತಾಲೂಕಿನ ವಿವಿಧ ಭಾಗಗಳಲ್ಲಿ ಶುಕ್ರವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮತ್ತೆ ಮಳೆಯಾಗಿದ್ದು, ಅನಿರೀಕ್ಷಿತ ಮಳೆಯಿಂದಾಗಿ ಭತ್ತದ ಕಟಾವಿಗೆ ಮುಂದಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಂಗಳವಾರ ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಳೆಯಾಗಿದ್ದರಿಂದ ಕಂಗಾಲಾದ ರೈತರು ಭತ್ತದ ಕಟಾವಿಗೆ ಹೆಂದೇಟು ಹಾಕಿದ್ದರು. ಬುಧವಾರದಿಂದ ಶುಕ್ರವಾರದ ಮಧ್ಯಾಹ್ನದ ವರೆಗೆ ಮಳೆಯ ಕ್ಷಣಗಳು ಕಂಡುಬರದೇ ಇರುವುದರಿಂದ ರೈತರು ಎರಡು ದಿನಗಳ ಕಾಲ ನಿರಂತರವಾಗಿ ಭತ್ತದ ಕಟಾವು ಮಾಡಿ ಪೂರ್ಣಗೊಳಿಸುವ ಹಂತಕ್ಕೆ ತಲುಪಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಗುಡುಗು ಸಹಿತ 2 ತಾಸು ಮಳೆಯಾಗಿದ್ದು, ರೈತರ 3-4 ಭತ್ತದ ಗೊಣಬೆಗಳು ಸಂಪೂರ್ಣ ಮಳೆ ನೀರಿಗೆ ಸಿಲುಕಿ ಹಾನಿಯಾಗಿದೆ. ತಾಲೂಕಿನ ಅನೇಕ ರೈತರು ಮಳೆಯಾಗುವ ಯಾವುದೇ ಸೂಚನೆ ಇರುವುದರಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುರುವಾರ ಕೆಲ ರೈತರು ಭತ್ತವನ್ನು ಗೊಣಬೆ ಹಾಕಿ ರಕ್ಷಿಸಿದ್ದಾರೆ. ಬೆಳಿಗ್ಗೆ ನೀಲಿ ಆಕಾಶದಿಂದ ಕೂಡಿದ ಬಿಸಿಲಿನ ವಾತಾವರಣದಿಂದಾಗಿ ಕಟಾವು ಕಾರ್ಯವನ್ನು ಚುರುಕುಗೊಳಿಸಿದ್ದರು. ಅನಿರೀಕ್ಷಿತ ಮಳೆಯಿಂದ ಭತ್ತದ ತೆನೆ ಮತ್ತು ಪೈರುಗಳು ಮಳೆ ನೀರಿಗೆ ಸಿಲುಕಿದ್ದರಿಂದ ರೈತರು ಇನ್ನಷ್ಟು ಕಂಗಾಲಾಗಿದ್ದಾರೆ. ಎರಡು ದಿನ ಬಿಡುವಿದ್ದರಿಂದ ರೈತರು 1-2 ಎಕರೆಯಾಗುವಷ್ಟು ಭತ್ತದ ಕಟಾವು ಮಾಡಿದ್ದಾರೆ. ಆಗಾಗ ಮಧ್ಯಂತರದಲ್ಲಿ ಮಳೆಯಾಗುವುದನ್ನು ಕಂಡ ರೈತರು ಕಟಾವಿಗೆ ದೇವರ ಮೊರೆ ಹೋಗಿರುವುದು ಕೇಳಿಬಂದಿದೆ.
Leave a Comment