ವಾಲ್ಮೀಕಿಯ ನಡೆದ ದಾರಿಯಲ್ಲಿ ಇಂದಿನ ಯುವ ಪಿಳಿಗೆಯು ನಡೆದಾಗ ಸಮಾಜದಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯ. ಸಮಾಜದ ಅಭಿವೃದ್ದಿಗೆ ಕೇವಲ ಜಯಂತಿಯ ಆಚರಣೆಯಿಂದ ಪ್ರಯೋಜನವಿಲ್ಲ ಆದರೆ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಸಮುದಾಯದವರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ನಿವೃತ್ತ ಉಪನ್ಯಾಸಕರಾದ ಡಾ. ಜಿ.ಪಿ.ಪಾಠಣಕರ್ ಅಭಿಪ್ರಾಯ ಪಟ್ಟರು.
ತಾಲೂಕ ಆಡಳಿತ, ತಾಲೂಕ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣಿಯು ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ ಶೃದ್ಧಾ ಭಕ್ತಿಯಿಂದ ನಡೆಯಿತು. .
ಗಣ್ಯರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧಾರ್ಮಿಕ ವಿಧಿ ವಿಧಾನದಿಂದ ಪೂಜೆ ಸಲ್ಲಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ ಅಧ್ಯಕ್ಷೆ ರಾಜಶ್ರೀ ನಾಯ್ಕ ದೀಪ ಬೆಳಗುವ ಮೂಲಕ ಚಾಲನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕರಾದ ಡಾ.ಜಿ.ಪಿ.ಪಾಠಣಕರ್ ಮಾತನಾಡಿ ವಾಲ್ಮೀಖಯ ಜೀವನ ವೃತ್ತಾಂತವನ್ನು ವಿವರಿಸಿ ಮಹಾಕಾವ್ಯವಾದ ರಾಮಯಣದ ಸೃಷ್ಟಿಯಲ್ಲಿ 27 ಸಾವಿರ ಶ್ಲೋಕ 7 ಖಾಂಡಗಳನ್ನು ರಚಿಸಿದರು. ಸರ್ಕಾರ ಹಲವಾರು ಜಯಂತಿಗಳನ್ನು ಆಚರಿಸುತ್ತದೆ. ಆದರೆ ಯಾವುದೇ ಆಚರಣೆಗಳು ಅರ್ಥಪೂರ್ಣವಾಗಬೇಕು ಎಂದರೆ ಮಹಾತ್ಮರು ಬಿಟ್ಟುಹೋದ ಆದರ್ಶಗಳು ನಮಗೆ ಪ್ರೇರಣೆಯಾಗಬೇಕು ಆ ಮೂಲಕ ನಮ್ಮಲ್ಲಿ ರಚನಾತ್ಮಕ ಬದಲಾವಣೆಗೆ ಕಾರಣವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿಕ್ಷಕರಾದ ಶ್ರೀಕಾಂತ ಅವರು ಮಾತನಾಡಿ ಹಣ ಅಧಿಕಾರ ತೋಳು ಬಲದಿಂದ ಏನನ್ನೆ ಸಾಧಿಸಿದರೂ ನಾವು ಮಾಡಿದ ಸತ್ಕಾರ್ಯಗಳು ಸದಾ ಕಾಲ ನೆನೆದು ಗೌರವಿಸುತ್ತಾರೆ. ವಿಶಾಲತ್ವ ಬೆಳೆದಾಗ ವ್ಯಕ್ತಿತ್ವ ಅರಳುತ್ತದೆ. ವಿದ್ಯೆಯನ್ನು ಕಲಿತಿದ್ದರೂ ಕಲಿತ ವಿದ್ಯೆಯನ್ನು ಸರಿಯಾದ ಉದ್ದೇಶಗಳಿಗೆ ಬಳಸುವುದಕ್ಕೆ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ ರಾಮ ರಾಜನ ಮಗನಾಗಿದ್ದರೂ ದೇವರೆಂದು ಪೂಜಿಸುವುದಕ್ಕೆ ಕಾರಣ ರಾಮ ನಡೆದ ಆದರ್ಶದ ಹಾದಿ ಹಾಗೆಯೇ ನಮ್ಮ ಜೀವನದ ಮೂಲ ಹೇಗೆ ಇದ್ದರೂ ಸಂಸ್ಕಾರವನ್ನು ಗಳಿಸಿಕೊಂಡರೆ ಉತ್ತಮ ಗೌರವಾದರಗಳನ್ನು ಪಡೆಯುವುದು ಸಾಧ್ಯ ಎನ್ನುವ ಸಾರಾಂಶವೇ ಮಹರ್ಷಿ ವಾಲ್ಮೀಕಿ ಅವರ ಜೀವನದ ತಿರುಳಾಗಿದೆ. ಹಾಗಾಗಿ ಬೇಡನೊಬ್ಬ ಮಹರ್ಷಿಯಾಗಿ ರಾಮಾಯಣದಂತ ಮಹಾಕಾವ್ಯದ ಉಗಮಕ್ಕೆ ಕಾರಣನಾಗುತ್ತಾನೆ ಎಂದರೆ ಎಲ್ಲರಲ್ಲಿಯೂ ಸಾಧಕನಿದ್ದಾನೆ ಎನ್ನುವುದನ್ನು ಸಾರಿ ಹೇಳುತ್ತದೆ ಎಂದರು. ವೇದಿಕೆಯಲ್ಲಿ ತಹಶೀಲ್ದಾರ ವಿ.ಆರ್.ಗೌಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭಾರತಿ ಆಚಾರ್ಯ, ಸರ್ಕಾರಿ.ನೌಕರರ ಸಂಘದ ಅಧ್ಯಕ್ಷರಾದ ಆರ್.ಪಿ.ಭಟ್, ಪಟ್ಟಣ .ಪಂಚಾಯತಿ ಸದಸ್ಯ ತುಳಸೀದಾಸ್ ಪುಲ್ಕರ್ ಮುಂತಾದವರು ಉಪಸ್ಥಿತರಿದ್ದರು. ಯುವ ಜನಸೇವಾ ಕ್ರೀಡಾದಿಕಾರಿ ಸುದೇಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment