ಹೊನ್ನಾವರ: ಕನ್ನಡ ಭಾಷೆ ಮತ್ತು ಕನ್ನಡನಾಡಿನ ಅಖಂಡತೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ಉದಯಕುಮಾರ ಕಾನಳ್ಳಿ ಹೇಳಿದರು.
ತಾಲೂಕಿನ ಸರಳಗಿಯಲ್ಲಿ ಕದಂಬ ಸೈನ್ಯ ವತಿಯಿಂದ ನಡೆದ 7 ನೇ ವಾರ್ಷಿಕೊತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ರಾಜ್ಯ ಇನ್ನು ಅಖಂಡ ಕರ್ನಾಟಕವನ್ನು ಹೊಂದಿಲ್ಲ, 262 ಹಳ್ಳಿಗಳು ರಾಜ್ಯದಿಂದ ಹೊರಗಿದೆ. ಅದನ್ನು ಸೇರಿಸುವ ಮೂಲಕ ಸಮಗ್ರ ಕರ್ನಾಟಕದ ಕನಸು ನನಸು ಮಾಡಲು ನಾವು ಶ್ರಮಿಸಬೇಕಿದೆ. ಕನ್ನಡನಾಡು ಮತ್ತು ಭಾಷೆ ಹಲವು ಸಮಸ್ಯೆ ಅನುಭವಿಸುತ್ತಿದ್ದು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನಾಡಧ್ವಜದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಇನ್ನು ಹೆಣಗಾಡುತ್ತಿದೆ. ಇದನ್ನೆಲ್ಲ ನಿವಾರಿಸಲು ಸಂಘಟನೆಯು ಗ್ರಾಮ ಮಟ್ಟದಲ್ಲಿ ತನ್ನ ಶಕ್ತಿ ವೃದ್ದಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಮಾತನಾಡಿ `ಕರ್ನಾಟಕದಲ್ಲಿ ಅನ್ಯಭಾಷಿಕರ ಪ್ರಭಾವ ಹೆಚ್ಚುತ್ತಿದೆ. ಇದರಿಂದ ಕನ್ನಡದ ಅಸ್ಥಿತ್ವಕ್ಕೆ ಧಕ್ಕೆಯಾಗುತ್ತಿದೆ. ಈ ರಾಜ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಕನ್ನಡ ಭಾಷೆಯ ಅಳವಡಿಕೆಯಾಗಬೇಕು. ಕದಂಬ ಅರಸರು ಆಳ್ವಿಕೆ ನಡೆಸಿದ ಜಿಲ್ಲೆಯಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ರಾಜ್ಯಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್, ನಿವೃತ್ತ ಯೋಧ ಪ್ರಕಾಶ ನಾಯ್ಕ, ಸರಳಗಿ ಗಣೆಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಉಪ್ಪಾರ, ಯಕ್ಷಗಾನ ಕಲಾವಿದ ರತ್ನಾಕರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯೋಗಿಶ ರಾಯ್ಕರ್ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಕನ್ನಡಪರ ಕಾರ್ಯಕ್ರಮಗಳ ಅನಿವಾರ್ಯತೆಯಿದೆ. ಸರಳಗಿಯಲ್ಲಿ ಸಂಘಟನೆಯ ಮೂಲಕ ಕನ್ನಡಪರ ಮತ್ತು ಜನಪರ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.
ಗ್ರಾಮ ಪಂಚಾಯತ ಸದಸ್ಯರಾದ ಗೋವಿಂದ ನಾಯ್ಕ, ಮಂಜುನಾಥ ನಾಯ್ಕ, ವಿನೋದ ನಾಯ್ಕ ಮಾವಿನಹೊಳೆ, ಪ್ರಶಾಂತ ನಾಯ್ಕ, ಸಂಗೀತಾ ಉಪ್ಪಾರ, ಶಾರದಾ ಉಪ್ಪಾರ, ಗಜಾನನ ಉಪ್ಪಾರ, ಸಂತೋಷ ನಾಯ್ಕ, ಮಹೇಶ ನಾಯ್ಕ, ಸಮೀರ ಖಾನ್ ಸುಲೇಮಾನ್ ಖಾನ್, ಕದಂಬ ಸೈನ್ಯದ ಗಣಪತಿ ನಾಯ್ಕ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪುರಂದರ ನಾಯ್ಕ ಸ್ವಾಗತಿಸಿದರು. ಆರ್.ಬಿ.ಶೆಟ್ಟಿ ನಿರ್ವಹಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
Leave a Comment