ಹಳಿಯಾಳ:- ದೇಶದ ಬೆನ್ನೆಲುಬಾಗಿರುವ ರೈತ ಇಂದು ಪ್ರಕೃತೀಯ ಮುನಿಸಿನಿಂದ ತೊಂದರೆಯಲ್ಲಿದ್ದಾನೆ. ನಿರಂತರವಾಗಿ ದುಡಿಮೆಗಾರರಾಗಿ ಕೃಷಿಕರ ಜೀವನ ತೀರಾ ಕಷ್ಟದಾಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ ರೈತರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ ಅವರಿಗೂ ಎಲ್ಲರೂ ಗೌರವ ನೀಡಬೇಕೆಂದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿಯ ಸಭಾ ಭವನದಲ್ಲಿ ಉ.ಕ. ಜಿಲ್ಲಾ ಪಂಚಾಯತ, ಹಳಿಯಾಳದ ತಾಪಂ, ತಾಲುಕಾ ಆಡಳಿತ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಆತ್ಮ ಯೋಜನೆ, ತಾಲುಕಾ ಕೃಷಿಕ ಸಮಾಜ, ಎ.ಪಿ.ಎಂ.ಸಿ., ಇ.ಐ.ಡಿ. ಪ್ಯಾರಿ ಶುಗರ್ಸ್ ಹಾಗೂ ತಾಲೂಕಿನ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ರೈತ ದಿನಾಚರಣೆ ಅಂಗವಾಗಿ ಕಿಸಾನ್ಗೋಷ್ಠಿ, ಕೃಷಿ ವಿಚಾರ ಸಂಕಿರಣ ಹಾಗೂ ಮಾಹಿತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರ ಸಂಕಷ್ಟವನ್ನು ಅರಿತಿರುವ ಕಾರಣ ತಾವು ಕೆಡಿಸಿಸಿ ಬ್ಯಾಂಕ್ನಿಂದ ಸ್ಥಳೀಯ ರೈತರ ಸೇವಾ ಸೊಸೈಟಿಗಳ ಮೂಲಕ ರೈತರಿಗೆ ಸರ್ಕಾರದ ನೆರವಿನೊಂದಿಗೆ ಸಾಲ-ಸೌಲಭ್ಯ ಒದಗಿಸುತ್ತಿದ್ದೇವೆ. ಪ್ರಾಕೃತಿಕ ವಿಕೋಪದಿಂದ ಬೆಳೆನಷ್ಟ ಅನುಭವಿಸುವ ರೈತರಿಗೆ ಸರ್ಕಾರದಿಂದ ಪರಿಹಾರವನ್ನು ಕೊಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ಎಂದ ಅವರು ಕೃಷಿಗಾಗಿ ಸರ್ಕಾರ ಹಾಗೂ ಬ್ಯಾಂಕಗಳಿಂದ ಪ್ರಯೋಜನ ಪಡೆಯುವ ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಪ್ರಗತಿಪರ ರೈತರಿಗೆ ಸನ್ಮಾನ:-
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೇಷ್ಮೆಯಲ್ಲಿ-ಆಲೂರು ಗ್ರಾಮದ ಪರಶುರಾಮ ಹರಿಜನ, ಹೈನುಗಾರಿಕೆ-ಹವಗಿಯ ಸಂತೋಷ ಸಂತರ, ಸಮಗ್ರ ಕೃಷಿ ಪದ್ದತಿ-ಚಿಬ್ಬಲಗೇರಿಯ ರಾಮಪ್ಪಾ ಚೌಗಲೆ, ಸಾವಯವ ಕೃಷಿ- ಮಂಗಳವಾಡ ಗ್ರಾಮದ ಮಲ್ಲೀಕಾರ್ಜುನ ವಿ ಅಷ್ಟೇಕರ ಹಾಗೂ ತೋಟಗಾರಿಕೆಯಲ್ಲಿ ತೇರಗಾಂವ ಗ್ರಾಮದ ಚೆನ್ನಬಸಪ್ಪಾ ಪರಪ್ಪಾ ಕಾಜಗಾರ 5 ರೈತರನ್ನು ಪ್ರಗತಿಪರ ರೈತರೆಂದು ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು.
ಕಿಸಾನ್ಗೋಷ್ಠಿ-ವಿಚಾರ ಸಂಕೀರಣ-ಸಂವಾದ:- “ಸಾವಯವ ಬೇಸಾಯ ಮತ್ತು ಸಮಗ್ರ ಕೃಷಿ” ಪದ್ದತಿಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ತಜ್ಞ ಆರ್.ಬಿ. ಸುತಗಟ್ಟಿ, “ ಬಾಳೆ ಬೇಸಾಯ ಮತ್ತು ಹನಿ ನೀರಾವರಿ ಅಳವಡಿಕೆ”ಯ ಬಗ್ಗೆ ಕಲಘಟಗಿಯ ಪ್ರಗತಿಪರ ರೈತ ಎಸ್.ಬಿ. ಪಾಟೀಲ ಹಾಗೂ “ ಸಮಗ್ರ ಕೃಷಿಯಲ್ಲಿ ಪಶು-ಪಾಲನೆ ಮಹತ್ವ ಮತ್ತು ಹೈನುಗಾರಿಕೆ” ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧಾರವಾಡ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವಿಶಾಲ ಕುಲಕಣ ್ ರೈತರಿಗೆ ಉಪನ್ಯಾಸದ ಮೂಲಕ ಸಂಪೂರ್ಣ ಮಾರ್ಗದರ್ಶನ ನೀಡಿದರಲ್ಲದೇ “ಸಾವಯವ ಬೇಸಾಯ ಮತ್ತು ಸಮಗ್ರ ಕೃಷಿ ಪದ್ದತಿ ಅಳವಡಿಕೆ ಕುರಿತು ರೈತರೊಂದಿಗೆ ಸಂವಾದ’’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವೇದಿಕೆಯ ಮೇಲೆ ಕೃಷಿಕ ಸಮಾಜದ ಪ್ರಮುಖರಾದ ಶಂಕರ ಕಾಜಗಾರ, ಅಶೋಕ ಮೇಟಿ, ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ತಾಪಂ ಅಧಿಕಾರಿ ಮಹೇಶ ಕುರಿಂiÀiÀವರ್ ಇತರರು ಇದ್ದರು. ಆತ್ಮಾ ಯೋಜನೆಯ ಸುಧಾಕರ .ಎಮ್.ಸಿ, ಕಾರ್ಯಕ್ರಮ ನಿರ್ವಹಿಸಿದರು.
Leave a Comment