ಹಳಿಯಾಳ:- ಶಿರಸಿಯ ಅರಣ್ಯ ಸಂಚಾರಿದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸಾಗವಾಣ ನಗ, ಎಳೆ ಹಾಗೂ ತುಂಡುಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿರುವ ಘಟನೆ ತಾಲೂಕಿನ ಸಾಂಬ್ರಾಣ ವಲಯದ ಗುಂಡೊಳ್ಳಿ ಹದ್ದಿನ ಕಾಳಗಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಾಳಗಿನಕೊಪ್ಪ ಗ್ರಾಮ ರಹವಾಸಿ ಉಮೇಶ ದೇವೆಂದ್ರ ದೊಡಗೌಡ ಬಂಧಿತ ಆರೋಫಿಯಾಗಿದ್ದಾನೆ. ಇತನಿಂದ ಸಾಗವಾಣ ನಗಗಳು 19, 0.642ಕ್ಯೂಬಿಕ್ ಮೀಟರ್, 8 ಎಳೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಲಾಖೆಯ ಅಂದಾಜು ಮೌಲ್ಯ ಸುಮಾರು 1 ಲಕ್ಷ ರೂ. ಆಗಿದ್ದರೇ ಮಾರುಕಟ್ಟೆ ಮೌಲ್ಯ ಲಕ್ಷಕ್ಕೂ ಅಧಿಕ ಎನ್ನಲಾಗಿದೆ.
ತಾಲೂಕಿನ ಕುಂಬಾರಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ಮರದ ತುಂಡುಗಳನ್ನು ಮಾರ್ಪಾಟು ಮಾಡಿ ಅಲ್ಲಿಂದ ಕಾಳಗಿನಕೊಪ್ಪ ಗ್ರಾಮದ ಉಮೇಶ ಹೊಲದಲ್ಲಿಯ ಕೊಟ್ಟಿಗೆಯಲ್ಲಿ ಇವುಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಅರಣ್ಯ ಸಂಚಾರಿ ದಳ ಶಿರಸಿಯ ಡಿಎಫ್ಓ ಬಾಳಕೃಷ್ಣ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಓ ಜಿಟಿ ರೇವಣಕರ, ಇಲಿಯಾಸ ಶೇಖ, ರಾಜು ಪೂಜಾರ ಇತರ ಸಿಬ್ಬಂದಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆಗೆ ಆಗ್ರಹ:- ಆದರೇ ಈ ದಾಳಿಯ ಬಗ್ಗೆ ಜನರ ಮಾಹಿತಿಯಂತೆ ಈ ವಲಯದ ಓರ್ವ ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಈ ಅರಣ್ಯ ಕಳ್ಳನೊಂದಿಗೆ ಶಾಮಿಲಾಗಿದ್ದಾನೆ. ಮರ ಕಟಾವು ಹಾಗೂ ಅಕ್ರಮವಾಗಿ ಸಾಗಾಣೆ ಮಾಡುವಲ್ಲಿ ಆತನ ಕೈವಾಡವಿದ್ದು ಈ ಬಗ್ಗೆ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕಾಳಗಿನಕೊಪ್ಪ, ಸಾಂಬ್ರಾಣ , ಕುಂಬಾರಕೊಪ್ಪ, ಗುಂಡೊಳ್ಳಿ ಗ್ರಾಮದ ಜನತೆ ಅರಣ್ಯ ಇಲಾಖೆಯ ಸಾಂಬ್ರಾಣ ವಲಯ ಕಚೇರಿಗೆ ಭೇಟಿ ನೀಡಿ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ಅವರನ್ನು ಆಗ್ರಹಿಸಿದ್ದಾರೆ.
ತನಿಖೆ ನಡೆಯುತ್ತಿದೇ ದೃಢ ಪಟ್ಟರೇ ಕ್ರಮ :- ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿ ದೀಪಕ ಅಕ್ರಮ ಕಟ್ಟಿಗೆ ಹಾಗೂ ಆರೋಪಿಯನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಇಲಾಖೆಯ ಗುಂಡೊಳ್ಳಿ ಹದ್ದಿನ ಫಾರೆಸ್ಟರ್ ಉಮೇಶ ಎನ್ನುವವರ ಬಗ್ಗೆ ಜನರಿಂದ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಎಲ್ಲಾ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಒಂದಾನುವೇಳೆ ಇಲಾಖೆಯ ಸಿಬ್ಬಂದಿ ಶಾಮಿಲಾಗಿದ್ದು ದೃಢಪಟ್ಟರೇ ಕಾನೂನು ರೀತಿ ಪ್ರಕರಣ ದಾಖಲಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
Leave a Comment