ಸಿದ್ದಾಪುರ (ಉ.ಕ) ಫೆ.9: ತಾಲೂಕಿನಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ, ಗಾಂಜಾ, ಓಸಿ ಮಟಕಾ, ಇಸ್ಪೀಟ್ ಹಾವಳಿ ಹತೋಟಿಗೆ ತಂದು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಹೆಸರು ಗಳಿಸಿದ್ದ ಪಿಎಸೈ ನಿತ್ಯಾನಂದ ಗೌಡ ತಮ್ಮ ಮೇಲೆ ಕೆಲವರು ಮಾಡುತ್ತಿರುವ ಆರೋಪದಿಂದ ಬೇಸರಗೊಂಡು ವರ್ಗಾವಣೆಗೆ ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಲವಾರು ದಿನಗಳಿಂದ ಕೆಲವು ರಾಜಕೀಯ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಯ ಮುಖಂಡರು ಪಿಎಸೈ ನಿತ್ಯಾನಂದ ಗೌಡ ತಮಗೆ ಗೌರವ ನೀಡುತ್ತಿಲ್ಲವೆಂದು ಆರೋಪಿಸಿದ್ದರು. ಹಾಗೂ ದಿನಾಂಕ 08/02/2019ರಂದು ಪಟ್ಟಣದ ಬಾಲಭವನದಲ್ಲಿ ಸಭೆ ಸೇರಿದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆ ಸೇರಿ ಪಿಎಸೈ ವರ್ಗಾವಣೆ ಮಾಡಬೇಕೆಂದು ಇಲ್ಲವಾದಲ್ಲಿ ಪಕ್ಷಾತೀತವಾಗಿ ಫೆ.14ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ಇತ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಲಾಟೆಯನ್ನು ಮಾಡಿ ನಿರಫರಾಧಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಗುರಿ ಕಾಯಿ ಆಟ ಆಡುವುದಕ್ಕೂ ಬಿಟ್ಟಿಲ್ಲ. ಪುಂಡಿ ದೀಪ ಬೆಳಗಿಸುವುದಕ್ಕೂ ಆಕ್ಷೇಪಿಸಿದ್ದಾರೆ. ಕ್ರಿಕೆಟ್ ಆಟವನ್ನು ನೋಡುತ್ತಿದ್ದವರನ್ನು ಠಾಣೆಗೆ ಕರೆದು ದುಡ್ಡು ವಸೂಲಿ ಮಾಡಿದ್ದಾರೆ. ಪ್ರತಿ ಹಂತದಲ್ಲಿ ಭ್ರಷ್ಟಾಚಾರ ಮಾಡುತ್ತ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿದ್ದಾರೆ. ಇವರನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು. ಇವರ ವಿರುದ್ಧ ಕ್ರಮವಾಗಬೇಕು ಎಂದಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ ನಾಗರಾಜ ಮಾತನಾಡಿ ಈ ಪಿಎಸೈ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬದಲು ಅಶಾಂತಿಯನ್ನು ಉಂಟು ಮಾಡುತ್ತಿದ್ದಾರೆ. ಠಾಣೆಗೆ ಬಂದವರಿಗೆ ಹೊಡೆಯುವ, ಬೈಯ್ಯುವ ಕೆಲಸ ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಇರುವಾಗ ತಾನು ಮಾಡಿರುವುದೇ ಸರಿ ಎಂದು ವರ್ತಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಇವರ ಅಮಾನತ್ ಆಗಬೇಕೆಂದು ಆಗ್ರಹಿಸಿದ್ದರು.
ಪಿಎಸೈ ಪರವಾಗಿ ನಿಂತ ಮಹಿಳಾ ಸಂಘಗಳು
ಒಂದು ಕಡೆ ಪಿಎಸೈ ವಿರುದ್ಧ ಕೆಲವರು ಆರೋಪ ಮಾಡುತ್ತಿದ್ದರೆ ಮಹಿಳಾ ಸಂಘಗಳು ಪಿಎಸೈ ಪರವಾಗಿ ನಿಂತುಕೊಂಡಿದ್ದು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿರುವ ಈ ಅಧಿಕಾರಿಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿದ್ದರು. ಅಂಕೋಲಾದಲ್ಲಿ ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷೆ ಶೋಭಾ ನಾಯ್ಕ ಹಾಗೂ ಸಿದ್ದಾಪುರ ತಾಲೂಕಾಧ್ಯಕ್ಷೆ ರೇಣುಕಾ ಜಿ. ನಾಯ್ಕ ಮುಂತಾದವರು ಪಿಎಸೈ ಸಿದ್ದಾಪುರದಲ್ಲಿ ಮುಂದುವರಿಯಬೇಕೆಂದು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷೆ ಶೋಭಾ ನಾಯ್ಕ ಮಾತನಾಡಿ ಇತ್ತೀಚಿಗೆ ಸಿದ್ದಾಪುರದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಬಾಥ್ರೂಮ್ನಲ್ಲಿರುವಾಗ ಕೈಹಿಡಿದು ಎಳೆದ ಘಟನೆ ನಡೆದಿದ್ದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲಿಸರು ಆರೋಪಿಯನ್ನ ವಿಚಾರಣೆ ಮಾಡಿದಾಗ ಕೆಲವು ರಾಜಕೀಯ ಶಕ್ತಿಗಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಪಿಎಸೈ ಮೇಲೆಯೆ ದೂರು ದಾಖಲಿಸಿ ಮತ್ತು ಆರೋಪಿಯನ್ನು ರಕ್ಷಣೆ ಮಾಡುವ ಹುನ್ನಾರ ನಡೆಸುತ್ತಿರುವದು ಖಂಡನೀಯ ಎಂದು ಹೇಳಿದ್ದರು.
ಸಿದ್ದಾಪುರ ತಾಲೂಕಾಧ್ಯಕ್ಷೆ ರೇಣುಕಾ ಜಿ. ನಾಯ್ಕ ಮಾತನಾಡಿ ಸಿದ್ದಾಪುರ ತಾಲೂಕಿನಲ್ಲಿ ಈ ಹಿಂದೆ ವ್ಯಾಪಕವಾಗಿ ಅಕ್ರಮ ಸಾರಾಯಿದಂಧೆ ನಡೆಯುತ್ತಿತ್ತು. ಈ ಸಂಬಂಧ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸಿದ್ದಾಪುರ ಪೋಲೀಸ ಠಾಣೆಗೆ ಪಿಎಸೈ ಆಗಿ ನಿತ್ಯಾನಂದ ಗೌಡ ಅವರು ಬಂದ ನಂತರ ಮಹಿಳೆಯರ ಬೇಡಿಕೆಯ ಅನುಸಾರ ಅಕ್ರಮ ಸಾರಾಯಿ ಮಾರಾಟವನ್ನು ತಡೆದಿದ್ದಾರೆ. ತಾಲೂಕಿನಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು, ಯುವತಿಯರನ್ನು, ಮಹಿಳೆಯರನ್ನು ಚುಡಾಯಿಸುವ ಪುಂಡರನ್ನು ನಿಗ್ರಹಿಸಿದ್ದರು ಹಾಗೂ ಗಾಂಜಾ ಮಟಕಾದಂತ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿ ಮಹಿಳೆಯರು ನಿಟ್ಟುಸಿರು ಬಿಡುವಂತೆ ಮಾಡಿದ್ದರು. ಆದರೆ ಈಗ ಪಿಎಸೈ ನಿತ್ಯಾನಂದ ಗೌಡರ ಮೇಲೆ ಸುಳ್ಳು ಆರೋಪಗಳನ್ನ ಹೊರಿಸಿ ವರ್ಗಾವಣೆ ಮಾಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಎಸ್.ಪಿಯವರು ಪಿಎಸೈ ನಿತ್ಯಾನಂದ ಗೌಡ ವರ್ಗಾವಣೆ ಆಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದ್ದರು.
ಇದೀಗ ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಕೆಲವರು ಪಿಎಸೈ ವರ್ಗಾವಣೆ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದು ಕಂಡು ಬರುತ್ತಿದೆ. ಇದರಿಂದ ಬೇಸರಗೊಂಡ ಪಿಎಸೈ ನಿತ್ಯಾನಂದ ಗೌಡ ತಾವೇ ವರ್ಗಾವಣೆ ಮಾಡಿಕೊಂಡು ಹೋಗಲು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
Leave a Comment