ಹೊನ್ನಾವರ ತಾಲೂಕಿನ ಇಡಗುಂಜಿ ಕುಳಿಮನೆ ಸಮೀಪದ ಕಡಗುಟ್ಟ ಎನ್ನುವ ಪ್ರದೇಶಕ್ಕೆ ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ತೋಟದ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿಬಿದ್ದು ಸುತ್ತಮುತ್ತಲಿನವರಿಗೆ ಭಯ ಹುಟ್ಟಿಸಿ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗಾಯಗೊಳಿಸಿದ ಘಟನೆ ಸಂಭವಿಸಿದೆ.
ಕಡಗುಟ್ಟದ ಗಣಪಯ್ಯ ಗೌಡ ಎಂಬವರ ತೋಟಕ್ಕೆ ಅಳವಡಿಸಲಾದ ಬೇಲಿಯಲ್ಲಿ ಚಿರತೆಯೊಂದು ಸಿಲುಕಿರುವ ಸಂಗತಿ ತಿಳಿಯುತ್ತಲೇ ಭಯಭೀತರಾದ ಊರಿನ ಜನ ತಕ್ಷಣ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ. ಕುಂದಾಪುರದಿಂದ ಆಗಮಿಸಿದ ಅರಿವಳಿಕೆ ತಜ್ಞರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಬಂಧಿಯಾಗಿದ್ದ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ಮುಂದಾದಾಗ ಸುತ್ತಲು ಇರುವ ಸಾರ್ವಜನಿಕರರನ್ನು ಗಮನಿಒಸಿ ಭಯಗೊಂಡ ಚಿರತೆ ಒಮ್ಮೆಲೇ ನೆಗೆದಾಗ ಕಾಲಿಗೆ ಸುತ್ತಿಕೊಂಡಿದ್ದ ಉರುಳಿನಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದೆ.
ಈ ಸಂದರ್ಭದಲ್ಲಿ ಬಂಧನದಿಂದ ಬಿಡಿಸಲು ಮುಂದಾಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ವಾಹನ ಚಾಲಕ ಶೇಷು ಎನ್ನುವರು ಗಾಯಗೊಂಡಿದ್ದಾರೆ. ಸಿಬ್ಬಂದಿಯನ್ನು ಕೂಡಲೇ ಹೊನ್ನಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಾಣಾಪಾಯದಿಂದ ಪಾರಾದ ಚಿರತೆ ವಿಷಯ ಸುತ್ತಲಿನ ಹಳ್ಳಿಗಳ ಜನರಲ್ಲಿ ಭಯ ಆವರಿಸಿದ್ದು ಅರಣ್ಯ ಇಲಖೆಯವರು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದು ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಇಲಾಖೆಯ ಅಧಿಕಾರಿಗಳು ಸುತ್ತಮುತ್ತಲೂ ನಿಗಾ ಇರಿಸಲಾಗಿದೆ ಎಂದು ತಿಳಿದುಬಂದಿದೆ.
Leave a Comment