ಹಳಿಯಾಳ: ಪ್ರತಿಯೊಂದು ಧರ್ಮ-ಜಾತಿ-ಪಂಥ ಎಲ್ಲರನ್ನು ಒಗ್ಗೂಡಿಸಿಕೊಂಡು ನಡೆದರೇ ಮಾತ್ರ ಛತ್ರಪತಿ ಶಿವಾಜಿ ಮಹಾರಾಜರಂತೆ ಮಹಾನ್ ವ್ಯಕ್ತಿಯಾಗಲು ಸಾಧ್ಯವೆಂದು ಮುಸ್ಲಿಂ ಧರ್ಮಗುರು ಮುಫ್ತಿ ಫಯಾಜ ಅಹ್ಮದ ಖಾಸ್ಮಿ(ಇಟ್ಟಂಗಿವಾಲೆ) ಅಭಿಪ್ರಾಯಪಟ್ಟರು.
ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ವತಿಯಿಂದ ಇಲ್ಲಿಯ ಮರಾಠಾ ಭವನದಲ್ಲಿ ನಡೆದ ಶಿವಾಜಿ ಮಹಾರಾಜರ 392ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿವಾಜಿ ಮಹಾರಾಜರು ಆ ಕಾಲದಲ್ಲಿಯೇ ಎಲ್ಲರನ್ನು ಒಗ್ಗೂಡಿಸಿಕೊಂಡು ಪರಕೀಯರನ್ನು ಹಿಮ್ಮೆಟ್ಟಿಸಿ ದೇಶವನ್ನು ಕಟ್ಟಿದರು. ಅವರು ಇಸ್ಲಾಂ ಮತ್ತು ಮುಸ್ಲಿಂ ವಿರೋಧವಿದ್ದರು ಎಂದು ಕೆಲವರು ಇತಿಹಾಸವನ್ನು ತಿರುಚಿ ಹೇಳುವುದು ಸರಿಯಲ್ಲ. ಅವರ ಸೈನ್ಯದಲ್ಲಿ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಂ ಸಮಾಜದವರೇ ಅಧಿಕವಾಗಿದ್ದರು ಎಂದು ಹೇಳಿದ ಖಾಸ್ಮಿ ದ್ವೇಷದ ಮಾತುಗಳನ್ನು, ವೈರತ್ವವನ್ನು ಮರೆತು ಎಲ್ಲರೂ ಒಂದಾಗಿ ಬಾಳಬೇಕು, ದೇಶದ ಒಳಿತಿಗಾಗಿ ದುಡಿಯಬೇಕಿದೆ ಎಂದು ಕರೆ ನೀಡಿದರು.
ವಿಜಯಪೂರ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಶಿವಾಜಿ ಜಯಂತಿ ಕಾರ್ಯಕ್ರಮ ಉಧ್ಘಾಟಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಕುರಿತು ತಿಳಿಸಿದರು.
ಕ್ರೀಶ್ಚಿಯನ್ ಧರ್ಮಗುರು ಫಾ.ಜ್ಞಾನಪ್ರಕಾಶರಾವ್ ಮಾತನಾಡಿ ಶಿವಾಜಿ ಮಹಾರಾಜರಂತ ಮಹಾನ್ ದೇಶಭಕ್ತ ಎಲ್ಲರಿಗೂ ಆದರ್ಶವಾಗಿದ್ದಾರೆ. ದೇಶವನ್ನು ಪ್ರೀತಿಸುವವರಿದ್ದರೇ ಅಂತಹವರು ದೇಶಕ್ಕಾಗಿ ಏನನ್ನು ಮಾಡಲು ಯಾವ ತ್ಯಾಗಕ್ಕೂ ಸಿದ್ದರಿರುತ್ತಾರೆ ಆದ್ದರಿಂದ ದೇಶವನ್ನು, ತಾಯಿ ನಾಡನ್ನು ಪ್ರೀತಿಸುವಂತೆ ಕರೆ ನೀಡಿದರು.
ಮರಾಠಾ ಪರಿಷತ್ನ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ಅಪ್ರತಿಮ ದೇಶಭಕ್ತ ಶಿವಾಜಿ ಮಹಾರಾಜರು ಯಾವ ಒಂದು ಜಾತಿ-ಧರ್ಮಕ್ಕೆ ಸೀಮಿತರಲ್ಲ ಅವರು ಜಗತ್ತಿಗೆ ಆದರ್ಶ ಪುರುಷರಾಗಿದ್ದಾರೆ. ಕೇವಲ ಒಂದು ಸಾವಿರ ಸೈನಿಕರ ಬಲದೊಂದಿಗೆ 30ಸಾವಿರ ರಷ್ಯನ್ನರ ದೊಡ್ಡ ಸೈನ್ಯದೊಂದಿಗೆ ಹೊರಾಡಿ ಗೆದ್ದ ಶೀವಾಜಿ ಮಹಾರಾಜರ ವಿಜಯ ಪತಾಕೆಯು ಗಿನ್ನಿಸ್ ದಾಖಲೆ ಸೇರಿದೆ ಎಂದ ಘೊಟ್ನೇಕರ ಅವರ ಹೆಸರನ್ನು ರಾಜಕೀಯಕ್ಕಾಗಿ ಬಳಸಬಾರದೆಂದು ಅಭಿಪ್ರಾಯಪಟ್ಟರು.
ಮರಾಠಾ ಸಮುದಾಯ ಎಲ್ಲ ರಂಗಗಳಲ್ಲಿ ಹಿಂದೂಳಿದಿದ್ದು ಪ್ರವರ್ಗ 3ಬಿಯಿಂದ 2ಎಗೆ ಸೇರಿಸಲು ನಿರಂತರ ಹೋರಾಟ ನಡೆಸಲಾಗುತ್ತಿದೆ ಆದರೇ ಯಾವುದೇ ಸರ್ಕಾರಗಳು ಮರಾಠರ ಬೇಡಿಕೆಯನ್ನು ಈಡೇರಿಸುತ್ತಿಲ್ಲ ಎಂದ ಘೊಟ್ನೇಕರ ಸಮಾಜದ ಬೇಡಿಕೆ ಈಡೇರುವವರೆಗೆ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಹಿರಿಯರಾದ ಶ್ರೀಕಾಂತ ಹೂಲಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಸನ್ಮಾನಿಸಿ-ಗೌರವಿಸಲಾಯಿತು. ಜೀಜಾಮಾತಾ ಮಹಿಳಾ ಸಂಘದ ಮಂಗಲಾ ಕಶೀಲಕರ, ಸೇರಿದಂತೆ ಸಕಲ ಸಮಾಜದ ಮುಖಂಡರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಮಹಿಳೆಯರಿಂದ ಬಾಲ ಶಿವಾಜಿಯ ತೊಟ್ಟಿಲು ತೂಗಿ ಜಯಂತಿ ಆಚರಿಸಲಾಯಿತು. ಪಟ್ಟಣದಲ್ಲಿಯ ಶಿವಾಜಿ ಮೂರ್ತಿ ಹಾಗೂ ಬಸವೇಶ್ವರ ಮೂರ್ತಿಗಳಿಗೆ ಮಾಲಾರ್ಪಣೆ ಬಳಿಕ ಕ್ಷತ್ರೀಯ ಮರಾಠಾ ಪರಿಷತ್ಟಿ ಶ್ರೀನಿವಾಸ ಘೊಟ್ನೇಕರ ನೇತೃತ್ವದಲ್ಲಿ ಕೇಸರಿ ದಿರಿಸಿನಲ್ಲಿ ಭಗವಾಧ್ವಜಗಳೊಂದಿಗೆ ನೂರಾರು ಯುವಕರು ಪಟ್ಟಣದಲ್ಲಿ ಬೈಕ್ ಜಾಥಾ ನಡೆಸಿದರು.
Leave a Comment