ಹೊನ್ನಾವರ: ಕರಾವಳಿ ಮತ್ತು ಮಲೆನಾಡು ಭಾಗದ ಅತ್ಯಂತ ವೈಶಿಷ್ಟಪೂರ್ಣ ಮತ್ತು ವಿಶೇಷ ಮಹತ್ವದ ಮಲೆನಾಡು ಗಿಡ್ಡ ಗೋ ತಳಿಯ ಸಂರಕ್ಷಣೆ ಮತ್ತು ಸಂವರ್ಧನೆ ದೃಷ್ಟಿಯಿಂದ ಮಾರ್ಚ17ರಂದು ಪಟ್ಟಣದ ಹವ್ಯಕ ಸಭಾಭವನದಲ್ಲಿ ಮಲೆನಾಡು ಗಿಡ್ಡ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀಯ ಗೋಪರಿವಾರ ಹೊನ್ನಾವರ ಇದರ ಕಾರ್ಯದರ್ಶಿ ಡಾ.ವಿಶ್ವೇಶ್ವರ ತಿಳಿಸಿದರು.
ಅವರು ಹವ್ಯಕ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ದೇಸಿ ತಳಿಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುತ್ತಿರುವ ದಿನೇಶ್ ಶಹರಾ ಫೌಂಡೇಷನ್ ವತಿಯಿಂದ ಗೋವುಗಳ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಿದ್ದು ಮಲೆನಾಡು ಗಿಡ್ಡ ತಳಿಯ ಬಗ್ಗೆ ಸಂಶೋಧನೆ ನಡೆಸಿದ ಅಂತರರಾಷ್ಟ್ರೀಯ ಖ್ಯಾತಿಯ ಎನ್ಡಿಆರ್ಐ ವಿಜ್ಞಾನಿಗಳಿಂದ ವಿಚಾರ ಸಂಕಿರಣ, ಮಲೆನಾಡು ಗಿಡ್ಡ ತಳಿಯ ಗೋವುಗಳ ಪ್ರದರ್ಶನ, ಮಲೆನಾಡು ಗಿಡ್ಡ ಹಾಲಿನಿಂದ ತಯಾರಿಸುವ ವಿವಿಧ ಖಾದ್ಯಗಳನ್ನು ಪರಿಚಯಿಸುವ ಆಹಾರೋತ್ಸವ, ಗೋ ಸಂರಕ್ಷಣೆ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನ, ಮಲೆನಾಡು ಗಿಡ್ಡ ತಳಿವಿಶೇಷದ ಬಗ್ಗೆ ಚಿಂತನ- ಮಂಥನ, ಗೋವುಗಳ ಉಚಿತ ಆರೋಗ್ಯ ಶಿಬಿರ, ಹೈನು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟದಂಥ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಗೋ ಪರಿವಾರ- ಕರ್ನಾಟಕ ಇದರ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ವಿಶಿಷ್ಟ ಹಬ್ಬಕ್ಕೆ ಹೊನ್ನಾವರ ರೋಟರಿ ಕ್ಲಬ್ ಕೈಜೋಡಿಸಿದೆ ಎಂದರು.
ಕುಮಟಾ ಗೋ ಪರಿವಾರದ ಅಧ್ಯಕ್ಷ ಮಂಜುನಾಥ ಭಟ್ ಸುವರ್ಣಗದ್ದೆ ಮಾತನಾಡಿ, ಮಲೆನಾಡು ಗಿಡ್ಡ ತಳಿ ಹೊನ್ನಾವರ, ಕುಮಟಾ ಮತ್ತು ಭಟ್ಕಳದ ಆಸುಪಾಸಿನ ಪ್ರದೇಶಗಳಲ್ಲಿ ಅತ್ಯಂತ ವಿಶಿಷ್ಟ ಹಾಗೂ ತಳಿಶುದ್ಧತೆಯನ್ನು ಹೊಂದಿದೆ. ಈ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹೊನ್ನಾವರದಲ್ಲೇ ಈ ಬಾರಿಯ ಮಲೆನಾಡು ಗಿಡ್ಡ ಹಬ್ಬ ಆಚರಿಸಲಾಗುತ್ತಿದೆ. ಮಲೆನಾಡು ಗಿಡ್ಡ ಗೋವಂಶಕ್ಕೆ ದೇಶದ ಪ್ರತ್ಯೇಕ ಸ್ಥಾನಮಾನ ಗಳಿಸಿಕೊಡುವ ನಿಟ್ಟಿನಲ್ಲಿ ಅಪಾರ ಶ್ರಮ ವಹಿಸಿ ಸಂಶೋಧನೆ ಕೈಗೊಂಡಿರುವ ಡಾ.ಕೆ.ಪಿ.ರಮೇಶ್ ತಳಿಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಹಬ್ಬ ಸಯೋಜಿಸಲಾಗಿದೆ ಎಂದರು.
ಎನ್ಡಿಆರ್ಐ ದಕ್ಷಿಣ ವಿಭಾಗ ಕೇಂದ್ರದ ನಿರ್ದೇಶಕ ಡಾ.ಕೆ.ಪಿ.ರಮೇಶ್, ಕರ್ನಾಟಕ ರಾಜ್ಯ ಪಶುಸಂಗೋಪನೆ ಇಲಾಖೆ ನಿರ್ದೇಶಕ ಡಾ.ಎಂ.ಟಿ.ಮಂಜುನಾಥ್ ಮತ್ತಿತರರು ಬೆಳಿಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಭಾರತೀಯ ಗೋತಳಿಗಳ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನೇಶ್ ಸಹರಾ ಫೌಂಡೇಷನ್ನ ಟ್ರಸ್ಟಿ ದಿನೇಶ್ ಸಹರಾ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಲೆನಾಡು ಗಿಡ್ಡ ತಳಿಯ ವಿವಿಧ ಬಣ್ಣ, ಗುಣಲಕ್ಷಗಳ ಆಧಾರದಲ್ಲಿ ಆಯ್ದ ನೂರಕ್ಕೂ ಹೆಚ್ಚು ಗೋವುಗಳ ಪ್ರದರ್ಶನ, ಗವ್ಯೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಆಹಾರೋತ್ಸವ, ಮಲೆನಾಡು ಗಿಡ್ಡ ತಳಿಯ ಬಗ್ಗೆ ವಿಷಯ ತಜ್ಞರಿಂದ ಉಪನ್ಯಾಸ, ವಿಚಾರ ಸಂಕಿರಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿರುತ್ತವೆ. ಮಲೆನಾಡು ಗಿಡ್ಡ ತಳಿಯ ಗೋವುಗಳ ಸಂತತಿ ಇಂದು ನಶಿಸುತ್ತಿದೆ. ಅಧಿಕ ಹಾಲು ನೀಡುವ ಮಿಶ್ರತಳಿ ಹಸುಗಳನ್ನು ರೈತಾಪಿ ವರ್ಗ ಹೆಚ್ಚಾಗಿ ಸಾಕುತ್ತಿರುವುದರಿಂದ ಈ ಅಪರೂಪದ ತಳಿ ವಿನಾಶದ ಅಂಚಿನಲ್ಲಿದೆ. ಈ ತಳಿಯ ಮಹತ್ವವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟು ತಳಿಯನ್ನು ಉಳಿಸುವ, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಎನ್ಡಿಆರ್ಐ ನಡೆಸುತ್ತಿರುವ ಕಾರ್ಯಯೋಜನೆಗಳ ಅಂಗವಾಗಿ ಈ ಅಪರೂಪದ ಹಬ್ಬ ಆಯೋಜಿಸಲಾಗಿದೆ.
ಮಲೆನಾಡು ಗಿಡ್ಡ ತಳಿಯ ಹಸುಗಳ ಹಾಲು, ಹಾಲಿನ ಉತ್ಪನ್ನಗಳು, ಗೋಮೂತ್ರ, ಗೋಮಯ ಕೂಡಾ ಸರ್ವಶ್ರೇಷ್ಠವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಪೂರ್ವ ಗುಣಗಳು ಈ ಗವ್ಯೋತ್ಪನ್ನಗಳಲ್ಲಿವೆ. ಈ ತಳಿಯ ಮಹತ್ವವನ್ನು ಅರಿತು ಹೊರ ರಾಜ್ಯಗಳಿಂದ ಕೂಡಾ ಮಲೆನಾಡು ಗಿಡ್ಡ ಗೋವುಗಳನ್ನು ಹುಡುಕಿಕೊಂಡು ಖರೀದಿಗೆ ಜನ ಬರುತ್ತಿದ್ದಾರೆ. ಆದ್ದರಿಂದ ಈ ಅಪೂರ್ವ ಸಂಪತ್ತನ್ನು ಉಳಿಸಿ ಬೆಳೆಸುವ ಜತೆಗೆ ಇದನ್ನು ಸಾಕುವುದು ಪ್ರತಿಷ್ಠೆಯ ಸಂಕೇತ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಈ ವಿಶಿಷ್ಟ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಭಾರತೀಯ ಗೋಪರಿವಾರ ರಾಜ್ಯ ಕಾರ್ಯದರ್ಶಿ ಡಾ.ರವಿ, ಭಾರತೀಯ ಗೋಪರಿವಾರ- ಹೊನ್ನಾವರದ ಅಧ್ಯಕ್ಷ ಯೋಗೀಶ್ ರಾಯ್ಕರ್ , ರೋಟರಿ ಕ್ಲಬ್ ಅಧ್ಯಕ್ಷ ಡಾ.ರಂಗನಾಥ್ ಪೂಜಾರಿ, ಹೊನ್ನಾವರ ಹವ್ಯಕ ಮಂಡಲ ಅಧ್ಯಕ್ಷ ರಾಜು ಹೆಬ್ಬಾರ್, ಮಧು ಗೋವತಿ, ಶಿಶಿರ್ ಹೆಗಡೆ, ಶಂಕರ್ ಹೆಗಡೆ,ಗೋವಿಂದ ಹೆಗಡೆ ಉಪಸ್ಥಿತರಿದ್ದರು.
Leave a Comment