ಹಳಿಯಾಳ :- ಸರ್ಕಾರ ರಚನೆಯಿಂದ ಬಿಜೆಪಿಯನ್ನು ದೂರವಿಡಲು ಹೋದ ಕಾಂಗ್ರೇಸ್ ಪಕ್ಷ ಇಂದು ಪಶ್ಚಾತಾಪ ಪಡುತ್ತಿದೆ. ಜೆಡಿಎಸ್ ಮನೆ ಬಾಗಿಲು ಕಾಯೋ ದುಸ್ಥಿತಿ ಕಾಂಗ್ರೇಸ್ಗೆ ಬಂದೊದಗಿದೆ ಅಲ್ಲದೇ ಕಾಂಗ್ರೇಸ್ನವರು ಈಗಾಗಲೇ ಜೆಡಿಎಸ್ನವರಿಗೆ ಸೋತು ಶರಣಾಗಿದ್ದಾರೆಂದು ಕೆನರಾ ಲೋಕಸಭಾ ಕ್ಷೇತ್ರ ಚುನಾವಣಾ ಪ್ರಭಾರಿ ಉಸ್ತುವಾರಿ ಲಿಂಗರಾಜ್ ಪಾಟೀಲ್ ವ್ಯಂಗ್ಯವಾಡಿದರು.
ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಬೂತ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಾ ರಾಜ್ಯ ಕಾಂಗ್ರೇಸ್-ಜೆಡಿಎಸ್ ಸಮ್ಮೀಶ್ರ ಸರ್ಕಾರ ಗೊಂದಲದ ಗೂಡಾಗಿದೆ. ಅವರಲ್ಲಿ ಹೊಂದಾಣಿಕೆ ಇಲ್ಲ ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಸಾಲ ಮನ್ನಾ ಮಾಡಿಲ್ಲ, ಅಭಿವೃದ್ದಿ ನಿಂತ ನಿರಾಗಿದೆ ಎಂದು ಆರೋಪಿಸಿದರು.
ದೇವೆಗೌಡರು ಕುಟುಂಬ ರಾಜಕಾರಣ ಮಾಡುವಲ್ಲಿಯೇ ತಲ್ಲಿನರಾಗಿದ್ದಾರೆ ಸಿಎಂ ಕುಮಾರಸ್ವಾಮಿ ಮಗನ ರಾಜಕೀಯಕ್ಕಾಗಿ ಮಗ್ನರಾಗಿದ್ದು ಇವರಿಂದ ರಾಜ್ಯದ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನೀಸಿದರು.
ಮೋದಿಜಿಯವರ ಉತ್ತಮ ಜನಪರ ಕಾರ್ಯಯೋಜನೆಗಳಿಂದ ಮನಸೋತಿರುವ ಜನರು ದೇಶದ ಸಂರಕ್ಷಣೆಯಲ್ಲಿಯೂ ಮೋದಿಯೇ ಉತ್ತಮ ಎನ್ನುತ್ತಿದ್ದು ಈ ಬಾರಿ ಮತ್ತೊಮ್ಮೆ ಮೋದಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ 300ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸಲಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಎಂದ ಲಿಂಗರಾಜ್ ಲೋಕಸಮರ ಬಳಿಕ ಬಿಜೆಪಿ 22 ಸೀಟು ಗೆದ್ದರೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಬಿಜೆಪಿ ಸರ್ಕಾರ ರಚನೆಯಾಗುವುದು ಶತಸಿದ್ದ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಬಿಜೆಪಿಯ ಶಕ್ತಿ ಹಾಗೂ ಅಭ್ಯರ್ಥಿಗೆ ಹೆದರಿ ಜೆಡಿಎಸ್ ಪಕ್ಷಕ್ಕೆ ಸೀಟು ಬಿಟ್ಟು ಕೊಟ್ಟಿದ್ದು ಈ ಬಾರಿ ಅನಂತಕುಮಾರ ಹೆಗಡೆ 3 ಲಕ್ಷಕ್ಕೂ ಅಧಿಕ ಬಹುಮತದೊಂದಿಗೆ ಆಯ್ಕೆಯಾಗಿ ಇತಿಹಾಸ ರಚಿಸಲಿದ್ದಾರೆಂದು ಭವಿಷ್ಯ ನುಡಿದರು.
ಬಿಜೆಪಿ ಪಕ್ಷ ಲೋಕಸಮರ ಗೆಲ್ಲಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರ ಆದೇಶದಂತೆ ಮೇರಾ ಬೂತ ಸಬಸೇ ಮಜಬೂತ(ನನ್ನ ಬೂತ ಶಕ್ತಿಶಾಲಿ) ಕಾರ್ಯಕ್ರಮದಡಿಯಲ್ಲಿ ಬೂತ ಮಟ್ಟದಿಂದ ಕೆಲಸ ಮಾಡುತ್ತಿದೆ. ಕೆನರಾ ಲೋಕಸಭಾ ಕ್ಷೇತ್ರದಲ್ಲಿ 1972 ಬೂತಗಳು, 431 ಶಕ್ತಿ ಕೇಂದ್ರ, 70 ಮಹಾಶಕ್ತಿ ಕೇಂದ್ರಗಳನ್ನು ರಚಿಸಲಾಗಿದೆ. 4-5 ಬೂತ ಸೇರಿಸಿ ಒಂದು ಶಕ್ತಿ ಕೇಂದ್ರ ಮಾಡಲಾಗಿದ್ದು ಎಲ್ಲ ಮಹಾಶಕ್ತಿ ಕೇಂದ್ರಗಳ ಸಭೆ ನಡೆಸಲಾಗಿದ್ದು ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಮೋದಿಜಿಯವರ ಗೆಲುವಿಗಾಗಿ ಶ್ರಮವಹಿಸಿದ್ದು ಬಿಜೆಪಿ ಗೆಲುವು ಖಚಿತ ಎಂದರು.
ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಮಾರ್ಚ ದಿ.30 ರಂದು ಬೆಳಿಗ್ಗೆ 11 ಗಂಟೆ ಯಲ್ಲಾಪುರಲ್ಲಿ ಘಟ್ಟದ ಮೇಲಿನ ತಾಲೂಕುಗಳ ಕಾರ್ಯಕರ್ತರ ಹಾಗೂ ಅದೇ ದಿನ ಮಧ್ಯಾಹ್ನ 3ಕ್ಕೆ ಕುಮಟಾದಲ್ಲಿ ಕರಾವಳಿ ಭಾಗದ ತಾಲೂಕುಗಳ ಬೃಹತ್ ಸಭೆಯನ್ನು ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ. ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷಜಿ ಸಭೆಯನ್ನು ನಡೆಸಿಕೊಡಲಿದ್ದಾರೆಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಹಿಂದೂಳಿದ ವರ್ಗದ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದ ಅವರು ಜೆಡಿಎಸ್, ಕಾಂಗ್ರೇಸ್ ಹಾಗೂ ಮಹಾಘಟಬಂದನದವರು ಹಿಂದೂಳಿದ ವರ್ಗಗಳ ಆಯೋಗ ರಚನೆಗೆ ಅಡ್ಡಿ ಪಡಿಸುತ್ತಿದ್ದು ಅದನ್ನು ಅಸ್ನೋಟಿಕರ ಅರಿತು ಮಾತನಾಡಬೇಕು ಎಂದರು.
ಅಕ್ರಮ ಶಸ್ತ್ರಸ್ತ್ರ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಲೋಕಸಭಾ ಅಭ್ಯರ್ಥಿ ಅಸ್ನೋಟಿಕರ ಅವರಿಂದ ಸಂವಿಧಾನ ರಕ್ಷಣೆ ಸಾಧ್ಯವಿಲ್ಲ ಇದನ್ನು ಜನತೆ ಅರಿತುಕೊಳ್ಳಬೇಕು ಅಲ್ಲದೇ ಅಸ್ನೋಟಿಕರ ಚುನಾವಣೆಗೆ ಸ್ಪರ್ದಿಸಲು ಅನರ್ಹರಾಗಿದ್ದಾರೆಂದರು.
ಸುದ್ದಿಗೊಷ್ಠೀಯಲ್ಲಿ ಮುಖಂಡರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅನಿಲ ಮುತ್ನಾಳೆ, ಅಶೋಕ ಪಾಟೀಲ್, ವಿಲಾಸ ಯಡವಿ ಇದ್ದರು.
Leave a Comment