ಹಳಿಯಾಳ : ಲೋಕಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವಾಗಿ ಪಟ್ಟಣದಲ್ಲಿ ಹಳಿಯಾಳ ಪೋಲಿಸ್ ಇಲಾಖೆಯವರು ಸಿಪಿಐ ಬಿ.ಎಸ್. ಲೋಕಾಪುರ ಮತ್ತು ದಾಂಡೇಲಿಯ ಸಿಪಿಐ ಅನೀಷ್ ಮುಜಾವರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹಾಗೂ ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಪೋಲಿಸ್ ಪಥ ಸಂಚಲನ ನಡೆಸಿ ಗಮನ ಸೆಳೆದರು.
ಪೋಲಿಸ್ ಠಾಣೆಯ ಆವರಣದಿಂದ ಬ್ಯಾಂಡ್ ಸಮೇತ್ ಪೋಲಿಸ್ ಪಥ ಸಂಚಲನವನ್ನು ಶಿವಾಜಿ ಸರ್ಕಲ್, ವನಶ್ರೀ ಸರ್ಕಲ್, ಬಸ್ಸ್ಟಾಂಡ್ ರಸ್ತೆ, ಮೇದಾರಗಲ್ಲಿ, ವೀರ ಸಂಗೋಳ್ಳಿ ರಾಯಣ್ಣ ಅರ್ಬಲ್ ವೃತ್ತ, ಬಜಾರ, ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಪಿಎಸೈ ಆನಂದಮೂರ್ತಿ ಸೇರಿದಂತೆ 50ಕ್ಕೂ ಅಧಿಕ ಪೋಲಿಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ಅಲ್ಲದೇ ಪೋಲಿಸ್ ವಾಹಗಳು ಸಹ ಸಾಥ್ ನೀಡಿದವು.
ಈ ಬಗ್ಗೆ ಸಿಪಿಐ ಬಿ.ಎಸ್. ಲೋಕಾಪೂರ ಮಾತನಾಡಿ, ಪಥ ಸಂಚಲನದ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡುವ ಯತ್ನ ನಮ್ಮದಾಗಿದೆ. ಪೋಲಿಸ್ ಪರೇಡ್ನಿಂದ ಸಾಮಾನ್ಯ ಜನರಲ್ಲಿ ಉತ್ಸಾಹ ಬರುವುದರ ಜೊತೆಗೆ ನಮ್ಮೊಂದಿಗೆ ಪೋಲಿಸರು ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಮೂಲಕ ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಜನರು ಆಸಕ್ತಿವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ, ತಹಶೀಲದಾರುಗಳಾದ ಶಿವಾನಂದ ಉಳ್ಳೇಗಡ್ಡಿ, ಚಾಮರಾಜ ಪಾಟೀಲ್, ಜಿ.ಕೆ.ರತ್ನಾಕರ ಮತ್ತು ಅನಂತ ಚಿಪ್ಪಲಗಟ್ಟಿ, ಪಿಎಸ್ಐ ಆನಂದಮೂರ್ತಿ ಭಾಗವಹಿಸಿದ್ದರು.
Leave a Comment