ಹೊನ್ನಾವರ . ಮಾರ್ಚ ತಿಂಗಳ ಮಧ್ಯದಿಂದ ಮೇ ತಿಂಗಳ ಅಂತ್ಯದವರೆಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುವವರಿಗೆ ಅಳ್ವೇಕೋಡಿ ಊರಿನ ರಸ್ತೆಯ ಬದಿಯಲ್ಲಿ ಕೆಂಪು ಹಾಗೂ ಬಿಳಿ ಬಣ್ಣದ ಈರುಳ್ಳಿಗಳ ಪೊತ್ತೆ ಪೊತ್ತೆಗಳು ಕಾಣಸಿಗುತ್ತದೆ. ಉಳಿದೆಡೆ ಸಿಗುವ ಈರುಳ್ಳಿಗಳಿಗೂ ಈ ಕರಾವಳಿಯ ಈರುಳ್ಳಿಗೂ ವ್ಯಾತ್ಯಾಸವಿದೆ. ಈ ಈರುಳ್ಳಿ ಸಿಹಿ ಆಗಿದ್ದು ಖಾರ ಕಡಿಮೆ. ಇದರ ಸವಿಯೋ ಬೇರೆ.
ತುಂಡು ಗದ್ದೆಯಲ್ಲಿ ಮಡಿ ಮಾಡಿ, ಬೀಜ ಬಿತ್ತಿ ಸಸಿ ಮಾಡಿ ನೆಟ್ಟು ಈರುಳ್ಳಿ ಬೆಳೆಯುತ್ತಾರೆ. ಸುಮಾರು ಮೂರು ತಿಂಗಳಲ್ಲಿ ಬೆಳೆ ಬರುವ ಈ ಕೃಷಿ ರೈತರ ಶ್ರಮವನ್ನು ಬೇಡುತ್ತದೆ. ಬೀಜ ಚಿಗುರೊಡೆಯುವದರೊಂದಿಗೆ ನೀರುಣಿಸುವುದು, ಕೊಟ್ಟಿಗೆ-ಜೈವಿಕ ಗೊಬ್ಬರ ಒದಗಿಸುವುದು ಮತ್ತು ಅದರ ನಡುವಿನ ಕಳೆಕಿತ್ತು, ದನಕರುಗಳಿಂದ ರಕ್ಷಿಸುವುದರ ವರೆಗೆ. ಈರುಳ್ಳಿಯ ಬೀಜಗಳು ಕಪ್ಪು ಬಣ್ಣದ ಸಣ್ಣ ಹರಳಿನಂತಿರುತ್ತವೆ. ಆ ಬೀಜಗಳನ್ನೇ ಬಿತ್ತಿ ಸಸಿ ಮಾಡುತ್ತಾರೆ. ಈ ಬೀಜಗಳ ರಕ್ಷಣೆ ಮಾಡುವುದು ದೊಡ್ಡ ಸಾಹಸದ ಕಾರ್ಯ. ಬೀಜದ ಬಣ್ಣ ಒಂದೇ ಇದ್ದರೂ ಕೆಲವು ಬಿಳಿಯ ಈರುಳ್ಳಿ ಹಾಗೂ ಕೆಲವು ಕೆಂಪು ಈರುಳ್ಳಿ ಬೆಳೆಯುತ್ತದೆ. ಒಂದು ಗಿಡಕ್ಕೆ ಒಂದೇ ಈರುಳ್ಳಿ. ಅದನ್ನು ಕಿತ್ತು ಅದರ ‘ಜುಟ್ಟ’ದಸಮೇತ ಒಂದೊಂದು ಹೆಣೆದು ಪೊತ್ತೆ ಮಾಡಿ ಮಾರಾಟಕ್ಕೆ ಇಡುತ್ತಾರೆ. ಬೀಜ ಒಂದೇ ರೀತಿ ಆದರೂ ಬಿಳಿ ಬಣ್ಣದ ಹಾಗೂ ಕೆಂಪು ಬಣ್ಣದ ಈರುಳ್ಳಿ ಆಗಿ ಹುಟ್ಟುವುದು ಒಂದು ಅದೃಷ್ಟದ ಆಟ. ಕೆಂಪು ಈರುಳ್ಳಿಗಿಂತ ಬಿಳಿಯ ಈರುಳ್ಳಿ ಇಳುವರಿ ಕಡಿಮೆ ಇರುತ್ತದೆ. ಆದರೆ ಕೆಂಪದಕ್ಕಿಂತ ಬಿಳಿ ಬೆಲೆ ಒಂದೂವರೆ ಪಟ್ಟು ಹೆಚ್ಚಿರುತ್ತದೆ.
ಮಾರ್ಚ ಕೊನೆಯಲ್ಲಿ ಇದರ ಮಾರಾಟ ಆರಂಭವಾಗಿ ಮೊದಲ ಮಳೆಯವರೆಗೆ ಮುಂದುವರಿಯುತ್ತದೆ. ಮಾರ್ಚ ತಿಂಗಳಲ್ಲಿ ನಡೆಸಿದ ಖರೀದಿಯ ಈರುಳ್ಳಿ ಮೇ ವರೆಗೆ ಇರಿಸಿದರೆ 100 ಕೆ.ಜಿಗೆ 10 ಕೆ.ಜಿ ತೂಕ ಕಡಿಮೆ ಬರುತ್ತದೆ. ಆದರೆ ಮೇ ತಿಂಗಳಲ್ಲಿ ಇದರ ಬೆಲೆ ಹೆಚ್ಚಾಗುವುದರಿಂದ ಈ ಕೊರತೆ ತುಂಬುತ್ತದೆ. ಡಿಸೆಂಬರ ಅಂತ್ಯದಿಂದ ಜನವರಿ ಮಧ್ಯದವರೆಗೆ ಸ್ವಲ್ಪ-ಸ್ವಲ್ಪ ದಿನ ಬಿಟ್ಟು ಬಿತ್ತನೆ ಮಾಡಿ ಮಾರ್ಚ ಅಂತ್ಯದಿಂದ ಎಪ್ರಿಲ್ ಅಂತ್ಯದವರೆಗೆ ಕೀಳುವಂತೆ ಕೆಲವರು ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅಕಾಲಿಕ ಮಳೆಯಿಂದ ತೊಂದರೆ ಬೇಡ ಎನ್ನುವವರು ಒಮ್ಮಲೆ ಬಿತ್ತನೆ ಮಾಡಿ ಮೋದಲೇ ಬೆಳೆ ತೆಗೆಯುತ್ತಾರೆ. ಏನೇ ಇದ್ದರೂ ಈ ಈರುಳ್ಳಿಯನ್ನು ಒಮ್ಮೆ ತಿನ್ನಲೇಬೇಕು.
Leave a Comment