ಹೊನ್ನಾವರ: ಹೊಸಾಕುಳಿಯ ಜನ ನಮ್ಮ ಜೊತೆ ಅಧಿಕಾರ ಇದ್ದಾಗಲೂ ಅಧಿಕಾರ ಇಲ್ಲದಾಗಲೂ ಅಭಿಮಾನ ತೋರಿದ್ದಾರೆ. ಅವರ ಆಕಾಂಕ್ಷೆಗಳಿಗೆ ಖಂಡಿತ ಸ್ಪಂದಿಸುತ್ತೇನೆ. ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಹುದು. ಅದರಲ್ಲೂ ನನ್ನ ಕ್ಷೇತ್ರ ಇವತ್ತು ವಿದ್ಯಾರ್ಥಿಗಳಿಂದ ನಾಡು ಗುರುತಿಸುವಂತಾಗಿದೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು.
ತಾಲೂಕಿನ ಹೊಸಾಕುಳಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ನಡೆದ ಹೊಸಾಕುಳಿಯ ಹಳ್ಳಿಗೊಂದು ಘನತೆ ತಂದ ಹುಡುಗಿಯರು… ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಜನತೆ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸಂತೇಗುಳಿಯ ಕ್ರೀಡಾಂಗಣವನ್ನು ಉನ್ನತ ದರ್ಜೆಗೇರಿಸುವಲ್ಲಿ ಸರ್ವಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು.
ಕಾರ್ಯಕ್ರಮದಲ್ಲಿ ಉಪಸ್ಥತಿ ವಹಿಸಿದ್ದ ಕರಿಕಾನಮ್ಮ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ಟ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಇಲ್ಲಿಗೆ ನಿಲ್ಲದೇ ನಾವು ನಿಮ್ಮನ್ನು ಪದೇ ಪದೇ ಸನ್ಮಾನಿಸುವಂತಹ ಸಾಧನೆ ತೋರಿ ಸಮಾಜಕ್ಕೆ ಹೆಸರು ತರಬೇಕು ಎಂದು ಹಾರೈಸಿದರು.
ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಸಂಸ್ಕಾರವಿಲ್ಲದ ಶಿಕ್ಷಣ ವ್ಯರ್ಥ ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯವಂತರಾಗಿ ದೇಶಸೇವೆಗೆ ಮುಂದಾಗಬೇಕೆಂದುರು..
ಪ್ರಕೃತಿಯೇ ನಮ್ಮ ಮೊದಲ ಗುರು. ನಮ್ಮ ವಿದ್ಯಾರ್ಥಿಗಳಿಗೆ ಅಂಕಗಳಿಕೆಯೊಂದೇ ಮುಖ್ಯವಲ್ಲ ಬದುಕಿನಲ್ಲೂ ಗೆಲ್ಲಬೇಕೆಂದು ಡಾ|| ಸಂಧ್ಯಾ ಹೆಗಡೆ ದೊಡ್ಡಹೊಂಡ ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆ ವಹಿಸಿದ್ದ ಡಾ. ಶ್ರೀಪಾದ ಶೆಟ್ಟಿ ಮಾತನಾಡುತ್ತಾ ನಮ್ಮದು ಹೊಸಾಕುಳಿ ಪಂಚಗ್ರಾಮ ಇಲ್ಲಿನ ಜನರಲ್ಲಿ ವೈಚಾರಿಕತೆಯ ಪ್ರವಾಹವಿದೆ. ಸತ್ವವಿದೆ. ಕಷ್ಟದಲ್ಲೂ ಆತ್ಮೀಯತೆ ಬಿಟ್ಟು ನಡೆಯದ ಸಂಸ್ಕಾರ ನಮ್ಮವರದ್ದು. ವಿದ್ಯಾರ್ಥಿನಿಯರು ಇನ್ನೂ ಕೀರ್ತಿವಂತರಾಗಿ ಬೆಳೆಯಲಿ. ಇದೊಂದು ಸದಭಿರುಚಿಯ ಸದ್ಭಾವದ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.
ಯುವ ಉತ್ಸಾಹಿ ಗಣೇಶ ಜೋಷಿ, ವಿ.ಎಸ್.ಎಸ್.ಅಧ್ಯಕ್ಷ ಪ್ರಕಾಶ ಹೆಗಡೆ, ಶಿಲ್ಪಿ ಅರುಣ ಆಚಾರಿ ಕವಲಕ್ಕಿ ಮಾತನಾಡಿದರು.
ಅಭಿನಂದಿಸಿ ಮಾತನಾಡಿದ ಯುವ ಸಾಹಿತಿ, ಸಂಘಟಕ ಸಂದೀಪ ಭಟ್ಟ ಹೊಸಾಕುಳಿಯಲ್ಲಿ ಸಾಂಸ್ಕೃತಿಕ ಬೌದ್ಧಿಕ ಪರಂಪರೆ ಇಂದು ನಿನ್ನೆಯದಲ್ಲ, ಇಲ್ಲಿನ ಜನ ಆರ್ಥಿಕತೆಯ ಸಂಕಷ್ಟ ಪರಿಸ್ಥಿತಿಯನ್ನೂ ಮೀರಿ ತಮ್ಮ ಶೃದ್ಧೆಯಿಂದ ಮೇಲೇರಿ ಬಂದವರು. ಬರೀ ಇತಿಹಾಸವನ್ನಷ್ಟೇ ಸಂಭ್ರಮಿಸುವವರಾಗದೇ ಭವಿಷ್ಯದಲ್ಲಿ ನಮ್ಮ ಊರಿನ ಮಕ್ಕಳು ಆರಕ್ಷಕರಾಗಿ, ವೈದ್ಯರಾಗಿ, ಅಭಿಯಂತರರಾಗಿ, ಕೃಷಿಕರಾಗಿ, ವಿಜ್ಞಾನಿಗಳಾಗಿ, ಡೆಂಟಿಸ್ಟರಾಗಿ, ಸಮಾಜಕ್ಕೆ ನೆರವಾಗಬೇಕೆಂದರು.
ಅದ್ಭುತ ಸಾಧನೆ ಮಾಡಿದ ಅಂಕಿತಾ ಶ್ರೀಧರ ಭಟ್ಟ, ಕಾವ್ಯಾ ಎಂ ಭಟ್ಟ, ನಯನಾ ಗಣಪತಿ ಹೆಗಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಸಂಘಟಕ ಎಚ್.ಆರ್. ಗಣೇಶ ಸ್ವಾಗತಿಸಿದರು.
Leave a Comment