ಹಳಿಯಾಳ:- ವಿದ್ಯಾರ್ಥಿಗಳು ಭವಿಷ್ಯದಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಸಫಲತೆಯನ್ನು ಹೊಂದಬೇಕೆಂದು ಬೆಂಗಳೂರಿನ ಒರಾಕಲ್ ಕಂಪನಿಯ ಮುಖ್ಯ ಸಲಹೆಗಾರ ಪಾಂಡುರಂಗ ಪರ್ವತಿಕರ್ ಕರೆ ನೀಡಿದರು.
ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ “ಪ್ರತಿಬಿಂಬ-19” ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ವಿಷಯದ ಮೂಲಭೂತ ಜ್ಞಾನ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳನ್ನು ಹೊಂದುವುದರ ಮೂಲಕ ಉತ್ತಮ ಭವಿಷ್ಯವನ್ನು ಹೊಂದಬಹುದೆಂದರು.
ಬೆಂಗಳೂರಿನ ಟೀಚ್ ಫಾರ್ ಇಂಡಿಯಾ ಸಂಸ್ಥೆಯ ಉದ್ಯೋಗಿ ಅಶ್ವಿನಿ ಚಿಕ್ಕಮಠ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಧನಾತ್ಮಕ ವ್ಯಕ್ತಿತ್ವವನ್ನು ಗುರುತಿಸಿಕೊಂಡು ಉತ್ತಮ ವ್ಯಕ್ತಿಯಾಗಬೇಕೆಂದು ಕರೆ ನೀಡಿದರು ಹಾಗೂ ಪ್ರಖ್ಯಾತ ಕಂಪನಿಗಳು ನಡೆಸುವ ಸಂದರ್ಶನ ಮತ್ತು ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ಪೂರ್ವದಲ್ಲಿ sಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುವದು ಸೂಕ್ತ ಎಂದು ನುಡಿದರು.
ಮಹಾವಿದ್ಯಾಲಯದ ಪ್ರಾಶುಪಾಲ ಡಾ||ವಿ.ವಿ ಕಟ್ಟಿ, ಪ್ರೊ. ರವೀಂದ್ರ ಎಮ್, ಡಾ|| ಮೀನಲ್ ಕೆ, ಡಾ|| ಎ.ಎಚ್. ಮಿಶ್ರೀಕೋಟಿ, ಡಾ|| ಕೆ. ಎಸ್. ಪೂಜಾರ, ಡಾ|| ಆರ್. ಎಸ್. ಮುನ್ನೋಳ್ಳಿ, ಪ್ರೊ, ಆರ್. ಎನ್. ಪಾಟೀಲ, ಪ್ರೊ. ಮಂಜುನಾಥ ಡಿ, ಡಾ|| ನಂದಕಿಶೋರ ಎಸ್ ಮತ್ತು ಡಾ|| ಸಿ ಕೆ ಶ್ರೀಧರ್ ಇದ್ದರು. ವಿದ್ಯಾರ್ಥಿಗಳಾದ ಹೃಷಿಕೇಶ ಮತ್ತು ಕಾವ್ಯಾ ಕೆ ಕಾರ್ಯಕ್ರಮ ನಿರ್ವಹಿಸಿದರು.
ಒಂದೇ ದಿನ ನಡೆದ ಎರಡನೆ ಕಾರ್ಯಕ್ರಮವಾದ ಮಹಾವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಧಾರವಾಡದ ಪದ್ಮಜಾ ಇಂಡಸ್ಟ್ರೀಸ್ನ ನಿರ್ದೇಶಕ ಅಜಯ್ ಕುಮಾರ್ ಉಧ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ರೀಡೆ, ಸಾಂಸ್ಕ್ರತಿಕ ಮತ್ತು ಶೈಕ್ಷಣಿಕ ವಿಭಾಗಗಳಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಸ್ ಸಾವಕಾರ ಉಪಸ್ಥಿತರಿದ್ದರು.
Leave a Comment