ಹೊನ್ನಾವರ .ಮಾತೃಛಾಯಾ ಟ್ರಸ್ಟ್(ರಿ) ಕಾಸರಕೋಡ ಇವರ ಆಶ್ರಯದಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡ ಶಾಲಾ ವಿದ್ಯಾರ್ಥಿಗಳಿಗೆ “ನೋಟ್-ಬುಕ್” ವಿತರಿಸಲಾಯಿತು.
ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದ ಸೇಪ್ ಸ್ಟಾರ ಸೌಹಾರ್ದ ಸಹಕಾರಿ ಸಮೂಹ ಸಂಸ್ಥೆಗಳ ಪ್ರಮುಖರಾದ ಜಿ.ಜಿ.ಶಂಕರ ಮಾತನಾಡುತ್ತಾ, ಹಲವು ವರ್ಷಗಳಿಂದ ಈ ಸಂಸ್ಥೆಯ ಜನಸ್ನೇಹಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಈ ಸಂಸ್ಥೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಸಮಾಜಮುಖಿ ಕಾರ್ಯಕ್ರಮದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಕಳೆದ ನವೆಂಬರನಲ್ಲಿ ಹೊನ್ನಾವರದಲ್ಲಿ “ನಿನಾಸಂ ತಿರುಗಾಟ” ನಾಟಕೋತ್ಸವನ್ನು ಹಮ್ಮಿಕೊಂಡ ಸಂಸ್ಥೆಯು ಅದರಲ್ಲಿ ಉಳಿತಾಯವಾದ 21,000/- ರೂ.ಗಳನ್ನು ಹೊನ್ನಾವರದ ಪೆದ್ರೋ ಪೊವೆಡಾದ ವಿಶೇಷ ಶಾಲೆಯ ಮಕ್ಕಳಿಗೆ ನೀಡಿ ಮಾದರಿ ಕೆಲಸವನ್ನು ಮಾಡಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರಲ್ಲದೇ ಸರಕಾರಿ ಶಾಲೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದಲೂ ಸತತವಾಗಿ ಈ ಶಾಲೆಯ ಮಕ್ಕಳಿಗೆ ನೋಟ್-ಬುಕ್ಗಳನ್ನು ವಿತರಿಸುತ್ತಾ ಬಂದಿರುವುದು ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಅತಿಥಿಗಳಾದ ಮಂಕಿ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಗೋವಿಂದ ನಾಯ್ಕ ಮಾತನಾಡಿ ಶಿಕ್ಷಣ ಕ್ಷೇತ್ರ ವ್ಯಾಪರೀಕರಣಗೊಳ್ಳುತ್ತಿರುವ ಈಗಿನ ಸಂದರ್ಭದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರಲ್ಲದೇ ಇಂದು ನೆಮ್ಮದುರು ಕುಳಿತುಕೊಂಡು ಸಂಸ್ಥೆ ನೀಡಿದ ನೋಟ್-ಬುಕ್ಗಳನ್ನು ಸ್ವೀಕರಿಸುತ್ತಿರುವ ಮಕ್ಕಳಾದ ನೀವು ಶಿಕ್ಷಣ ಪಡೆದು ಉನ್ನತ ಸ್ಥಾನಗಳಿಸಿ ಇದೇ ತರಹ ವೇದಿಕೆಯ ಮೇಲೆ ಕುಳಿತುಕೊಂಡು ಜನಸೇವೆ ಮಾಡಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಬಿಜೆಪಿ ಪಕ್ಷದ ಜಿಲ್ಲಾ ಶಕ್ತಿ ಕೇಂದ್ರದ ಕಾರ್ಯದರ್ಶಿಯಾದ ರವೀಂದ್ರ ಶೇಟ ಮಾತನಾಡಿ ಮಾತೃಛಾಯಾ ಟ್ರಸ್ಟಿನ ಕಾರ್ಯವೈಖರಿಯನ್ನು ಶ್ಲಾಘಸಿದರಲ್ಲದೇ ಈ ಸಂಸ್ಥೆ ಇನ್ನೂ ಬಲಿಷ್ಠವಾಗಿ ಬೆಳೆದು ಅಭಿವೃದ್ಧಿ ಹೊಂದಿ ಇನ್ನು ಹೆಚ್ಚಿನ ಪ್ರಮಾಣದ ಸೇವೆ ಸಂಸ್ಥೆಯಿಂದ ಸಮಾಜಕ್ಕೆ ದೊರೆಯುವಂತಾಗಲಿ ಎಂದು ಹಾರೈಸಿದರು.
ಶಾಲೆಯ ಮುಖ್ಯೋಧ್ಯಾಪಕರಾದ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ಟ್ರಸ್ಟ ಅಧ್ಯಕ್ಷರಾದ ಅಶೋಕ ಕಾಸರಕೋಡ ಪ್ರಾಸ್ತಾವಿಕ ಮಾತನಾಡಿ, ವಂದನಾರ್ಪಣೆ ಮಾಡಿದರು. ಶಾಲಾ ಶಿಕ್ಷಕಿ ಶೈಲಾ ನಿರೂಪಿಸಿದರು.
Leave a Comment