ಹೊನ್ನಾವರ: ವೃತ್ತಿ ಘನತೆಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಿದ್ದ ಸರ್ಕಾರಿ ನೌಕರನ್ನು ಜನತೆ ಸದಾ ಸ್ಮರಿಸುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ ಅಭಿಪ್ರಾಯಪಟ್ಟರು.
ಅವರು ಹೊನ್ನಾವರ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾದೇವ ಚಂದ್ರಪ್ಪ ಕಲಗುಡ್ಡಿಯವರನ್ನು ವಕೀಲರ ಸಂಘದ ಪರವಾಗಿ ಸನ್ಮಾನಿಸಿ ಬೀಳ್ಕೊಟ್ಟು ಮಾತನಾಡುತ್ತಿದ್ದರು.
ಸರ್ಕಾರಿ ಸೇವೆ ಪವಿತ್ರವಾದದ್ದು ಅದರಲ್ಲೂ ನ್ಯಾಯಾಲಯದ ಸೇವೆ ಅತೀ ಪವಿತ್ರವಾದದ್ದು, ನ್ಯಾಯಾಲಯದಲ್ಲಿ ನಿರಂತರ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕಲಗುಡ್ಡಿಯವರ ವೃತ್ತಿ ಕೌಶಲ್ಯ ಇತರರಿಗೆ ಮಾದರಿ. ಅವರ ನಿವೃತ್ತಿ ಜೀವನ ಸುಖ, ನೆಮ್ಮದಿಯಿಂದ ಇರಲಿ ಎಂದರು.
ಇದೇ ಸಂದರ್ಭದಲ್ಲಿ ವಕೀಲರಾದ ಎಮ್.ಎಸ್. ಭಟ್ಟ ಕಟ್ಟಿಗೆ ಹಾಗೂ ಎಮ್.ಎನ್. ಸುಬ್ರಹ್ಮಣ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸನ್ಮಾನ ಮತ್ತು ಬೀಳ್ಕೊಡುಗೆ ಸ್ವೀಕರಿಸಿದ ಕಲಗುಡ್ಡಿ ಮಾತನಾಡಿ ತನ್ನ 38 ವರ್ಷಗಳ ಜೀವನ ನಿನ್ನೆ ಆರಂಭವಾಗಿ ಇಂದು ಮುಗಿದಂತೆ ಅನಿಸುತ್ತಿದೆ. ತನ್ನ ನಿರಂತರ ಸರ್ಕಾರಿ ಸೇವೆಯಲ್ಲಿ ಸಹಕರಿಸಿದ ನ್ಯಾಯವಾದಿಗಳನ್ನು, ನ್ಯಾಯಾಧೀಶರನ್ನು ಮತ್ತು ನ್ಯಾಯಾಲಯ ಸಿಬ್ಬಂಧಿಗಳ ಸಹಕಾರವನ್ನು ನೆನೆದರು.
ಇದೇ ಸಂದರ್ಭದಲ್ಲಿ ಮಹಾದೇವ ಕಲಗುಡ್ಡಿ ದಂಪತಿಗಳಿಗೆ ವಕೀಲರ ಸಂಘದಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಹಿರಿಯ ವಕೀಲ ಮಾಧವ ಜಾಲಿಸತ್ಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
Leave a Comment