ಹೊನ್ನಾವರ .ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ದಿ 14ರಂದು ರವಿವಾರ ನಗರದ ನ್ಯಾಯಾಲಯದ ಬಳಿ ಇರುವ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದು ಹಿರಿಯ ಅನುಭವಿ ವೈದ್ಯರು ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಹೃದಯ, ನರರೋಗ, ಜನರಲ್ ಮೆಡಿಸಿನ್, ಮೂತ್ರಶಾಸ್ತ್ರ, ಮೂತ್ರಪಿಂಡ, ರೇಡಿಯೋಥೆರಫಿ ಮತ್ತು ಕ್ಯಾನ್ಸರ್, ಶ್ವಾಸಕೋಶ, ಕಿವಿ-ಮೂಗು-ಗಂಟಲು ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹೀಗೆ 10ವಿಭಾಗಗಳ ವೈದ್ಯರ ತಂಡ ತಪಾಸಣೆ ನಡೆಸಲಿದೆ. ರಕ್ತದ ಒತ್ತಡ, ಸಕ್ಕರೆ ಅಂಶ, ಮತ್ತು ಇಸಿಜಿ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು. ಈ ಹಿಂದೆ ತಪಾಸಣೆ ಮಾಡಿಸಿಕೊಂಡ ವರದಿ, ಸೇವಿಸುತ್ತಿರುವ ಔಷಧಗಳ ಮಾಹಿತಿಯೊಂದಿಗೆ ತಪಾಸಣೆ ಮಾಡಿಸಿಕೊಳ್ಳುವವರು ಬರಬೇಕು. ಮತ್ತು ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ಬಸ್ಸ್ಟ್ಯಾಂಡ್ ಬಳಿ ಇಲ್ಲಿ ವಿವರವನ್ನು ಪಡೆಯಬಹುದು ಮತ್ತು 08387-220279 ನಂಬರಿಗೆ ಫೋನ್ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ನಗರದ ಭಾರತೀಯ ವೈದ್ಯಕೀಯ ಸಂಸ್ಥೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜಿಎಸ್ಬಿ ಯುವವಾಹಿನಿ, ಮಹಿಳಾವಾಹಿನಿ, ಟೆಂಪೋ ಚಾಲಕ-ಮಾಲಕ, ಆಟೋ ಮಾಲಕ-ಚಾಲಕ ಮತ್ತು ಔಷಧ ವ್ಯಾಪಾರಸ್ಥರ ಸಂಘ ಇವರ ಸಹಭಾಗಿತ್ವದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ. ಕುಮಟಾ-ಹೊನ್ನಾವರ ಶಾಸಕ ದಿನಕರ ಶೆಟ್ಟಿ, ಭಟ್ಕಳ-ಹೊನ್ನಾವರ ಶಾಸಕ ಸುನೀಲ ನಾಯ್ಕ ಶಿಬಿರಕ್ಕೆ ಚಾಲನೆ ನೀಡುವರು. ಕಸ್ತೂರ್ಬಾ ಆಸ್ಪತ್ರೆಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಿಬಿರ ಸಂಯೋಜನೆಯಲ್ಲಿ ಸಹಭಾಗಿತ್ವ ವಹಿಸಿದ ಸಂಘಟನೆಗಳ ಅಧ್ಯಕ್ಷರು ಅತಿಥಿಗಳಾಗಿ ಪಾಲ್ಗೊಳ್ಳುವರು. ಶಿಬಿರ ಮುಂಜಾನೆ 9ಗಂಟೆಗೆ ಸರಿಯಾಗಿ ಆರಂಭವಾಗಲಿದ್ದು 1ಗಂಟೆಗೆ ಮುಗಿಯಲಿದೆ. ಆಸಕ್ತರು ಶಿಬಿರದ ಪ್ರಯೋಜನ ಪಡೆಯುವಂತೆ ಸಹಕಾರ ಕೋರಲಾಗಿದೆ.
Leave a Comment