ಹೊನ್ನಾವರ , ಯಾವುದೇ ವ್ಯಕ್ತಿ ತಾನು ಹಿಡಿದ ಕಾರ್ಯದಲ್ಲಿ ಛಲದೊಂದಿಗೆ ಶ್ರಮಿಸಿದಲ್ಲಿ ಯಶಸ್ಸನ್ನು ಹೊಂದಲು ಸಾದ್ಯ ಎಂದು ಎಸ್.ಕೆ.ಪಿ. ಹೈಸ್ಕೂಲ್ ಮುಖ್ಯಾಧ್ಯಾಪಕ ಪ್ರಕಾಶ ನಾಯ್ಕ ಹೇಳಿದರು.
ಅವರು ಕೆರೆಕೋಣ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಊರ ನಾಗರಿಕರು ಸಿ.ಎ. ಪಾಸ್ ಮಾಡಿದ ಗಣೇಶ ಭಟ್ಟ ಕೊಂತಪಾಲ, ಕೆರೆಕೋಣ ಇವರಿಗೆ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ ಕೆರೆಕೋಣನಲ್ಲಿ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಗಣೇಶ ಭಟ್ಟರು ಸಾಧಿಸಿದ ಕಾರ್ಯಕ್ಕೆ ತಂದೆ ತಾಯಿಯ ಬೆಂಬಲದ ಜೊತೆಗೆ ಊರಿನವರ ಹಾರೈಕೆಯೂ ಇದ್ದುದು, ವತ್ತು ಏರ್ಪಡಿಸಿದ ಸನ್ಮಾನ ಕಾರ್ಯಕ್ರಮ ಎತ್ತಿ ತೋರಿಸುತ್ತಿದೆ ಎಂದು ಹೇಳಿ ಕನ್ನಡ ಮಾಧ್ಯಮದಲ್ಲಿ ಕಲಿತೂ ಇಂತಹ ಸಾಧನೆಯನ್ನು ಮಾಡಲು ಸಾಧ್ಯ ಎಂದು ಗಣೇಶ ಸಾಬೀತುಪಡಿಸಿದರು ಎಂದರು.
ಕೆರೆಕೋಣ ಶಾಲೆಯ ಮುಖ್ಯಾಧ್ಯಾಪಕ ವಿನಾಯಕ ಭಟ್ಟ ಮಾತನಾಡಿ, ನನ್ನ ವಿದ್ಯಾರ್ಥಿ ಪ್ರಥಮ ಪ್ರಯತ್ನದಲ್ಲೇ ಸಿ.ಎ. ಪಾಸು ಮಾಡಿದ್ದು ನನಗೆ ಮತ್ತು ನನ್ನ ಕೆರೆಕೋಣ ಶಾಲೆಗೆ, ಊರಿಗೆ ಖುಷಿ ತಂದಿದೆ ಎನ್ನುತ್ತಾ ಮೊಬೈಲ್ ಉಪಯೋಗಿಸುವುದರಲ್ಲೇ ಕಾಲ ಕಳೆಯುವ ಯುವ ಜನಾಂಗಕ್ಕೆ ಇಂಥವರು ಮಾದರಿಯಾಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಮಾತನಾಡಿ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲ, ಸತತ ಪ್ರಯತ್ನ ಬೇಕು,ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ, ಗಣೇಶ ಭಟ್ಟ ಇದಕ್ಕೆ ಜೀವಂತ ನಿದರ್ಶನ ಎಂದರು.
ಸನ್ಮಾನ ಸ್ವೀಕರಿಸಿದ ಗಣೇಶ ಭಟ್ಟ ಮಾತನಾಡಿ, ನಮ್ಮೂರಿನಲ್ಲೇ ನನಗೆ ಸನ್ಮಾನಿಸಿದ್ದು ನನಗೆ ಖುಷಿ ಮತ್ತು ಹೆಮ್ಮೆ ತಂದಿದೆ, ನಾನು ಇದನ್ನು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ, ನಿಮಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿ, ಮುಂದಿನ ದಿನಗಳಲ್ಲಿ ನಾನು ನನ್ನೂರಿಗೆ, ದೇಶಕ್ಕೆ ಒಳ್ಳೆಯ ಕೊಡುಗೆ ನೀಡುವಲ್ಲಿ ಪ್ರಯತ್ನಿಸುತ್ತೇನೆ ಎಂದರು.
ವೇದಿಕೆಯ ಮೇಲಿದ್ದ ಎಮ್.ಎಸ್.ಶೆಟ್ಟಿ , ಮಗನ ಜೊತೆಯಲ್ಲಿ ಸನ್ಮಾನ ಸ್ವೀಕರಿಸಿದ ಶಿಕ್ಷಕ ಆಯ್. ಆರ್. ಭಟ್ಟ ಮತ್ತು ಜಯಶ್ರೀ ಆಯ್. ಭಟ್ ಮಾತನಾಡಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಕೆರೆಕೋಣ ಎಸ್ಡಿಎಮ್ಸಿ ಅಧ್ಯಕ್ಷ ಎಮ್ ಎಸ್ ಶೆಟ್ಟಿ ಮಾತನಾಡಿದರು. ನಿವೃತ್ತ ಶಿಕ್ಷಕ ಬಿ.ವಿ.ಭಂಡಾರಿ ಉಪಸ್ಥಿತರಿದ್ದರು. ಮಂಜುನಾಥ ಅಣ್ಣಪ್ಪ ಶೆಟ್ಟಿ ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು.
ಇದೇ ಸಂದರ್ಭದಲ್ಲಿ ಸಾಧಕ ಗಣೇಶ ಭಟ್ಟರ ತಂದೆ, ಆಯ್.ಆರ್.ಭಟ್ಟ ಮತ್ತು ತಾಯಿ ಜಯಶ್ರೀಯವರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.
ರಾಮ ಭಂಡಾರಿ ಸ್ವಾಗತಿಸಿದರು, ಮಂಜುನಾಥ ಶೆಟ್ಟಿ ವಂದಿಸಿದರು, ಕೆರೆಕೋಣ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ ಭಂಡಾರಿ ಕಾರ್ಯಕಮ್ರ ನಿರ್ವಹಿಸಿದರು.
Leave a Comment