ರತ್ನಾಕರ ಧೌತಪದಾಂ ಹಿಮಾಲಯ ಕಿರೀಟಿನಿಂ
ಬ್ರಹ್ಮ ರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ/
ಮೂರು ದಿಕ್ಕುಗಳಲ್ಲಿಯೂ ರತ್ನಾಕರನಿಂದ ಪಾದವನ್ನು ತೊಳೆಸಿ ಕೊಳ್ಳುತ್ತಿರುವ ,ಹಿಮಾಲಯವನ್ನೇ ಕೀರೀಟವನ್ನಾಗಿಸಿ ಧರಿಸಿಕೊಂಡ ,ಮಹಾನ ಶಕ್ತಿಶಾಲಿ ವಿಜ್ಞಾನಿಗಳಾದ ರಾಜಋಷಿಗಳನ್ನು ರತ್ನದಂತೆಯೇ ಹೊಂದಿರುವ ಜಗತ್ತಿನ ಏಕೈಕ ರಾಷ್ಟ್ರ ನನ್ನ ಭಾರತ. ರತ್ನಗರ್ಭಾ ಭಾರತೀ ಎಂಬುದು ಒಂದು ಕವಿವಾಣಿಯೇ ಆದರೂ ಅದು ಸತ್ಯವೂ ಅಹುದು. ಭಾರತ ಲಕ್ಷಾಂತರ ಕೋಟಿ ಮಾನವರತ್ನಗಳ ಆಗರ. ಭಾರತ ನೆಲದಲ್ಲಿ ಜನಿಸುವ ಪ್ರತಿಯೋರ್ವನೂ,ಭಾರತಾಂಬೆಯನ್ನು ಪೂಜಿಸುವ ,ಭಜಿಸುವ ಪ್ರತಿ ಹುಲು ಜೀವವೂ ಒಂದೊಂದು ಅನರ್ಘ್ಯ ರತ್ನವೇ. ಹಾಗಾಗಿ ಹಿಂದೂಸ್ಥಾನವೊಂದು ಆಗರ್ಭ ಶ್ರೀಮಂತವಾದ ಅತ್ಯಮೂಲ್ಯ ರತ್ನದ ಗಣಿ ಎಂಬುದುರಲ್ಲಿ ದೂಸರಾ ಮಾತಿಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ತನ್ನದೇ ಆದ ಒಂದು ಆದಿಯಿದೆ.ಆದರೆ ಹಿಂದೂರಾಷ್ಟ್ರಕ್ಕೆ ಮಾತ್ರ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ನಮ್ಮ ಪೂರ್ವಜರು ತಮಗೆ ಹೊಟ್ಟೆಗಿಲ್ಲದಿದ್ದರೂ ಜಗದ ಜನರಿಗೆ ಮೂರುಹೊತ್ತು ಹೊಟ್ಟೆಗೆ ಸಿಗಲಿ ಎಂದ ಮಹಾನುಭಾವರುಗಳು. ತಮ್ಮ ಮೈ ಮುಚ್ಚಲು ಬಟ್ಟೆ ಇಲ್ಲದಿದ್ದರೂ ಜಗತ್ತಿನ ಜನರ ಪಾಲಿಗೆ ಸರಿಯಾದ ವಸನಗಳಿರಲಿ ಎಂದು ಬೇಡಿದ ಪುಣ್ಯಪುರುಷರುಗಳು.ಇದು ಕೇವಲ ಜಿಜ್ಞಾಸೆಯಲ್ಲ, ಸತ್ಯ ಸಂಗತಿ. ಬೇಕಿದ್ದರೆ ನೀವೇ ಗಮನಿಸಿ,ನಾವು ಈಗಲೂ ಸರ್ವೇ ಜನಾಃ ಸುಖಿನೋ ಭವಂತು ಎಂದೇ ಆಶಿಸುತ್ತೇವೆ.ಪ್ರಾಪಂಚಿಕವಾದ ಎಲ್ಲ ಜಂಜಾಟಗಳ ಉಪಶಮನಕ್ಕಾಗಿ ಧ್ಯಾನ, ಯೋಗ ಪ್ರಾಣಾಯಾಮಗಳನ್ನು ಪ್ರಪಂಚ ಮುಖಕ್ಕೆ ತೋರಿಸಿಕೊಟ್ಟವರು. ಅತಿಥಿ ದೇವೋಭವವೆಂದು ಆಥಿತ್ಯವನ್ನು ಉಣಬಡಿಸಿದ ನಾವುಗಳು, ಮಾತೃದೇವೋಭವವೆಂದು ತಾಯಿಯನ್ನೂ,ಪಿತೃದೇವೋಭವವೆಂದು ತಂದೆಯನ್ನೂ ಗುರುಬ್ರಹ್ಮನೆಂದು ಗುರುವನ್ನೂ ವಂದಿಸಿ, ಆರಾಧಿಸಿದವರು. ಇವೆಲ್ಲವೂ ಭಾರತ ಭವ್ಯ ಪರಂಪರೆಯ ಭವಿತ ಲಕ್ಷಣಗಳು. ಆದರೆ ಮುಂದುವರಿದ ಇಂದಿನ ದಿನಮಾನದಲ್ಲಿಯೂ ಭಾರತ ಹಿಂದೆ ಬಿದ್ದಿಲ್ಲ. ಮೋಡಗಳು ಬಂದಾಗ ಸೂರ್ಯ ಮರೆಯಾಗುವಂತೆ , ಭಾರತ ತನ್ನ ಪ್ರಜ್ವಲತೆಯನ್ನು ಕ್ಷೀಣಿಸಿಕೊಂಡಿತ್ತು ಅಷ್ಟೇ. ಆದರೆ ಬೆಳಗುವ ಬೆಳಕು ಅಥವಾ ಅದರ ಸ್ತ್ರೋತ ಒಂದಿಂಚೂ ಕುಂದಿರಲಿಲ್ಲ. ಒಬ್ಬ ಸಮರ್ಥ ನಾವಿಕ ಮಾತ್ರ ಅಷ್ಟೇ ಸಮರ್ಥವಾಗಿ ಹಡಗನ್ನು ನಡೆಸಬಲ್ಲ. ಅಂಥ ನಾಯಕನಿಗಾಗಿ ಭಾರತ ಪರಿತಪಿಸುತ್ತಿತ್ತು. ಸುಪ್ತವಾಗಿದ್ದ ಅದೆಷ್ಟೋ ಅಂತಹ ನಾವಿಕರು ಅಥವಾ ನಾಯಕರು ಕಾಲ ಪರಿಪಕ್ವಗೊಳ್ಳುತ್ತಿದ್ದಂತೆ ಗೋಚರಿಸತೊಡಗಿದರು.ಇದು ಭಾರತವನ್ನು ಮತ್ತೆ ಜಗತ್ತಿನ ಅನಂತಡೆಗಿನ ಹೋರಾಟವನ್ನು ನಿಭಾಯಿಸಲು ತಯಾರಾಗುವಂತೆ ಮಾಡಿತು. ಭಾರತ ಪುಟಿದೆದ್ದು ನಿಂತಿತು. ಬದಲಾಗುತ್ತಾ ಹೋಯಿತು.
ಸ್ನೇಹಿತರೆ ಭಾರತ ಇಂದು ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದು. ತನ್ನ ಘನತೆ,ಗೌರವವನ್ನು ವಿಶ್ವದ ವಿವಿಧ ರಾಷ್ಟ್ರಗಳಿಗೆ ಅರಿವಾಗಿಸಿ ವಿಶ್ವಗುರುವಾಗಿ ಮುನ್ನಡೆಯುತ್ತಿರುವ ದೇಶ. ಹೌದು,ಸುಮಾರು ಐದಾರು ವರ್ಷಗಳಿಂದಲೂ ಭಾರತ ಬಹಳಷ್ಟು ಬದಲಾಗಿದೆ. ಭಾರತೀಯ ಸೈನ್ಯಕ್ಕೀಗ ಆನೆ ಬಲ ಬಂದಿದೆ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಹೋರಾಡಿ ಗೆಲ್ಲುವ ಅಚಲವಾದ ಛಲ ಬಂದಿದೆ. ತನ್ನದೇ ಆದ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಸಿಕ್ಕಿದೆ. ನೂತನ,ಅತ್ಯಾಧುನಿಕ,ಸುಸಜ್ಜಿತ ಶಸ್ತ್ರಾಸ್ತ್ರಗಳು ಇಂದು ಭಾರತೀಯ ಸೇನಾಪಡೆಯ ಬತ್ತಳಿಕೆ ಸೇರಿವೆ. ಚೀನಾದಂತಹ ಬಲಿಷ್ಠ ರಾಷ್ಟ್ರಗಳೊಂದಿಗೂ ಸಹ ತತ್ಸಮವಾಗಿ ಹೋರಾಡಲು ಬೇಕಾದ ಮನೋಸ್ಥೈರ್ಯ ಬಂದಿದೆ. ಇದು ಕೇವಲ ಬಡಾಯಿಯಲ್ಲ. ನೆರೆಯ ಪಾಪಿ ಪಾಕಿಸ್ತಾನದೊಂದಿಗೆ ಇತ್ತೀಚಿಗೆ ಭಾರತ ನಡೆಸಿದ ಪ್ರತಿದಾಳಿಗಳಲ್ಲೇ ಇವೆಲ್ಲ ಸಾಬೀತಾಗಿದೆ. “ಯೇ ನಯಾ ಹಿಂದೂಸ್ಥಾನ ಹೈ, ಘರ್ ಮೇ ಘುಸೆಗಾ ಭಿ,ಮಾರೇಗಾ ಭಿ”ಎಂದು ಉಚ್ಚಕಂಠದಿಂದ ಹೇಳುವಂತಾಗಿದೆ. ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಎದೆಯೊಡ್ಡಿ ನಿಂತು ಎದುರಾಳಿಯ ಎದೆಯಲ್ಲಿ ಕಂಪನ ಹುಟ್ಟುಹಾಕುವಷ್ಟು ಬಲಿಷ್ಠವಾಗಿದೆ ಭಾರತ. ಉರಿ ಸೆಕ್ಟರ್ ನಲ್ಲಿ ನಡೆದ ಪಾಕ್ ಪೋಷಿತ ಉಗ್ರ ದಾಳಿಗೆ ಪ್ರತಿದಾಳಿಯಾಗಿ ಭಾರತ ಉಗ್ರರ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಇದಕ್ಕೊಂದು ಅತೀ ಉತ್ತಮ ಉದಾಹರಣೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ‘ಸಾಧುಂಗೆ ಸಾಧುಂ,ಮಾಧುರ್ಯಂಗೆ ಮಾಧುರ್ಯಂ,ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್’ ಎಂಬುದಕ್ಕೆ ಉಪಮೆಯಾಗಿ ಭಾರತೀಯ ಸೇನೆ ಕೆಲಸ ನಿರ್ವಹಿಸುತ್ತಿದೆ.ಸೇನೆ ಬರೀ ದೇಶದ ಗಡಿರಕ್ಷಣೆಯೊಂದೇ ಅಲ್ಲ,ಮಾನವೀಯತೆಯ ಮಹಾಮಂತ್ರಿಯಾಗಿಯೂ ಕೆಲಸ ಮಾಡುತ್ತಿದೆ. ದೇಶದೊಳಗೆ ಯಾವುದೇ ರೀತಿಯ ನೈಸರ್ಗಿಕ ವಿಕೋಪಗಳಾದರೂ ಮೊದಲು ಬಂದು ನೋಂದವರಿಗೆ ಸಹಾಯ ಹಸ್ತ ಚಾಚುತ್ತಿದೆ. ಇಷ್ಟು ಸಾಕಲ್ಲವೇ ಭಾರತ ಬದಲಾಗಿದೆ ಎಂದು ಹೇಳಲು.
ಮೇಲಿನದು ಒಂದು ಮಗ್ಗಲು ಮಾತ್ರ.ಭಾರತ ಆರ್ಥಿಕತೆಯಲ್ಲೂ ಈ ಐದಾರು ವರ್ಷಗಳಲ್ಲಿ ಅತ್ಯುನ್ನತವಾದದ್ದನ್ನೇ ಸಾಧಿಸಿದೆ. ಕೆಲವು ನಿರ್ಣಾಯಕ ಸಂದರ್ಭಗಳಲ್ಲಿ ಭಾರತ ತೆಗೆದು ಕೊಂಡ ನಿರ್ಧಾರಗಲೇ ಇವುಗಳಿಗೆ ಹಿಡಿದ ಕೈಗನ್ನಡಿ. ಸಾವಿರಾರು ಲಕ್ಷ ಕೋಟಿ ಸಾಲದ ಹೊರೆಯನ್ನು ಇಳಿಸಿಕೊಂಡು, ಮತ್ತೊಬ್ಬರಿಗೆ ಸಾಲ ನೀಡುವಷ್ಟರ ಮಟ್ಟಿಗೆ ಬಂದಿದೆ ಎಂದಾದರೆ ಇದಲ್ಲವೇ ಸಾಧನೆ. ನೋಟುರದ್ಧತಿಯಿಂದಾಗಿ ಹೊರಬಂದ ಕಪ್ಪುಹಣಗಳಿಗನಂತೂ ಲೆಕ್ಕವೇ ಇಲ್ಲ. ತೆರಿಗೆ ವಿಷಯದಲ್ಲಿಯೂ ದೇಶಕ್ಕೆ ಮೋಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ದೇಶದಲ್ಲಿ ಭೌತಿಕ ಹಣದ ಬದಲಾಗಿ ಅಂತರ್ಜಾಲ ವಹಿವಾಟು ದಿನೇ ದಿನೇ ಹೆಚ್ಚಳವಾಗುತ್ತಿದೆ. ಜನರ ಮನಸ್ಥಿತಿ ಬದಲಾಗುತ್ತಿದೆ. ಇಂದಿನ ಯುವ ಪೀಳಿಗೆಯಂತೂ ಆನ್ಲೈನ್ ಪೇಮೆಂಟ್ ಗಳಿಗೆ ಒಗ್ಗಿಹೋಗಿದ್ದಾರೆ. ಕೆಲವು ಹಳ್ಳಿಗಳಲ್ಲಿ ಮಾತ್ರ ಇನ್ನೂ ಹಣದ ವ್ಯವಹಾರ ನಡೆಯುತ್ತಿದೆ ಬಿಟ್ಟರೆ ಉಳಿದಂತೆ ಬಹುತೇಕ ಎಲ್ಲ ನಗರ ಪಟ್ಟಣ ಮಹಾನಗರಗಳಲ್ಲಿ ಕ್ಯಾಶ್ ರಹಿತ ವ್ಯವಹಾರಕ್ಕೇ ಮಣೆ ಹಾಕಲಾಗುತ್ತಿದೆ. ಉತ್ತರಕನ್ನಡದಲ್ಲಿ ಈ ಬಗೆಗೆ ಹೆಚ್ಚಿನ ಜಾಗೃತಿ ಇನ್ನೂ ಮೂಡದಿರುವುದಿ ಸ್ವಲ್ಪ ಅಸಮಾಧಾನಕರ. ಆದರೂ ಮುಂದೊಂದು ದಿನ ಬಡಲಾಗಬಹುದೆಂಬ ನಿರೀಕ್ಷೆ ಇದ್ದೇ ಇದೆ. ಬಡಲಾಗಬೇಕಾದ ಸಮಯ ಇದು, ಇನ್ನೇಕೆ ತಡ ಈಗಲೇ ಬದಲಾಗಿ ಎಂಬುದೊಂದೇ ನನ್ನ ಬೇಡಿಕೆ.
ಇನ್ನು ದೇಶದಲ್ಲಿ ಈ ಮಟ್ಟಿಗಿನ ಆರ್ಥಿಕ ಕ್ರಾಂತಿಯಾಗಲು ಮುಖ್ಯ ಕಾರಣ ಕಾರ್ಖಾನೆಯವರು ಹಾಗೂ ಉದ್ಯಮಗಳು. ಮೇಕ್ ಇನ್ ಇಂಡಿಯಾ , ಸ್ಟಾರ್ಟಪ್ ಇಂಡಿಯಾದಂಥ ಯೋಜನೆಗಳು ಅನೇಕ ಪ್ರತಿಭಾವಂತ ಯುವ ತರುಣರಿಗೆ, ಕಮರಿದ ಕನಸುಗಳಿಗೆ ವೇದಿಕೆಯಾಗಿದೆ. ಭಾರತ ಜಗತ್ತಿನ ಸ್ಟಾರ್ಟಪ್ ಹಬ್ ಆಗಿ ಬದಲಾಗುತ್ತಿದೆ. ವಿಶ್ವದ ಎಲ್ಲಾ ಭಾಗದ ಜನರಿಗೂ ಭಾರತ ಹೂಡಿಕೆಗೆ ಬಹಳ ಪ್ರಶಸ್ತವಾದ ಸ್ಥಳವಾಗಿ ಹೊರಹೊಮ್ಮಿದೆ. ರಾಜಧಾನಿ ಬೆಂಗಳೂರಂತೂ ಜಗತ್ತಿನ ಮಾಹಿತಿ ತಂತ್ರಜ್ಞಾನದ ಕ್ಷೇತ್ರದ ಹಾಟ್ ಸ್ಪಾಟ್ ಆಗಿ ರೂಪುಗೊಳ್ಳುತ್ತಿದೆ. ಇದು ದೇಶದ ಆರ್ಥಿಕತೆಗೆ ಇನ್ನಷ್ಟು ಬಲ ತುಂಬಲಿದೆ. ಕೌಶಲ್ಯ ಯೋಜನೆಯಂಥ ಕಲ್ಪನೆಗಳು ಭಾರತದ ಪಾರಂಪರಿಕ ಕುಶಲಕಲೆಗಳಿಗೆ ಉತ್ತೇಜನ ನೀಡುವಲ್ಲಿ ಪೂರಕವಾಗಿದೆ. ಹಾಗಾಗಿ ಇಂದಿನ ಯುವ ಸಮೂಹಕ್ಕೊಂದು ಹೊಸ ಮಾರ್ಗದ ಬಾಗಿಲು ತೆಗೆದಂತಾಗಿದೆ.
ಇನ್ನು ಜಾಗತಿಕ ಮಟ್ಟದಲ್ಲಿಯೂ ಭಾರತ ವ್ಯವಹರಿಸುವ ರೀತಿ ಬಹಳ ಬದಲಾಗಿದೆ. ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತ ತೆಗೆದುಕೊಂಡ ನಿರ್ಧಾರವನ್ನು ಜಗತ್ತು ಪ್ರಶ್ನಿಸಲಿಲ್ಲ.ಪಾಕಿಸ್ತಾನದ ಪೊಳ್ಳು ಕುತಂತ್ರಗಳಿಗೆ ಭಾರತ ಎಚ್ಚರಿಸುತ್ತಿರುವ ರೀತಿಯ ಕುರಿತಾಗಿಯೂ ಯಾರೂ ಚಕಾರವೆತ್ತುತ್ತಿಲ್ಲ. ಬದಲಾಗಿ ಭಾರತದ ಮುಂದೆ ಪಾಕಿಸ್ತಾನ ಮೂಲೆಗುಂಪಾಗಿದೆ. ಜಗತ್ತಿನ ಎಲ್ಲ ಪ್ರಮುಖ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಲು ಬಯಸುತ್ತಿವೆ. ಭಯೋತ್ಪಾದಕತೆ, ಉಗ್ರ ಚಟುವತಿಕ್ರಗಳ ದಮನಕ್ಕೆ ಭಾರತ ತೆಗೆದುಕೊಳ್ಳುತ್ತಿರುವ ನಿರ್ಣಾಯಕ ತೀರ್ಮಾನಗಳು ಪ್ರಪಂಚದ ಪ್ರಶಂಸೆಗೆ ಪಾತ್ರವಾಗಿದೆ. ಅಮೆರಿಕಾ ಭಾರತವನ್ನು ಮುಂದುವರಿದ ರಾಷ್ಟ್ರವಾಗಿ ಘೋಷಿಸಲು ಚಿಂತನೆ ನಡೆಸುತ್ತಿದೆ. ಕಚ್ಚಾತೈಲ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಭಾರತದ ನಡೆಗಳು ಜಗತ್ತನ್ನೇ ಬೆರಗುಗೊಳಿಸಿದ್ದವು. ವಿಶ್ವಸಂಸ್ಥೆಯೂ ಭಾರತವನ್ನು ಋಣಮುಕ್ತ ರಾಷ್ಟ್ರವೆಂದು ಘೋಷಿಸಿದೆ. ವಿದೇಶಾಂಗ ವ್ಯವಹಾರಗಳಲ್ಲಿ ಭಾರತ ತೋರುತ್ತಿರುವ ಮುತುವರ್ಜಿ ,ಇಡುತ್ತಿರುವ ಹೆಜ್ಜೆಗಳು ನಿಜಕ್ಕೂ ವಿಶ್ವಾಸಾರ್ಹನೀಯವಾಗಿದೆ. ಹಾಗಂತ ವಿಜ್ಞಾನ ಕ್ಷೇತ್ರದಲ್ಲಿಯೂ ಭಾರತ ಹಿಂದೆ ಬಿದ್ದಿಲ್ಲ. ನಾವು ಮಂಗಳನಿಗೂ ಅಮ್ಮನನ್ನು ಕಳುಹಿಸಿಕೊಟ್ಟಿದ್ದೇವೆ. ಅದೂ ಅತ್ಯಂತ ಕಡಿಮೆ ಖರ್ಚಿನಲ್ಲಿ. ಇಸ್ರೋ ಜಗತ್ತಿನ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿ ಹೆಸರು ಮಾಡುತ್ತಿದೆ. ಒಂದೇ ಸಲ ಅತೀ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಕುಳ್ಳಿರಿಸಿ ಹಿರಿಮೆಯೂ ಭಾರತದ್ದಾಗಿದೆ. ಮೊನ್ನೆ ಮೊನ್ನೆಯ ಉಡ್ಡಯನದಲ್ಲೂ ಭಾರತ ಅಂತಿಮ ಗೆರೆಯನ್ನು ಕಂಡು ವಾಪಸಾಗಿದೆ.ಆಗಲೂ ಜಗತ್ತು ಭಾರತದ ಈ ಪ್ರಯತ್ನಕ್ಕೆ ಭೇಷ್ ಎಂದಿದೆ.
ಭಾರತ ಆಂತರಿಕ ಭದ್ರತೆ , ಸಂಪರ್ಕದ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಕಳೆದ ವರ್ಷ ರೈಲು ಅಪಘಾತವಾಗದ ವರ್ಷವೆಂದು ದಾಖಲೆ ಬರೆದಿದೆ. ದೇಶದ ಉದ್ದಗಲಕ್ಕೂ ಸಂಪರ್ಕಿಸುವ ಚತುಷ್ಪಥ ಕಾಮಗಾರಿಗೆ ರೆಕ್ಕೆಗಳು ಬಂದಿವೆ. ಭಾರತದ ಸಾಮಾನ್ಯ ನಾಗರಿಕ”ಆಮ್ ಆದ್ಮಿ” ಕೂಡ ಉಡಾನ್ ಸೌಲಭ್ಯದಿಂದ ವಿಮಾನ ಹತ್ತುತ್ಯಿದ್ದಾನೆ. ದೇಶದಲ್ಲಿ ಖಾಸಗೀ ರೈಲಿನ ಓಡಾಟಕ್ಕೆ ಚಾಲನೆ ಸಿಕ್ಕಿದೆ. ಬುಲೆಟ್ ರೈಲಿನ ಕುರಿತೂ ಸುದ್ಧಿಗಳಿವೆ. ಆರೋಗ್ಯ ಕ್ಷೇತ್ರದಲ್ಲಿಯೂ ಭಾರತ ವೇಗವಾಗಿ ಬೆಳೆಯುತ್ತಿದೆ. ಆಯುಶ್ಮಾನ್ ಭಾರತ , ಜನಔಷಧಿ ಯೋಜನೆಗಳಂಥ ಕ್ರಮಗಳು ಆರೋಗ್ಯಕ್ಷೇತ್ರವನ್ನು ಸುಧಾರಿಸಿವೆ. ಆದರೆ ಸ್ವಾಸ್ಥ್ಯಕ್ಕೆ ಬಲ ನೀಡಿದ್ದು ಸ್ವಚ್ಛ ಭಾರತ ಅಭಿಯಾನ. ದೇಶದ ಜನತೆ ಸ್ವಚ್ಚತೆಯೆಡೆಗೆ ಗಮನ ನೀಡುತ್ತಿದ್ದಾರೆ. ಶೌಚಾಲಯ ಬಳಸುವವರ ಸಂಖ್ಯೆಯೂ ದುಪ್ಪಟ್ಟಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಇಂದಿನ ಕೊರೊನಾ ರೋಗದ ಜಾಗೃತಿಗಾಗಿ ಭಾರತ ತೆಗೆದುಕೊಂಡ ತೀರ್ಮಾನಗಳನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೊಗಳಿದೆ. ಹಾಗಾಗಿಯೇ ಹೇಳಿದ್ದು ಭಾರತ ಬದಲಾಗುತ್ತಿದೆ.
ಹೀಗೆ ಹೇಳಿದೆನೆಂಬ ಮಾತ್ರಕ್ಕೆ ನಾನೊಬ್ಬ ಮೋದಿ ಅಭಿಮಾನಿ,ಬಿಜೆಪಿಗ ಎಂದೆಲ್ಲ ಅಲ್ಲ. ಇವೆಲ್ಲ ಅಂಕಿ-ಅಂಶಗಳ ಮೇಲಿನ ನೋಟಗಳು. ಯಾರೇ ನೋಡಿದರೂ ಸಾಮಾನ್ಯವಾಗಿ ಗೋಚರಿಸುವ ಅಂಶಗಳು. ನಾನು ಯಾವ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ. ಕೆಲಸ ಮಾಡುವವರ ಪರ ಅಷ್ಟೇ. ಖಂಡಿತ ಭಾರತ ಬದಲಾಗಿದೆ. ನಾವು ನೋಡುವ ಪರಿ ಬಡಲಾಗಬೇಕಷ್ಟೇ. ಸ್ನೇಹಿತರೆ ನನ್ನ ಭಾರತ ಇಷ್ಟು ಬಡಲಾಗಿರಬೇಕಾದರೆ ನಾನಿನ್ನೂ 60 ವರ್ಷ ಹಿಂದುಳಿಯುವುದು ಅಕ್ಷರಶಃ ತಪ್ಪು. ಬನ್ನಿ ಮುಂದುವರಿದ ದೇಶದೊಂದಿಗೆ ಹೆಜ್ಜೆ ಹಾಕೋಣ. ಭಾರತೀಯ ಸಂಸ್ಕೃತಿಯನ್ನ, ಭಾರತೀಯತೆಯನ್ನು ಉಳಿಸಿ ಬೆಳೆಸೋಣ. ಬನ್ನಿ ಬದಲಾಗೋಣ,ಬದಲಾಯಿಸೋಣ….ಭಾರತ ವಿಶ್ವಗುರುವಾಗಲಿ….
#stayhome
#staysafe
Leave a Comment