ಹಳಿಯಾಳ:- ಕೋವಿಡ-19 ಹಿನ್ನಲೆಯಲ್ಲಿ ಮರು ನೇಮಕವಾಗದ ಅತಿಥಿ ಉಪನ್ಯಾಸಕರನ್ನು ಮರುನೇಮಕ ಮಾಡಿ ಅವರ ಸೇವೆಯನ್ನು ಮುಂದುವರೆಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೇಶಪಾಂಡೆ ಕರ್ನಾಟಕ ರಾಜ್ಯದ 429 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಡಿಮೆ ವೇತನ ಪಡೆದು ಉನ್ನತ ಶಿಕ್ಷಣದಲ್ಲಿ ಭೋಧನೆಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುತ್ತಿರುವ ಅವರ ಸೇವೆ ಅನುಪಮವಾಗಿದೆ.
ಕೋವಿಡ-19 ಹಿನ್ನಲೆಯಲ್ಲಿ ಕಳೆದ 24 ಮಾರ್ಚ 2020 ರಿಂದ ಅವರನ್ನು ಮರು ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅವರು ಅಭದ್ರತೆ ಮತ್ತು ಕೀಳರಿಮೆಯಿಂದ ನರಳುತ್ತಿದ್ದಾರೆ ಆದ್ದರಿಂದ ಕೂಡಲೇ ಪ್ರತಿವರ್ಷದಂತೆ ಅವರ ಸೇವೆಯನ್ನು ಮುಂದುವರೆಸಿ, ಅವರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ.
ಯು.ಜಿ.ಸಿ. ನಿರ್ದೇಶನದಂತೆ ಸೆಪ್ಟೆಂಬರ್ 1ನೇ ತಾರಿಖಿನಿಂದ ಆನ್ಲೈನ ಕ್ಲಾಸ್ಗಳು ಆರಂಭವಾಗಿವೆ. ಶೀಘ್ರದಲ್ಲಿ ತರಗತಿಗಳನ್ನು ಪ್ರಾರಂಭಿಸುವ ಅನಿವಾರ್ಯತೆ ಇದೆ. ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರವೇಶ ಪಡೆದ ಲಕ್ಷಾಂತರ ಮಕ್ಕಳಿಗೆ ಅತಿಥಿ ಉಪನ್ಯಾಸಕರನ್ನು ಮುಂದುವರೆಸದೇ ಇರುವ ಕಾರಣದಿಂದ ವ್ಯವಸ್ಥಿತವಾಗಿ ಸಂಪೂರ್ಣವಾಗಿ ಭೋಧನೆ ನಡೆಯುತ್ತಿಲ್ಲ. ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಆತಂಕ ಆರಂಭವಾಗಿದೆ. ಆದ್ದರಿಂದ, ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ತಕ್ಷಣವೇ ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಹಾಗೂ ವಿದ್ಯಾರ್ಥಿಗಳ ಆತಂಕಕ್ಕೆ ಸ್ಪಂದಿಸಿ ಪ್ರತಿವರ್ಷದಂತೆ ಈ ವರ್ಷವೂ ಅತಿಥಿ ಉಪನ್ಯಾಸಕರನ್ನು ಮುಂದುವರೆಸಲು ಕ್ರಮ ಕೈಗೊಳ್ಳುವಂತೆ ದೇಶಪಾಂಡೆ ವಿನಂತಿಸಿದ್ದಾರೆ.
Leave a Comment