ಕ್ಯಾಂಪ್ ಮೂಲಕ ಗಂಟಲು ದ್ರವ ಪರೀಕ್ಷೆ – ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಹೊನ್ನಾವರ – ಕೊರೊನಾ ಸಂಬಂಧಿತ ಎರಡನೇ ಅಲೆ ಪ್ರಾರಂಭವಾಗಿರುವ ಸೂಚನೆ ಇರುವುದರಿಂದ ಹೆಚ್ಚುಹೆಚ್ಚು ಪರೀಕ್ಷೆಗಳನ್ನು ನಡೆಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವ ಮೂಲಕ ಮಾರಕ ರೋಗಾಣುವನ್ನು ನಿಯಂತ್ರಿಸಬೇಕಾಗಿದೆ. ಇದಕ್ಕೆ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮ ಹಾಕಬೇಕಿದೆ ಎನ್ನುವ ಸೂಚನೆ ತಹಶಿಲ್ದಾರ್ ಅವರಿಂದ ನೋಡಲ್ ಅಧಿಕಾರಿಗಳಿಗೆ ರವಾನೆಯಾಗಿದೆ.
ಕೊರೊನಾ ನಿಯಂತ್ರಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಪ್ರತೀ ಪಂಚಾಯತ್ಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಶನಿವಾರ ನೋಡಲ್ ಅಧಿಕಾರಿಗಳ ಜೊತೆ ಸಭೆ ನಡೆಸಿದಿ ತಹಶಿಲ್ದಾರ್ ವಿವೇಕ ಶೇಣ್ವಿ ಅವರು 60 ವರ್ಷ ಮೇಲ್ಪಟ್ಟ ಮತ್ತು ಇನ್ನಿತರ ರೋಗಗಳಿಂದ ಬಳಲುತ್ತಿರುವವರನ್ನು ಪತ್ತೆಮಾಡಿ ಕಡ್ಡಾಯ ಪರೀಕ್ಷೆಗೊಳಪಡಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಾಗೂ ಮಾಸ್ಕ್ ಧರಿಸದವರಿಗೆ ದಂಡ ಹಾಕಿ ಮಾಸ್ಕ್ ಧರಿಸುವಂತೆ ಮಾಡಬೇಕು, ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾದರೂ ಶೀಘ್ರ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರನ್ನು ಪತ್ತೆಮಾಡಿ ಕಡ್ಡಾಯ ಹೋಂ ಕ್ವಾರಂಟೈನ್ಗೆ ಒಳಪಡಿಸಬೇಕು. ಪಾಸಿಟಿವ್ ಆಗಿ ಹೋಂ ಐಸೋಲೇಷನ್ ಆಗಿರುವ ರೋಗಿಗಳನ್ನು ಆರೋಗ್ಯ ಇಲಾಖೆಯವರು ಪ್ರತಿ ದಿನ ಬೇಟಿಮಾಡಿ ಆರೋಗ್ಯ ಪರಿಶೀಲಿಸಬೇಕು ಎನ್ನುವ ನಿರ್ದೇಶನ ನಿಡಿದ್ದಾರೆ.
ನೋಡಲ್ ಅಧಿಕಾರಿಗಳು ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಥವಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯವಿರುವ ಸ್ಥಳಗಳಲ್ಲಿ ಕ್ಯಾಂಪ್ಗಳನ್ನು ಹಾಕಿಕೊಳ್ಳುವಂತೆಯೂ ತಿಳಿಸಿದ್ದಾರೆ.
[ಆರೋಗ್ಯ ಇಲಾಖೆಯ ಮೂಲಕ ಮನೆ ಮನೆ ಸಮೀಕ್ಷೆ ನಡೆಸಿ ಹೆಚ್ಚು ಅಸುರಕ್ಷಿತವಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಅವರಿಗೆ ಕ್ಯಾಂಪ್ ಮಾಡುವ ಮೂಲಕ ಗಂಟಲ ದ್ರವ ಪರೀಕ್ಷೆ ಕಡ್ಡಾಯವಾಗಿ ಮಾಡಲು ಸರ್ಕಾರದ ನಿರ್ದೇಶನವಿದೆ. ಕಾರಣ ಸಾರ್ವಜನಿಕರು ಅಡ್ಡಿಪಡಿಸದೇ ಸ್ವಯಂಪ್ರೇರಿತರಾಗಿ ಸಹಕಾರ ನೀಡಬೇಕು – ವಿವೇಕ ಶೇಣ್ವಿ, ತಹಶೀಲ್ದಾರ್ ಹೊನ್ನಾವರ]
Leave a Comment