ಹೊನ್ನಾವರ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಂದಾವರ ಗ್ರಾಪಂ ವ್ಯಾಪ್ತಿಯ ಕಡ್ನೀರಿನಲ್ಲಿ ಹಳ್ಳದ ನೀರು ಒಮ್ಮೆಲೆ ರೈತರ ಬಾವಿ, ತೋಟಗಳಿಗೆ ನುಗ್ಗಿದ್ದು, ನೀರಿನ ರಭಸಕ್ಕೆ ಅನೇಕ ಕಡೆ ರೈತರ ತೋಟದ ಕಂಪೌಂಡ್ ಸಂಪೂರ್ಣ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಕಡ್ನೀರಿನ ದೋಸೆಕಟ್ಟು ಭಾಗದಿಂದ ಕೊಪ್ಪನಮಕ್ಕಿ, ಮೋಲಿಗದ್ದೆ ಮಾರ್ಗವಾಗಿ ಕೆಳಗಿನ ಕೇರಿ, ಕಾರಗದ್ದೆ ಮೂಲಕ ಚಂದಾವರಕ್ಕೆ ಕೂಡುವ ಹಳ್ಳದ ನೀರು ನೂರಾರು ರೈತರ ತೋಟಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ನೀರು ತೋಟಕ್ಕೆ ನುಗ್ಗಿದ್ದರಿಂದ ಬಾವಿಗೆ ಹಾಕಲಾದ ನೀರಿನ ಯಂತ್ರ, ಹೊಸದಾಗಿ ನಾಟಿ ಮಾಡಿದ ಅಡಿಕೆ ಸಸಿಗಳು ನೀರು ಪಾಲಾಗಿದೆ. ಕೆಲವೆಡೆ ಹಳ್ಳದ ದಂಡೆಯಲ್ಲಿದ್ದ ಕಲ್ಲು-ಮಣ್ಣುಗಳು ಬಾವಿಗೆ ಬಿದ್ದು, ಬಾವಿ ಮುಚ್ಚಿ ಹೋಗಿದೆ. ಅಡಿಕೆ ಮರಗಳಿಗೆ ಹಾಕಲಾದ ಗೊಬ್ಬರ, ಹಣ ಕೊಟ್ಟು ಖರೀದಿಸಿದ ಮಣ್ಣು ಎಲ್ಲವೂ ತೊಳೆದು ಹೋಗಿದೆ. ಅಪಾರ ಪ್ರಮಾಣದಲ್ಲಿ ಕೃಷಿ ಭೂಮಿ ಕೊಚ್ಚಿ ಹೋಗಿದ್ದು, ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.
ಕಡ್ನೀರಿನ ಈಶ್ವರ ನಾಯ್ಕ, ಹೇರಂಭ ಭಂಡಾರಿ, ಸುಬ್ರಾಯ, ಗೋವಿಂದ ನಾಯ್ಕ, ವಿಷ್ಣು ನಾಯ್ಕ, ತಿಮ್ಮಪ್ಪ ನಾಯ್ಕ, ನಾಗಪ್ಪ ನಾಯ್ಕ, ದಯಾನಂದ ಭಂಡಾರಿ ಸೇರಿದಂತೆ ಅನೇಕ ರೈತರ ಕೃಷಿ ಜಮೀನಿಗೆ ಹಾನಿಯಾಗಿದೆ. ಸ್ಥಳಕ್ಕೆ ಚಂದಾವರ ಗ್ರಾಪಂ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Leave a Comment