ಹಳಿಯಾಳ:- ಕಳೆದ ಕೆಲವು ತಿಂಗಳುಗಳಿಂದ ಕೋವಿಡ್-19 ಮಹಾಮಾರಿಯು ಜನರ ಬದುಕನ್ನು ಕಸಿದುಕೊಂಡಿದ್ದು ಜನರ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿದೆ ಅಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ಸುರಿದ ಅಕಾಲಿಕ ಮಳೆಯಿಂದ ಸೃಷ್ಠಿಯಾದ ಅತಿವೃಷ್ಠಿಯಿಂದ ರೈತರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟವನ್ನು ಎದುರಿಸುತ್ತಿದ್ದು ಇವರಿಗೆ ಸರ್ಕಾರ ನೆರವಾಗಬೇಕಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊವಿಡ್ ಮಹಾಮಾರಿಯ ಪರಿಣಾಮ ಬಹುತೇಕ ಜನರು ಕೃಷಿ ಕಡೆಗೆ ವಾಲಿದ್ದರು. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಪ್ರದೇಶದಲ್ಲಿ ಭತ್ತ, ಕಬ್ಬು, ಮೆಕ್ಕೆಜೋಳ, ಹತ್ತಿ, ತರಕಾರಿ ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗಿತ್ತು ಮತ್ತು ಕೃಷಿಯಲ್ಲಿ ಬಂಪರ ಬೆಳೆ ನೀರಿಕ್ಷಿಸಲಾಗಿತ್ತು. ಆದರೆ ಫಸಲು ಕಟಾವು ಹಂತದಲ್ಲಿರುವಾಗಲೇ ಗಾಯದ ಮೇಲೆ ಬರೆ ಎಳೆದಂತೆ ಸುರಿದ ಅಕಾಲಿಕ ಮಳೆಗೆ ಎಲ್ಲವೂ ಕೊಚ್ಚಿ ಹೋಗಿದ್ದು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ. ಉತ್ತರಕರ್ನಾಟಕ ಜಿಲ್ಲೆಗಳಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ.
ಒಟ್ಟಾರೆಯಾಗಿ ಅತಿವೃಷ್ಟಿಯಿಂದ ಜನರಜೀವನ ದುಸ್ತರವಾಗಿದೆ. ರೈತರು, ಕೃಷಿ ಕೂಲಿಕಾರರು, ಮೀನುಗಾರರು, ಪುಷ್ಮಕೃಷಿಕರು, ತೋಟಗಾರಿಕಾ ಮತ್ತುರೇಷ್ಮೆ ಬೆಳೆಗಾರರು, ಅಡಿಕೆ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಒದಗಿ ಬಂದಿದೆ.ಕರಾವಳಿ ಪ್ರದೇಶದಲ್ಲಿ ಗಾಳಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮತ್ಸ್ಯೋದ್ಯಮ ಸಂಪೂರ್ಣ ತತ್ತರವಾಗಿ, ಮೀನುಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ.
ಅಲ್ಲದೇ, ಜನವಸತಿ ಪ್ರದೇಶಗಳಿಗೂ ಸಹ ಮಳೆಯ ನೀರು ಮನೆಗಳಿಗೆ ನುಗ್ಗಿ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿರುತ್ತದೆ. ಭಾಗಶಃ/ಪೂರ್ಣ ಪ್ರಮಾಣದ ಮನೆಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ತಕ್ಷಣವಾಗಿ ಪುನರ್ವಸತಿ ಕಲ್ಪಿಸಬೇಕಾಗಿದೆ. ಇಂತಹ ಯಾತನಾಮಯ ಪರಿಸ್ಥಿತಿಯಲ್ಲಿ ನೊಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ನೆರವಾಗಬೇಕಾಗಿರುವುದು ಅತೀ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಿಸಿರುವ ದೇಶಪಾಂಡೆ ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ಸರ್ಕಾರಕೂಡಲೇ ಎಚ್ಚೆತ್ತುಕೊಂಡು ಬೆಳೆ, ತರಕಾರಿ ಮತ್ತು ಪುಷ್ಪಹಾನಿಗೊಳಗಾದ ರೈತರಿಗೆ, ಮೀನುಗಾರಿಗೆ ಮತ್ತು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸಮರೋಪಾದಿಯಲ್ಲಿ ಪರಿಹಾರಕಾರ್ಯ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವರಾದ ಆರ್.ಅಶೋಕ, ಕೃಷಿ ಸಚಿವರಾದ ಬಿ.ಸಿ.ಪಾಟೀಲ, ತೋಟಗಾರಿಕಾ ಸಚಿವರಾದ ಕೆ.ಸಿ.ನಾರಾಯಣ ಗೌಡ ಹಾಗೂ ವಸತಿ ಸಚಿವರಾದ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
Leave a Comment