ತಾಲೂಕಿನ ಕೆಳಗಿನೂರು ಗ್ರಾಮದ ಅಭಿತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಜಗಾರ ಅಭಿತೋಟ, ಹೊಳ್ಳಾಕುಳಿ ಭಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಈ ಭಾಗದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥವಾಗಿ ಬದಲಾದ ನಂತರ ಊರಿನ ಮಕ್ಕಳು ರಸ್ತೆ ದಾಟಿ ಶಾಲೆಗೆ ಹೋಗುವುದೇ ದುಸ್ತರವಾಗಿ ಪರಿಣಮಿಸಿದೆ. ಹೆದ್ದಾರಿಯ ಒಂದು ಅಂಚಿಗೆ ಗುಡ್ಡದ ಭಾಗದಲ್ಲಿ ಶಾಲೆಯಿದ್ದರೆ ಇನ್ನೊಂದ ಭಾಗದಲ್ಲಿರುವ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ.
ಚತುಷ್ಪಥವಾಗುವ ಪೂರ್ವದಿಂದಲೂ ಈ ಸಮಸ್ಯೆ ಇತ್ತಾದರೂ ರಸ್ತೆ ಹೆಚ್ಚು ಅಗಲವಾಗಿಲ್ಲದ ಕಾರಣ ವಾಹನ ಓಡಾಟವಿಲ್ಲದ ಸಮಯ ನೋಡಿ ರಸ್ತೆ ದಾಟುತ್ತಿದ್ದರು. ಆದರೆ ಈಗ ರಸ್ತೆ 40 ಮೀಟರ್ ಅಗಲವಾಗಿದ್ದು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವಷ್ಟರಲ್ಲಿ ವಾಹನ ಬರುತ್ತದೆ. ಅಪಘಾತ ಸಾಧ್ಯತೆ ಅಧಿಕವಾಗಿದ್ದು ಶಾಲೆಗೆ ಮಕ್ಕಳನ್ನು ಕಳುಹಿಸುವುದಕ್ಕೇ ಪಾಲಕರು ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯವರು, ಗ್ರಾಮಸ್ಥರು ಶಿಕ್ಷಕರು ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಿಕೊಡಿ ಎಂದು ಹಲವು ಬಾರಿ ಐ.ಆರ್.ಬಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅನಾಹುತ ಸಂಭವಿಸಿದಾಗ ಸಾಂತ್ವನ ಹೇಳಲು, ಪರಿಹಾರ ನೀಡಲು ಮುಂದೆ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಮೊದಲೇ ಎಚ್ಚುತ್ತುಕೊಂಡು ಐ.ಆರ್.ಬಿ ಕಂಪನಿಯವರಿಗೆ ತಾಕೀತು ಮಾಡಿ ತಕ್ಷಣ ಇಲ್ಲಿ ಮೇಲ್ಸೇತುವ ನಿರ್ಮಿಸಿಕೊಡುವ ಕೆಲಸ ಮಾಡಬೇಕಿದೆ.
Leave a Comment