ನಡೆಯುವ ಹಾದಿಯಲ್ಲಿ ಮುಳ್ಳು ಬಿದ್ದಿದ್ದರೆ ಬದಿಗೆ ಸರಿದು ಹೋಗುವುದು ಬುದ್ಧಿವಂತಿಕೆ ಅದೇ ಮುಳ್ಳನ್ನು ಎತ್ತಿ ಬದಿಗೆ ಹಾಕಿ ಹೋಗುವುದು ಹೃದಯವಂತಿಕೆ ಅನಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಗೌಡಕುಳಿ ಭಾಗದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಹಾಗೂ ದಾರಿದೀಪ ಹಾಳಾಗಿದ್ದು ಅದನ್ನು ದುರಸ್ಥಿಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರಾದರೂ ಸ್ಥಳಿಯಾಡಳಿತ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನಪ್ರತಿನಿಧಿಗಳನ್ನು ದೂರಿ ಸುಮ್ಮನಾಗುವುದಕ್ಕಿಂತ ಜನೋಪಕಾರಿಯಾದ ಕೆಲಸವನ್ನು ಸ್ವತ: ಮಾಡಿತೋರಿಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸುವ ಕೆಲಸಕ್ಕೆ ಮುಂದಾದ ಯುವಕರಿಬ್ಬರು ಮಾದರಿಯಾಗಿದ್ದಾರೆ.
ಸ್ಥಳೀಯರಾದ ರವಿ ಮತ್ತು ಗಣಪತಿ ಹರಿಕಾಂತ ಎಂಬ ಇಬ್ಬರು ಯುವಕರು ಸ್ಮಾಶನಕ್ಕೆ ಹೋಗುವ ಹಾಳಾದ ರಸ್ತೆಯನ್ನು ತಕ್ಕಮಟ್ಟಿಗೆ ಸರಿಪಡಿಸುವ ಪ್ರಯತ್ನದ ಜೊತೆ ಕೆಟ್ಟು ಹೋಗಿದ್ದ ಬೀದಿ ದೀಪದ ದುರಸ್ಥಿಗೆ ಮುಂದಾಗಿ 900 ರುಪಾಯಿ ಖರ್ಚುಮಾಡಿ ವಿದ್ಯುತ್ ಉಪಕರಣಗಳನ್ನು ಖರೀದಿಸಿ ತಾವೇ ಜೋಡಿಸಿ ಬೆಳಕು ಚೆಲ್ಲುವಂತೆ ಮಾಡಿದ್ದಾರೆ. ಈ ಮೂಲಕ ಹಳ್ಳಿಗಳಲ್ಲಿನ ಜನರ ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸುವಲ್ಲಿಯೂ ಅಸಡ್ಡೆ ತೋರುವ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಏನೇ ಆದರೂ ನಮ್ಮೂರಿಗೆ ಅದು ಆಗಿಲ್ಲ ಇದು ಆಗಿಲ್ಲ ಎಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಬೈಕೊಂಡು ಓಡಾಡುವವರ ನಡುವೆ ಅಗತ್ಯವಿರುವ ಸಾರ್ವಜನಿಕ ಕೆಲಸವನ್ನು ಸ್ವತ: ಮಾಡಿ ತೋರಿಸುವ ಮೂಲಕ ಆ ಕೆಲಸ ಮಾಡಬೇಕಿದ್ದವರಿಗೆ ಮುಜುಗರವನ್ನುಂಟುಮಾಡುವ ಮತ್ತು ಅವರ ಜವಾಬ್ಧಾರಿಯನ್ನು ನೆನಪಿಸುವ ವಿಬಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Leave a Comment