ಪಡಿತರ ವ್ಯವಸ್ಥೆಯ ಸುಧಾರಣೆಗಾಗಿ ಜಾರಿಯಾದ ಬಯೋಮೆಟ್ರಿಕ್ ವ್ಯವಸ್ಥೆ ಜನರಿಗೆ ಅನುಕೂಲಮಾಡಿಕೊಡುವ ಬದಲು ಅವರ ಅತ್ಯಮೂಲ್ಯ ಸಮಯವನ್ನು ವ್ಯರ್ಥವಾಗಿಸುವ ವ್ಯವಸ್ಥೆಯಾಗಿದೆ ಎನ್ನುವ ಟೀಕೆಯನ್ನು ಎದುರಿಸುತ್ತಿದೆ.
ಗುಡ್ಡಗಾಡು ಪ್ರದೇಶಗಳನ್ನೊಳಗೊಂಡಿರುವ ಜಿಲ್ಲೆಯಲ್ಲಿ ಇಂದಿಗೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗ ಮೊಬೈಲ್ ನೆಟ್ವರ್ಕ ಸಿಗುವುದೇ ಕಷ್ಟ ಎನ್ನು ಸ್ಥಿತಿಯಿದೆ. ಹಾಗಿದ್ದರೂ ದುರ್ಬಲ ನೆಟ್ವರ್ಕ ನಂಬಿ ಪಡಿತರ ವಿತರಣೆಗೂ ಆನ್ಲೈನ್ ಎಂಟ್ರಿ ಕಡ್ಡಾಯ ಮಾಡಿದ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ವಿರೋಧವ್ಯಕ್ತವಾಗುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ನೆಟ್ವರ್ಕ ಸಮಸ್ಯೆಯಿಂದ ರೇಶನ್ ವಿತರಣೆಗೆ ಸಮಸ್ಯೆಯಾಗಲಿದೆ ಎನ್ನುವುದನ್ನು ಅರಿತ ಅಧಿಕಾರಿಗಳು ಜನಪ್ರತಿನಿಧಿಗಳು ಹಿಂದಿನ ವ್ಯವಸ್ಥೆಯಲ್ಲಿಯೇ ರೇಶನ್ ವಿತರಣೆಗೆ ಅವಕಾಶ ಕಲ್ಪಿಸಿದ್ದರು. ಆದರೆ ಲಾಕ್ಡೌನ್ ತೆರವಾದ ನಂತರ ನೆಟ್ವರ್ಕ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಮತ್ತೆ ಆನ್ಲೈನ್ ಎಂಟ್ರಿಮಾಡಿಕೊಂಡು ಪಡಿತರ ವಿತರಿಸುತ್ತಿರುವ ಕ್ರಮದ ಬಗ್ಗೆ ಕಾರ್ಡದಾರರು ಪ್ರಶ್ನಿಸುತ್ತಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸುಲಭವಾಗಲಿ ಎನ್ನುವ ಕಾರಣಕ್ಕೆ ಒಂದೊಂದು ಏರಿಯಾಕ್ಕೆ ಒಂದೊಂದು ದಿನ ರೇಶನ್ ಕೊಡುವ ವ್ಯವಸ್ಥೆಯನ್ನು ನ್ಯಾಯಬೆಲೆ ಅಂಗಡಿಯವರು ಮಾಡಿಕೊಂಡಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಬೆಳಿಗ್ಗೆ ರೇಶನ್ಗೆ ಬಂದವರು ಕಾದು ಕಾದು ಸಂಜೆ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಗಂಟೆಗೊಂದು ಕಾರ್ಡ ಎಂಟ್ರಿಯಾದರೆ ಸಾವಿರಾರು ಕಾರ್ಡದಾರರನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಯವರು ಸಕಾಲದಲ್ಲಿ ಪಡಿತರ ವಿತರಿಸುವುದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ. ಒಂದೋ ನೆಟ್ವರ್ಕ ವ್ಯವಸ್ಥೆಯನ್ನು ಬಲಪಡಿಸಿ, ಇಲ್ಲಾ ಪಡಿತರ ವಿತರಣೆ ವ್ಯವಸ್ಥೆಯನ್ನು ಬದಲಿಸಿ, ಈಗಿರುವ ವ್ಯವಸ್ಥೆಯಲ್ಲಿಯೇ ಕುಂಟುತ್ತಾ ತೆವಳುತ್ತಾ ಮುಂದುವರೆಯಬೇಕು ಎಂದರೆ ಜನರಿಗೆ ಅನುಕೂಲಮಾಡಿಕೊಡುವುದಕ್ಕಿಂತ ಅವರನ್ನು ಗೋಳು ಹೊಯ್ದುಕೊಳ್ಳುವುದಕ್ಕೇ ಕಾರಣವಾಗುತ್ತದೆ ಎನ್ನುವ ಜನರ ಆಕ್ರೋಶದ ಮಾತನ್ನು ಆಳುವ ವರ್ಗ ಕೇಳಿಸಿಕೊಳ್ಳಬೇಕಿದೆ.
Leave a Comment