ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಸಮೀಪದ ಬಾಳೆಗದ್ದೆ ತಿರುವಿನ ಮರ್ಮವನ್ನು ಅರಿಯಲು ಸಾಧ್ಯವಾಗದ ವಾಹನ ಚಾಲಕರು ವಾಹನಗಳನ್ನು ಮಗುಚಿ ಹಾಕಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಲೇ ಇದ್ದು ಈ ತಿರುವಿನ ಬಗ್ಗೆ ಜನರಲ್ಲಿ ಆತಂಕ ಮನೆಮಾಡುವಂತಾಗಿದೆ.
ಗೇರಸೊಪ್ಪಾ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವಾಗ ವೇಗವಾಗಿ ಬರುವ ಚಾಲಕರು ಹುಲಿಯಪ್ಪನ ಕಟ್ಟೆ ದಾಟಿದ ತಕ್ಷಣ ಇಳಿಜಾರಿನಲ್ಲಿ ಬಲಕ್ಕೆ ಹೊರಳಿದ ತಕ್ಷಣ ಸ್ಟಿಯರಿಂಗ್ನ್ನು ಎಡಕ್ಕೆ ತಿರುಗಿಸಬೇಕಾದ ಈ ತೀಕ್ಷಣ ತಿರುವಿನಲ್ಲಿ ಕಕ್ಕಾಬಿಕ್ಕಿಯಾಗುವ ಚಾಲಕರು ಎಚ್ಚೆತ್ತುಕೊಳ್ಳುವಷ್ಟರಲ್ಲಿ ನಿಯಂತ್ರಣ ತಪ್ಪುವ ವಾಹನಗಳು ಪಲ್ಟಿಯಾಗುತ್ತಿದೆ.
ಸೂಚನಾ ಫಲಕಗಳು ಇಲ್ಲದ ಕಾರಣಕ್ಕೇ ಅಪಘಾತಗಳು ಸಂಭವಿಸುತ್ತಿದೆ ಎನ್ನುವ ದೂರು ಸಾರ್ವಜನಿಕರಿಂದ ಕೇಳಿಬಂದಾಗ ಎಚ್ಚೆತ್ತುಕೊಂಡ ಹೆದ್ದಾರಿ ಪ್ರಾಧಿಕಾರದವರು ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಜೊತೆಗೆ ರಸ್ತೆಯ ಒಂದು ಬದಿಗೆ ಕಬ್ಬಿಣದ ಕಂಬಗಳನ್ನು ನೆಟ್ಟು ತಡೆಗೋಡೆಯನ್ನೂ ನಿರ್ಮಿಸಿದ್ದರಾದರೂ ಪದೇ ಪದೇ ಈ ಭಾಗದಲ್ಲಿ ಸಂಭವಿಸಿದ ಅಪಘಾತಗಳಿಗೆ ಕಬ್ಬಿಣದ ತಡೆಗೋಡೆ ಜಖಂ ಆಗಿದೆ. ಏನೇ ಮಾಡಿದರೂ ಇಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆಯಲ್ಲಿ ಮಾತ್ರ ಕಡಿಮೆಯಾಗಿಲ್ಲ.
ಪ್ರತೀ ವರ್ಷ ಹತ್ತಾರು ವಾಹನಗಳು ಮಗುಚಿ ಬೀಳುವ, ವೇಗವಾಗಿ ಬರುವ ಬೈಕ್ ಸವಾರರು ಬೈಕ್ ಎದುರಿನಿಂದ ಬರುವ ವಾಹನಕ್ಕೆ ಗುದ್ದಿಕೊಂಡು ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವ ದುರ್ಘಟನೆಗಳು ಒಂದಾದಮೇಲೊಂದರಂತೆ ನಡೆಯುತ್ತಿರುವುದು ನೋಡಿದರೆ ರಸ್ತೆ ನಿರ್ಮಾಣವೇ ವೈಜ್ಞಾನಿಕ ರೀತಿಯಲ್ಲಿ ಆಗಿಲ್ಲವೇನೋ.. ಅದೇ ಕಾರಣಕ್ಕೆ ಇಲ್ಲಿ ಈ ಪರಿಯ ಅಪಘಾತ ಸಂಭವಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಹೊನ್ನಾವರದಿಂದ ಗೇರಸೊಪ್ಪಾ ಮಾವಿನಗುಂಡಿ ವರೆಗೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನೂರಾರು ತೀಕ್ಷ್ಣ ತಿರುವುಗಳು ಇವೆಯಾದರೂ ಗೇರಸೊಪ್ಪಾ ಸೂಳೆಮುರ್ಕಿ ಮತ್ತು ಮುಗ್ವಾ ಬಾಳೆಗದ್ದೆ ತಿರುವಿನಲ್ಲಿ ಸಂಭವಿಸುವಷ್ಟು ಅಪಘಾತಗಳು ಎಲ್ಲಿಯೂ ಸಂಭವಿಸುವುದಿಲ್ಲ ಎನ್ನುವುದು ಪ್ರತೀ ವರ್ಷ ಈ ಭಾಗದಲ್ಲಿ ಸಂಭವಿಸುವ ಅಪಘಾತಗಳನ್ನು ಗಣನೆಗೆ ತೆಗೆದುಕೊಂಡಾಗ ತಿಳಿದುಬರುತ್ತದೆ.
ಹೆದ್ದಾರಿ ಅಪಘಾತಗಳು ಸಂಭವಿಸಿದಾಗ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ಷರಾ ಬರೆದು ಪ್ರಕರಣ ಮುಗಿಸುವ ಬದಲು ಯಾವುದಾದರೂ ಒಂದು ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದರೆ ರಸ್ತೆ ನಿರ್ಮಾಣ ರೀತಿಯಲ್ಲಿಯೇ ಏನಾದರೂ ದೋಷ ಇರಬಹುದಾ ಎನ್ನುವುದನ್ನು ತಿಳಿದುಕೊಳ್ಳಲು ತಜ್ಞರ ಮೊರೆ ಹೋಗುವುದು ಒಳಿತು ಎನ್ನುವ ಅಭಿಪ್ರಾಯವಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಗಮನಹರಿಸುತ್ತದಾ ಎನ್ನುವುದನ್ನು ಕಾದು ನೋಡಬೇಕು.
Leave a Comment