ಹೊನ್ನಾವರ – ನಾಡಿನೆಲ್ಲೆಡೆ ಭಕ್ತವೃಂದವನ್ನು ಹೊಂದಿರುವ ದೇಶ ವಿದೇಶಗಳಿಂದಲೂ ಭಕ್ತಸಮೂಹ ನಿತ್ಯ ಬೇಟಿ ನೀಡುವ ತಾಲೂಕಿನ ಪುರಾಣಪ್ರಸಿದ್ಧ ಶೃದ್ಧಾಕೇಂದ್ರವೆನಿಸಿರುವ ಇಡಗುಂಜಿಯ ಮ್ಹಹತೋಬಾರ ವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ಶುಕ್ರವಾರ ನಡೆಯಲಿದ್ದು ರಥೋತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದೆ.

ನಾರದ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ವಾಲಖಿಲ್ಯ 1500 ವರ್ಷಗಳಿಗೂ ಮಿಗಿಲಾದ ಇತಿಹಾಸವನ್ನು ಹೊಂದಿರುವ ದೇವಾಲಯವಾಗಿದ್ದು ದ್ವಿದಂತನಾಗಿರುವ ಇಡಗುಂಜಿ ಗಣಪನ ಸನ್ನಿಧಿಯಲ್ಲಿ ಬೇಡಿಕೊಂಡ ಸಕಲ ಇಷ್ಟಾರ್ಥಗಳು ಈಡೇರುವ ನಂಬಿಕೆ ಭಕ್ತರ ಮನದಲ್ಲಿ ಇಂದಿಗೂ ಭದ್ರವಾಗಿದೆ. ಸಾಮಾನ್ಯರಿಂದ ನಾಡಿನ ಖ್ಯಾತನಾಮರೆಲ್ಲ ಇಡಗುಂಜಿಗೆ ಬೇಟಿ ನೀಡಿ ಶ್ರೀದೇವರ ದರ್ಶನ ಪಡೆದು ಕೃತಾರ್ಥಭಾವ ಹೊಂದುವುದನ್ನು ಕಾಣಬಹುದಾಗಿದೆ.
ರಥಸಪ್ತಮಿಯಂದು (ಶುಕ್ರವಾರ) ಮಹಾಸ್ಯಂದನ ರಥೋತ್ಸವ ಜರುಗಲಿದ್ದು ರಥೋತ್ಸವದ ಅಂಗವಾಗಿ ರವಿವಾರದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಪ್ರಧಾನ ಅರ್ಚಕ ವೇ.ಮೂ. ಮಂಜುನಾಥ ಶಿವರಾಮ ಭಟ್ಟ ನೇತೃತ್ವದಲ್ಲಿ ಧರ್ಮಕರ್ತರಾಗಿ ವೇ.ಮೂ ನರಸಿಂಹ ಶಿವರಾಮ ಭಟ್ಟ, ಹಾಗೂ ವೇ.ಮೂ.ವಿಷ್ಣು ಭಟ್ಟರ ತಾಂತ್ರಿಕ ತನದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ. ದೇವಾಲಯದ ರಿಸೀವರ್ ಆದ ಜಿಲ್ಲಾ ನ್ಯಾಯಾಧೀಶರ ನಿರ್ದೇಶನದಂತೆ ಕೋವಿಡ್ ನಿಯಮ ಪಾಲನೆಯ ಸರತಿ ಸಾಲು, ವಾಹನ ನಿಲುಗಡೆಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಡಗುಂಜಿ, ಮಾಳಕೋಡ, ಮೋಳಕೋಡ ಭಾಗದ ಗ್ರಾಮಸ್ಥರು ಕಳೆದೊಂದು ವಾರದಿಂದ ರಥ ಕಟ್ಟುವ ತೇರಬಿಟ್ಟಿ ಕೆಲಸದಲ್ಲಿ ತನ್ಮಯತೆಯಿಂದ ತೊಡಗಿಸಿಕೊಂಡಿದ್ದಾರೆ.

ರಥಾರೂಢ ಮಹಾಗಣಪತಿಯ ದರ್ಶನ ಪಡೆದು ಪುನೀತರಾಗಲು ಸಹಸ್ರಾರು ಭಕ್ತರು ಇಡಗುಂಜಿಗೆ ಆಗಮಿಸುವ ನಿರೀಕ್ಷೆ ಇದ್ದು ಆಗಮಿಸುವ ಭಕ್ತರೆಲ್ಲರೂ ಕೋವಿಡ್ ನಿಯಮ ಕಡ್ಡಾಯ ಪಾಲಿಸುವಂತೆ ದೇವಾಲಯದ ಅರ್ಚಕರು ಹಾಗೂ ರಿಸೀವರ್ ಆದ ಜಿಲ್ಲಾ ನ್ಯಾಯಾಧೀಶರು ಕೋರಿದ್ದಾರೆ.


Leave a Comment