ಹೊನ್ನಾವರ: ರಾಜ್ಯಾದ್ಯಂತ ಸಾರಿಗೆ ನೌಕರರ ಒಕ್ಕೂಟ ಕರೆದಿರುವ ಅನಿರ್ದಿಷ್ಟವಧಿ ಮುಷ್ಕರದಿಂದ ಪ್ರಥಮ ದಿನ ತಾಲೂಕಿನಲ್ಲಿ ಬಸ್ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ತಾತ್ಕಲಿಕವಾಗಿ ಬಸ್ ನಿಲ್ದಾಣದ ಹೊರಗಡೆ ಪ್ರತಿದಿನ ಬಸ್ ಆಗಮಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಮುಷ್ಕರದ ಹಿನ್ನಲೆಯಲ್ಲಿ ಮಂಗಳವಾರ ಸಾಯಂಕಾಲದಿಂದಲೇ ದೂರದ ಪ್ರಯಾಣದ ಬಸ್ ಸೇವೆ ಸ್ಥಗಿತಗೊಳಿಸಿರುದರಿಂದ ಮುಷ್ಕರದ ಬಿಸಿ ತಟ್ಟಲಾರಂಭಿಸಿತ್ತು. ಬುಧವಾರ ಸಂಪೂರ್ಣ ಬಸ್ ಇಲ್ಲದೇ ಇರುದರಿಂದ ಪ್ರಯಾಣಿಕರು ಪರದಾಟ ಮಾಡಿದರು. ಸಾರಿಗೆ ಅಧಿಕಾರಿಗಳು ಬದಲಿ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುತ್ತಲ್ಲೆ ದಿನ ಕಳೆದರು.
ಮುಂಜಾಗ್ರತೆಯ ಮುಷ್ಕರ ಮಾಹಿತಿ ದೊರೆತ ಹಿನ್ನಲೆಯಲ್ಲಿ ಗ್ರಾಮೀಣ ಭಾಗದವರು ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿಲ್ಲ. ಸರ್ಕಾರಿ ಕಛೇರಿ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಅನಿವಾರ್ಯ ಕೆಲಸಕ್ಕೆ ಪಟ್ಟಣಕ್ಕೆ ಆಗಮಿಸದವರು ಟೆಂಪೋ ರಿಕ್ಷಾಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂತು.
ಬಸ್ ಮುಷ್ಕರ ಮತ್ತೆ ಆರಂಭವಾಗಿರುದರಿಂದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಆಗುವುದಕ್ಕಿಂತ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿಗಳ ಇರ್ವರ ತಪ್ಪಿನಿಂದ ಈ ಮುಷ್ಕರ ನಡೆಯುತ್ತಿದೆ. ಇಷ್ಟು ವರ್ಷವು ನಷ್ಟದಲ್ಲಿರುವ ಇಲಾಖೆಗೆ ಸಿಬ್ಬಂದಿಗಳ ಕೊಡುಗೆಯನ್ನು ಒಮ್ಮೆ ಅವಲೋಕನ ಮಾಡಲಿ ಸರ್ಕಾರ ಈ ಬಗ್ಗೆ ಯೋಚಿಸಿ ಶಿಘ್ರ ತಿರ್ಮಾಣ ಕೈಗೊಳ್ಳಲಿ
ವಿನಾಯಕ ನಾಯ್ಕ ಪ್ರಯಾಣಿಕ
ಗೇರುಸೊಪ್ಪಾದಿಂದ ಹೊನ್ನಾವರ ಪಟ್ಟಣದ ಕಾಲೇಜಿಗೆ ಬರುವ ನಾನು ಪಾಸ್ ಮಾಡಿ ಹಣ ತುಂಬಿದ್ದೇನೆ. ಈಗ ಮುಷ್ಕರ ಆರಂಭಿಸಿದ್ದಾರೆ. ನಮಗೂ ಕೊರೋನಾದಿಂದ ಆರ್ಥಿಕ ಸಂಕಷ್ಟವಿದೆ. ನಾವು ಕಾಲೇಜಿಗೆ ಬರಬೇಕಾದರೆ ಮತ್ತೆ ಹಣ ನೀಡಿ ಖಾಸಗಿ ವಾಹನವೇರಿ ಬರಬೇಕು. ನಮಗೆ ನ್ಯಾಯ ಕೊಡುವವರು ಯಾರು?
ಸುರೇಶ ಕಾಲೇಜು ವಿದ್ಯಾರ್ಥಿ
Leave a Comment