ಹೊನ್ನಾವರ : ಜಿಲ್ಲಾಪಂಚಾಯತ ಸದಸ್ಯರಾಗಿ. ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಜಿಲ್ಲೆಯ ಹಿರಿಯ ರಾಜಕಾರಣಿ, ಒಕ್ಕಲಿಗರ ಸಮಾಜದ ಹಿರಿಯ ಮುಖಂಡರೂ ಆದ ಶಂಭು ಗೌಡ ಗುಣವಂತೆ ಅವರು ಕೊರೊನಾ ಸೋಂಕಿಗೆ ತುತ್ತಾಗಿ ಬುಧವಾರ ಮರಣ ಹೊಂದಿದ್ದಾರೆ.ಅಪಾರವಾದ ಜೀವನಾನುಭವ, ವಿಶಿಷ್ಟವಾದ ಗ್ರಾಮ್ಯ ಸೊಗಡಿನ ಮಾತಿನ ಮೋಡಿಯಿಂದ ಸದಾ ಜನರನ್ನು ಆಕರ್ಷಿಸುತ್ತಿದ್ದ ಶಂಭು ಗೌಡರು ಇನ್ನು ನೆನಪು ಮಾತ್ರ.
ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಬುಧವಾರಏಕಾಏಕಿ ಜ್ವರ ಉಲ್ಬಣಿಸಿದ ಕಾರಣ ತಾಲೂಕಾಸ್ಪತ್ರೆಗೆ ತೆರಳಿದ್ದರು. ಅದಾಗಲೇ ಪರಿಸ್ಥಿತಿ ಕೈಮೀರಿ ಹೋಗಿದ್ದ ಉಸಿರಾಟದ ಸಮಸ್ಯೆ ತೀವೃವಾಗಿದ್ದು ಆಕ್ಸಿಜನ್ ಸಹ ತೆಗೆದುಕೊಳ್ಳುತ್ತಿರಲಿಲ್ಲ. ತಕ್ಷಣ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಕೊರೊನಾ ಎದುರು ಹೋರಾಟದಲ್ಲಿ ಉಸಿರು ಚೆಲ್ಲಿದ ಶಂಭು ಗೌಡರು ಬಾರದ ಲೋಕಕ್ಕೆ ಹೊರಟುಬಿಟ್ಟರು.ಸಾರ್ವಜನಿಕ ಜೀವನದಲ್ಲಿ ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಇವರು ಅಂದಿನ ಕಾಲದಲ್ಲಿಯೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಜಿಲ್ಲೆಯ ಒಕ್ಕಲಿಗರ ಸಂಘಟನೆಗೂ ಶಕ್ತಿಮೀರಿ ಶ್ರಮಿಸಿದ್ದ ದಿವಂಗತರು ಆದಿಚುಂಚನಗಿರಿ ಶ್ರೀಮಠ ಜಿಲ್ಲೆಗೆ ಬರಲು ಮೂಲ ಕಾರಣಪುರುಷರಲ್ಲಿ ಒಬ್ಬರಾಗಿದ್ದರು.ಜನತಾ ಪರಿವಾರದಲ್ಲಿ ಒಡಕು ಕಾಣಿಸಿಕೊಂಡ ನಂತರ ಜಿಲ್ಲೆಯ ಪ್ರಭಾವಶಾಲಿ ರಾಜಕೀಯ ನಾಯಕ ಆರ್.ವಿ.ದೇಶಪಾಂಡೆಯವರು ಜನತಾ ಪರಿವಾರವನ್ನು ತೊರೆದು ಕಾಂಗ್ರೆಸ್ ಸೇರಿದ ನಂತರ ಅರೊಡನೆಯೇ ಹೆಜ್ಜೆ ಹಾಕಿದ ಶಂಭು ಗೌಡರೂ ಕಾಂಗ್ರೆಸ್ ಸೇರಿದ್ದರು. ಒಂದು ಅವಧಿಗೆ ಜಿಲ್ಲಾ ಪಂಚಾಯತ ಸದಸ್ಯರಾಗಿಯೂ ಆಯ್ಕೆಯಾಗಿದ್ದ ಇವರು ಸಿದ್ದರಾಮಯ್ಯ ಸರ್ಕಾರದಲ್ಲಿ ಆರ್.ವಿ.ಡಿ ಬೆಂಬಲದಿಂದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ರಾಜ್ಯ ಸುತ್ತಿದ್ದರು.ಕಳೆದ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ತೊರೆದು ಕುಮಾರಸ್ವಾಮಿ ಸಮ್ಮುಖದಲ್ಲಿ ಜೆ.ಡಿ.ಎಸ್ ಸೇರಿದ್ದ ಇವರು ಚುನಾವಣೆಯಲ್ಲಿ ಬಿ.ಜೆ.ಪಿಯನ್ನು ಬೆಂಬಲಿಸುವ ಮೂಲಕ ಹಾಲಿ ಶಾಸಕ ಸುನಿಲ್ ನಾಯ್ಕ ಆಪ್ತರಾಗಿ ಗುರುತಿಸಿಕೊಂಡಿದ್ದರು.ತಾಲೂಕಿನ ಅಪಾರವಾದ ಅಭಿಮಾನಿ ಬಳಗವನ್ನು, ಕುಟುಂಬವನ್ನು, ಹಿತೈಷಿಗಳನ್ನು ಅಗಲಿದ್ದಾರೆ.ಆದಿಚುಂಚನಗಿರಿ ಶ್ರೀಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು, ಶ್ರೀಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಕುಮಟಾ ಶಾಖಾ ಮಠದ ಶ್ರೀ ನಿಶ್ಚಲನಂದ ಸ್ವಾಮಿಜಿ, ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ತಾ.ಪಂ.ಸದಸ್ಯ ಗಣಪಯ್ಯ ಗೌಡ,ಕೆಳಗಿನೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ, ಒಕ್ಕಲಿಗ ಸಂಘದ ಅಧ್ಯಕ್ಷ ಟಿ.ಜೆ.ಗೌಡ, ಕಾರ್ಯದರ್ಶಿ ಬಾಲಚಂದ್ರ ಗೌಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ , ಒಕ್ಕಲಿಗ ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಪಕ್ಷದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
Leave a Comment