ಭಟ್ಕಳ: ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ದಿನಕಳೆದಂತೆ ಹೊರಜಿಲ್ಲೆಯ ರೋಗಿಗಳ ದಾಖಲಾತಿ ಹೆಚ್ಚಾಗುತ್ತಿದ್ದು ಇದಕ್ಕೆ ಅಲ್ಲಿಂದ ಕರೆತರುವ ಅಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್ ಪ್ರಮುಖ ಕಾರಣ ಎನ್ನುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ..
ಭಟ್ಕಳದ ಸರ್ಕಾರಿ ಅಸ್ಪತ್ರೆಗೆ ಪ್ರತಿದಿನ ಸಾಗರ, ಶಿವಮೊಗ್ಗ, ಭದ್ರಾವತಿ, ಹಾವೇರಿ, ದಾವಣಗೆರೆ, ಉಡುಪಿ, ಕುಂದಾಪುರ ಕಡೆಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಮೊದಲು ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸೌಲಭ್ಯ, ಜನಪ್ರಿಯತೆ, ರೋಗಿಗಳ ಜೊತೆ ವೈದ್ಯರ ವರ್ತನೆ ಕಾರಣ ಎಂದು ತಿಳಿಯಲಾಗಿತ್ತು. ಆದರೆ ಬರಬರುತ್ತಾ ಈ ಸಂಖ್ಯೆಯಲ್ಲಿ ಹೆಚ್ಚಳ ಆಗಲು ಪ್ರಾರಂಭಿಸಿದೆ.
ಶಿವಮೊಗ್ಗ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಅವಶ್ಯಕತೆ ಇರುವ ರೋಗಿಗಳ ಡಾಟಾ ಕಲೆಕ್ಟ್ ಮಾಡುವ ಅಂಬ್ಯುಲೆನ್ಸ್ ಡ್ರೈವರ್ಗಳು ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆ ಮಾಡುತ್ತಾರೆ. ಇಲ್ಲಿ ವೆಂಟಿಲೇಟರ್, ಆಕ್ಷಿಜನ್ ಸೌಲಭ್ಯದ ಕುರಿತು ಮಾಹಿತಿ ಪಡೆಯುತ್ತಾರೆ. ನಂತರ ರೋಗಿಗಳ ಬಳಿ ತೆರಳಿ ನಾವು ನಿಮಗೆ ಅತಿ ಕಡಿಮೆ ದರದಲ್ಲಿ ವೆಂಟಿಲೇಟರ್ ಸೌಲಭ್ಯ ಒದಗಿಸುತ್ತೇವೆ. ನೀವು ಅಂಬ್ಯುಲೆನ್ಸ್ ಬಾಡಿಗೆ ಹಾಗೂ 40 ರಿಂದ 60 ಸಾವಿರ ರೂಗಳನ್ನು ನೀಡಿದರೆ ಸಾಕು ಎಂದು ಬೇಡಿಕೆ ಇಡುತ್ತಾರೆ. ಹಣ ಕೊಟ್ಟರೆ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಇಲ್ಲವಾದರೆ ಮಂಗಳೂರಿನ ಎನಪೋಯಾ ಆಸ್ಪತ್ರೆಯ ಹೊರಗೆ ಬಿಟ್ಟು ಹೋಗುವ ಪ್ರಕರಣಗಳು ಬೆಳಕಿಗೆ ಬಂದಿದೆ.
ವೆಂಟಿಲೇಟರ್ಗೆ ಹೋಗುವುದು ಎಂದರೆ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಮಾತ್ರ. ಅಂತಹ ರೋಗಿಗಳಿಂದಲೂ ಹಣ ವಸೂಲಿ ಮಾಡುತ್ತಿರುವದು ಅತ್ಯಂತ ಹೀನಾಯಕರ ಸಂಗತಿ ಎಂದು ಡಾ. ಸವಿತಾ ಕಾಮತ ವಿಷಾಧವ್ಯಕ್ತಪಡಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ವೈದ್ಯೆ ಡಾ. ಶಂಶನೂರ ಪ್ರಸ್ತುತ ಭಟ್ಕಳದಲ್ಲಿ ಪ್ರಸೂತಿ ತಜ್ಞೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಭದ್ರಾವತಿ ತಾಲೂಕಿನ ವ್ಯಕ್ತಿಯೊರ್ವರು ಮಂಗಳವಾರ ಕರೆ ಮಾಡಿದ್ದಾರೆ. ನಿಮ್ಮಲ್ಲಿ ವೆಂಟಿಲೇಟರ್ ಇದೆಯಾ. ಅದು ಎಷ್ಟಿದೆ ಎಂದು ಕೇಳಿದ್ದಾರೆ. ಆಸ್ಪತ್ರೆಯ ಮಾಹಿತಿಯನ್ನು ಹೊರಗೆ ಹಾಕಬಾರದು ಎನ್ನುವ ಉದ್ದೇಶದಿಂದ ಏಕೆ ಏನಾಯಿತು ಎಂದು ಕೇಳಿದ ವೈದ್ಯೆ, ‘ನಿಮಗೆ ಒಂದು ವೇಳೆ ಅತಿ ಅವಶ್ಯ ಇದ್ದರೆ ಬನ್ನಿ, ನಿಮಗೆ ನಾವು ಇಲ್ಲಿ ಚಿಕಿತ್ಸೆ ನೀಡುತ್ತೇವೆ’ ಎಂದಿದ್ದಾರೆ.
ಆದಾದ ನಂತರ ಮತ್ತೆ ಮಾರನೆ ದಿನ ಶಿವಮೊಗ್ಗದ ಆಸ್ಪತ್ರೆಯ ವೈದ್ಯರೊರ್ವರು ಡಾ. ಶಂಶನೂರ ಅವರಿಗೆ ಕರೆ ಮಾಡಿ ನಿಮ್ಮ ಬಳಿ ಎಷ್ಟು ವೆಂಟೀಲೇಟರ್ ಇದೆ ಎಂದು ಪ್ರಶ್ನಿಸಿದ್ದಾರೆ. ಏಕೆ ಕೇಳುತ್ತಿರಿ ಎಂದಾಗ ಇಲ್ಲಿನ ಆಸ್ಪತ್ರೆಯಿಂದ 5 ರೋಗಿಗಳು ಭಟ್ಕಳಕ್ಕೆ ಹೊರಡಲು ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಅಚಾನಕ್ಕಾಗಿ ಭಟ್ಕಳ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಕುರಿತು ಅನುಮಾನ ವ್ಯಕ್ತವಾಗಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ.
Leave a Comment