ಯಲ್ಲಾಪುರ: ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಧಾರವಾಡ ಲಕ್ಷ್ಮೀ ಸಿಂಗಂನಕೇರಿ ನಿವಾಸಿ ಹಾಲಿ ಕಾರವಾರದ ಶಿರವಾಡದಲ್ಲಿ ವಾಸವಾಗಿದ್ದ ಹುಲಗಪ್ಪ ಯಾನೆ ಹುಲಿಗ್ಯಾ ಯಾನೆ ಹುಲಗೇಶ ಹನಮಂತ ಬಂಡಿವಡ್ಡರ್(32) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕ ಬಂಧಿತ ಆರೋಪಿಯಾಗಿದ್ದು ಇವರಿಂದ ಸುಮಾರು 2.20 ಲಕ್ಷ ಮೌಲ್ಯದ
1ನೆಕ್ಲೇಸ್, 2 ಉಂಗುರ, ಎರಡು ಜೊತೆ ಕಿವಿಯೋಲೆ ಸೇರಿದಂತೆ 42 ಗ್ರಾಂ ಬಂಗಾರದ ಆಭರಣ, 100 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಳೆದ 3ರಿಂದ 4 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ, ಸಿದ್ಧಾಪುರ, ಭಟ್ಕಳ ಶಿವಮೊಗ್ಗ ಜಿಲ್ಲೆಯ ಸೊರಬ, ಅನವಟ್ಟಿ ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಭಾಗಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು, ಯಲ್ಲಾಪುರ ಪಟ್ಟಣದ ಮತ್ತು ಗ್ರಾಮೀಣ ಭಾಗಗಳಲ್ಲಿ ಮನೆ ಹಾಗೂ ಬ್ಯಾಂಕುಗಳ ಕಳ್ಳತನ ನಡೆಸಿದ್ದರು ಎಂದು ತಿಳಿದು ಬಂದಿದೆ.
ಯಲ್ಲಾಪುರದ ಶಾರದಾಗಲ್ಲಿ ನಿವಾಸಿ ಚಂದ್ರಶೇಖರ ನರಸಿಂಹ ಹೆಗಡೆ ಎನ್ನುವವರು ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಕುರಿತು ಕಳೆದ ಡಿಸೆಂಬರ್ 19 ರಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ತನಿಖೆ ಕೈಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಶಿರಸಿ ಡಿ.ವೈ.ಎಸ್. ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ನಿರೀಕ್ಷಕ ಸುರೇಶ ಯಳ್ಳೂರ್ ನೇತೃತ್ವದಲ್ಲಿ ಪಿ.ಎಸ್. ಐ ಮಂಜುನಾಥ ಗೌಡರ್, ಮುಷಾಹಿದ್ ಅಹ್ಮದ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment