ಯಲ್ಲಾಪುರ ಭಗವಂತನ ಕಡೆ ಮಾರ್ಗ ತೋರಿಸುವ ಶಕ್ತಿ ಗುರುವಿಗೆ ಇದೆ. ಜಗತ್ತಿನಲ್ಲಿ ಗುರುಗಳಿಗಿಂತ ದೊಡ್ಡವರಿಲ್ಲ. ಸತ್ಯ ಮಾರ್ಗದ ಕಡೆ ನಡೆಯಲು ಗುರುವಿನ ಅಗತ್ಯ ಅನಿವಾರ್ಯ ಎಂದು
ಡಾ.ಅರುಣ ಉಳ್ಳಾಲ ರವರು ಹೇಳಿದರು.
ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಗುರು ಪೂರ್ಣಿಮೆ’ಕಾರ್ಯಕ್ರಮದಲ್ಲಿ ಆನಲೈನ್ ಮೂಲಕ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವಿದ್ಯಾರ್ಥಿಗಳ ವಿನಯತೆ ಹಾಗೂ ಸದ್ಗುಣಗಳೇ ಗುರುವಿಗೆ ಸಲ್ಲಿಸುವ ಗೌರವವಾಗಿದೆ. ವಿದ್ಯಾರ್ಥಿಗಳ ಜೀವನ ತ್ರಿಕೋನ ಆಕಾರದಂತೆ. ಅದರಲ್ಲಿ ಒಂದು ಕಡೆ ತಂದೆ, ಇನ್ನೊಂದು ಕಡೆ ತಾಯಿ ಇರುವರು. ಮುಂಬಾಗದಲ್ಲಿ ಗುರು ಬದುಕನ್ನು ಮುನ್ನಡೆಸುವರು.
ಜೀವನದ ಒಟ್ಟು ನಡೆಯಲ್ಲಿ ಗುರುವಿನ ಪಾತ್ರ ಅತಿ ದೊಡ್ಡದಾಗಿದೆ ಎಂದರು.. ಇಂದಿನ ಕಾಲಮಾನದಲ್ಲಿ ಕಾನೂನಿನ ಬಲೆಯೊಳಗೆ ಸಿಲುಕಿದ ಜಿಂಕೆಯ ಪರಿಸ್ಥಿತಿ ಗುರುವಿನದ್ದಾಗಿದೆ. ಹೀಗಾಗಿ ಗುರು ಆದವನು ಬಹಳ ಎಚ್ಚರದಿಂದ ಇರಬೇಕು. ಜೊತೆಗೆ, ಮೃದುವಾಗಿ ಬೋಧನೆ ಮಾಡಿ ಮಗುವಿನ ಮನಸ್ಸು ಗೆಲ್ಲುವ ಸಾಮರ್ಥ್ಯ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು. ಸಮಾಜಕ್ಕೆ ಪರಿಪೂರ್ಣ ಗುರುವಿನ ಕೊರತೆಯ ಜೊತೆ ಪ್ರಾಮಾಣಿಕ ಹಾಗೂ ಪ್ರಜ್ಞಾವಂತ ವಿದ್ಯಾರ್ಥಿಗಳ ಕೊರತೆಯೂ ಇದೆ. ನಮಗೆಲ್ಲ ಆದರ್ಶರ ನಡೆ ದಾರಿ ದೀಪವಾಗಬೇಕು.
ಪ್ರತಿಯೊಬ್ಬರ ಮೇಲೆಯೂ ಸಮಾಜದ ಋಣವಿದ್ದು, ನಾವು ಕಲಿತ ವಿದ್ಯೆ ಹಾಗೂ ಯಶಸ್ಸಿನಲ್ಲಿ ಒಂದು ಪಾಲನ್ನು ಸಮಾಜಕ್ಕೆ ನೀಡಬೇಕು ಎಂದು ಅವರು ಕರೆ ನೀಡಿದರು.
ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆ ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಕುಮಾರಿ ಅಪೂರ್ವ ಕೆರೆತೋಟ ಪ್ರಾರ್ಥಿಸಿದರು. ವೀಣಾ ಭಾಗ್ವತ ಸ್ವಾಗತಿಸಿದರು. ಸೀತಾರಾಮ ಗೌಡ ನಿರ್ವಹಿಸಿದರು. ಪ್ರಶಿಕ್ಷಣಾರ್ಥಿಯಾದ ದೀಪಶ್ರೀ ಭಟ್ಟ ವಂದಿಸಿದರು.
ಬಿಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್ .ಎಲ್ .ಭಟ್ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಪಕಿ ಮುಕ್ತಾ ಶಂಕರ,ಬೆಳಕಿನಂದ ಸಂಚಾಲಕಿ ಕವಿತಾ ಹೆಬ್ಬಾರ ಹಾಗೂ ಶೇಖರ ಬೇಳಾಲ ಉಪಸ್ಥಿತರಿದ್ದರು.ಪಾಲಕರು ವಿದ್ಯಾರ್ಥಿಗಳು ಪ್ರಶಿಕ್ಷಣಾರ್ಥಿಗಳು ಗೂಗಲ್ ನೇರ ಪ್ರಸಾರ ವೀಕ್ಷಿಸಿದರು.
Leave a Comment