
ಯಲ್ಲಾಪುರ: ಕಷ್ಟದಲ್ಲಿ ಸಿಲುಕಿಕೊಂಡವರಿಗೆ ಸಹಾಯ ಮಾಡುವುದು ಮಾನವ ಧರ್ಮ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಹಾಗೂ ಉದ್ಯಮಿ ಶ್ರೀನಿವಾಸ ಹೆಬ್ಬಾರ್ ಹೇಳಿದರು. ಅವರು ಶುಕ್ರವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನೆರೆ ಪ್ರವಾಹದ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಗೌರವಿಸಿ ಮಾತನಾಡಿದರು. ಅಪಾಯದಲ್ಲಿ ಇರುವವರನ್ನು ರಕ್ಷಿಸಲು ಬೇರೆ ಯಾರೋ ಬರುತ್ತಾರೆ ಎಂದು ಕಾಯುವ ಬದಲು ಅನಾಹುತ ತಪ್ಪಿಸಲು ಜನ ಮುಂದೆ ಬರಬೇಕು. ಜನರ ನೋವಿಗೆ ಸ್ಪಂದಿಸುವ ದೊಡ್ಡಗುಣವನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು. ಸೇವೆ ಮಾಡುವದರಲ್ಲಿನ ಖುಷಿಯನ್ನು ಅನುಭವಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಮಂಜುನಾಥ ಸಾಲಿ ಮಾತನಾಡಿ, ಅಗ್ನಿ ಶಾಮಕ ದಳವು ಬೆಂಕಿ ಅವಘಡ, ಅಪಘಾತ ಮೊದಲಾದ ನೋವಿನ ವೇಳೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕೆಲಸ ಗುರುತಿಸಿ ಶಿಕ್ಷಣ ಸಂಸ್ಥೆಯೊಂದು ಗೌರವಿಸುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಮೂಲಭೂತ ಸೌಕರ್ಯದ ನಡುವೆಯೂ 18ರಕ್ಷಣಾ ತಂಡಗಳನ್ನು ಮಾಡಿ ಕದ್ರಾ ಹಾಗೂ ಕಳಚೆಯಲ್ಲಿ ಸಾವಿರಕ್ಕೂ ಅಧಿಕ ನೆರೆ ಸಂತ್ರಸ್ತರನ್ನು ರಕ್ಷಿಸಿದ ಬಗ್ಗೆ ವಿವರಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ನರಸಿಂಹ ಕೋಣೆಮನೆ ಮಾತನಾಡಿ, ಪಠ್ಯದ ಬೋಧನೆ ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ ಬದುಕಿನ ಪಾಠ ಕಲಿಸಲು ವಿಶ್ವದರ್ಶನ ಸೇವಾ ಕೆಲಸ ಶುರು ಮಾಡಿದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ಸಂತೃಪ್ತಿಯಿದೆ. ಸಾಮಾಜಿಕ ಕಾಳಜಿಯಿಂದ ಈ ಕೆಲಸ ಮಾಡಲಾಗಿದ್ದು, ಪ್ರತಿಯೊಬ್ಬರಿಗೂ ಪರೋಪಕಾರ ಹಾಗೂ ಸೇವೆ ಪ್ರೇರಣೆಯಾಗಬೇಕು. ಜೊತೆಗೆ ಸೇವೆ ಮಾಡುವವರನ್ನು ಗುರುತಿಸುವ ಕೆಲಸವನ್ನು ಆಗಬೇಕು ಎಂದು ಗೌರವ ಸಮರ್ಪಣೆ ಮಾಡಲಾಗಿದೆ ಎಂದರು. ವಿಶ್ವದರ್ಶನ ಸೇವಾ ತಂಡದ ಸದಸ್ಯೆ ವನಿತಾ ಭಾಗ್ವತ್ ಹಾಗೂ ಅಗ್ನಿ ಶಾಮಕ ದಳ ಸಿಬ್ಬಂದಿ ನಾಗೇಶ ದೇವಾಡಿಗ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ ಅನುಭವ ಹಂಚಿಕೊಂಡರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್ ಭಟ್ಟ ಮಾತನಾಡಿದರು. ನೆರೆ ಪ್ರವಾಹದ ವೇಳೆ ಶೌರ್ಯ ಮೆರೆದ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಎನ್ ಸುರೇಶ್, ಭೀಮರಾವ ಉಪ್ಪಾರ್, ಹಣಮಂತ ನಾಯ್ಕ, ಪದ್ಮನಾಭ ಕಾಂಡನ, ಬಾರಬೋಜಾ ಟೋನಿ, ಜಯಸಿಂಗ್ ಟೋಸಣ್ಣನವರ್, ರವಿ ಹವಲ್ದಾರ್, ರಮೇಶ ಬೀರಾದರ, ನಾಗೇಶ ದೇವಾಡಿಗ, ಅಮಿತ ಗುನಗಿ, ಪ್ರಶಾಂತ ಬಾರ್ಕಿ, ಅಡಿವೆಪ್ಪ ಪುಂಜಗ ಅವರನ್ನು ಸನ್ಮಾನಿಸಲಾಯಿತು. ಅಗ್ನಿಶಾಮಕ ದಳದ ಯಲ್ಲಾಪುರ ಠಾಣಾಧಿಕಾರಿ ಶಂಕರ್ ಅಂಗಡಿ ಹಾಗೂ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಮಂಜುನಾಥ ಸಾಲಿ ಗೌರವ ಸ್ವೀಕರಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಇದ್ದರು. ಡಾ.ಕವಿತಾ ಹೆಬ್ಬಾರ್ ನಿರ್ವಹಿಸಿದರು. ಅನನ್ಯಾ ಹಳೆಮನೆ ತಂಡದವರು ಸೇವಾ ಗೀತೆ ಹಾಡಿದರು. ಮುಕ್ತಾ ಶಂಕರ್ ಸ್ವಾಗತಿಸಿದರು. ಗಣೇಶ ಭಟ್ಟ ವಂದಿಸಿದರು. ಮಕ್ಕಳು ಹಾಗೂ ಪಾಲಕರು ಆನಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.
Leave a Comment