ಹೊನ್ನಾವರ : ತಾಲೂಕಿನ ನೆರೆಪೀಡಿತ ಪ್ರದೇಶವಾದ ಖರ್ವಾ ಮತ್ತು ಹಡಿನಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆರೆ ಹಾವಳಿ ಸಮಯದಲ್ಲಿ ತುರ್ತು ಕಾರ್ಯಾಚರಣೆಗೆ ಭಟ್ಕಳ ಶಾಸಕ ಸುನೀಲ ನಾಯ್ಕ ಎರಡು ದೋಣಿಯನ್ನು ವೈಯಕ್ತಿಕವಾಗಿ ನೀಡಿದರು.ದೋಣಿ ಹಸ್ತಾಂತರದ ಬಳಿಕಹಡಿನಬಾಳ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸುನೀಲ ನಾಯ್ಕ ಮಾತನಾಡಿ ಈ ಭಾಗದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡು ಮಾಡುವುದು ನೆರೆಹಾವಳಿ.
ಕಳೆದ ವರ್ಷ ನೆರೆ ಬಂದಾಗ ಟೊಂಕದಿಂದ ತರಬೇಕಾಯಿತು. ನೆರೆ ಬರುವ ಪ್ರದೇಶದ ಒಂದೊಂದು ಪಂಚಾಯಿತಿಯಲ್ಲೂ ನಾಲ್ಕು ದೋಣಿಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಎರಡು ದೋಣಿ ವೈಯಕ್ತಿಕವಾಗಿ ನೀಡಿದ್ದೇನೆ.ಮತ್ತೆ ಎಷ್ಟು ದೋಣಿ ಬೇಕು ಹೇಳಿ ಗ್ರಾಮ ಪಂಚಾಯತದಿಂದ ವ್ಯವಸ್ಥೆ ಮಾಡಲು ತಿಳಿಸುತ್ತೇನೆ. ಒಂದೊಮ್ಮೆ ಗ್ರಾಮ ಪಂಚಾಯತದವರು ವ್ಯವಸ್ಥೆ ಮಾಡದೇ ಇದ್ದಲ್ಲಿ ನಾನೆ ವೈಯಕ್ತಿಕವಾಗಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಕೆಲವರು ರಾಜಕಾರಣದ ತೆವಲಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಅಂತಹ ಅಗತ್ಯ ನನಗಿಲ್ಲ. ಜನರ ಜೊತೆ ನಿಂತು ಕೆಲಸ ಮಾಡುತ್ತಿದ್ದೇನೆ.ನೆರೆಹಾವಳಿ ಬಂದಾಗ ಪಕ್ಷಾತೀತವಾಗಿ ಕೆಲಸ ಮಾಡೋಣ, ಚುನಾವಣೆ ಬಂದಾಗ ಪಕ್ಷ ನೋಡೋಣ ಎಂದು ವಿರೋಧಿಸುವರಿಗೆ ಟಾಂಗ್ ನೀಡಿದರು.ಸಿಪಿಐ ಶ್ರೀಧರ ಎಸ್. ಆರ್. ಮಾತನಾಡಿ ನೆರೆಹಾವಳಿ ಬಂದಾಗ ತುರ್ತಾಗಿ ರಕ್ಷಣಾ ವ್ಯವಸ್ಥೆಗೆ ದೋಣಿಯ ಅಗತ್ಯವಿತ್ತು. ಅಂತಹ ಅಗತ್ಯವನ್ನು ಶಾಸಕರು ಪೂರೈಸಿದ್ದಾರೆ. ನೆರೆಹಾವಳಿ ಸಂದರ್ಭದಲ್ಲಿ ತಕ್ಷಣ ಉಪಯೋಗಕ್ಕೆ ಸಿಗುವಂತೆ ಪಂಚಾಯಿತಿಗಳು ನಿರ್ವಹಣೆ ಮಾಡಬೇಕು.
ಆ ಸಮಯದಲ್ಲಿ ಬಳಕೆಗೆ ಬರುವ ಲೈಫ್ ಜಾಕೆಟ್ ಮತ್ತು ರಿಂಗ್ ವ್ಯವಸ್ಥೆ ಗ್ರಾಮ ಪಂಚಾಯತದವರು ವ್ಯವಸ್ಥೆ ಮಾಡಿಕೊಳ್ಳಬೇಕು. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವ ಮೋಸದ ಬಗ್ಗೆ ಗಮನವಿರಲಿ ಎಡಿಟ್ ಮಾಡಿದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಳಸಿ ಯಾಮಾರಿಸುತ್ತಾರೆ. ನಿಮ್ಮ ಕಾಳಜಿಯಲ್ಲಿ ನೀವು ಇರಿ ಇತ್ತೀಚಿಗೆ ಇಂತಹ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.
ಗ್ರಾಮ ಪಂಚಾಯತ ಸದಸ್ಯ ಸಚಿನ್ ಶೇಟ್ ಸ್ವಾಗತಿಸಿ ಗಣಪತಿ ಬಿಟಿ ವಂದಿಸಿದರು. ತಾ.ಪಂ.ಸದಸ್ಯ ಆರ್.ಪಿ.ನಾಯ್ಕ ವಿ. ಎಸ್. ಎಸ್. ಬ್ಯಾಂಕ್ ಅಧ್ಯಕ್ಷ ಹರಿಯಪ್ಪ ನಾಯ್ಕ, ಗ್ರಾ. ಪಂ. ಅಧ್ಯಕ್ಷರಾದ ವಿಘ್ನನೇಶ್ವರ ಹೆಗಡೆ, ಮಂಜುನಾಥ ನಾಯ್ಕ, ಶ್ರೀಧರ ನಾಯ್ಕ, ವಿನಾಯಕ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.,
ನೆರೆ ಬಂದಾಗ ಗ್ರಾಮಕ್ಕೆ ಅನೂಕೂಲ ಆಗಲು ದೋಣಿ ವ್ಯವಸ್ಥೆ ಕಲ್ಪಿಸಲು ಪಂಚಾಯತಿಗೆ ಶಾಸಕ ಸುನೀಲ ನಾಯ್ಕ ಆಗಮಿಸಿದರೆ ಸ್ಥಳಿಯ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರು ಗೈರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೌಲಭ್ಯದ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎನ್ನವ ಮಾತು ಸಾರ್ವಜನಿಕವಲಯದಲ್ಲಿ ಕೇಳಿಬಂತು.
Leave a Comment