ಹೊನ್ನಾವರ: ವಿದ್ಯುತ್ ಇಲಾಖೆ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕಕರ ಸಂಘದ ಹೊನ್ನಾವರ ಘಟಕದ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿ ರೂಪರೇಷೆಗಳನ್ನು ಸಿದ್ದಪಡಿಸಿದ್ದಾರೆ.
ಹೊನ್ನಾವರ ಹೆಸ್ಕಾಂ ಕಚೇರಿಯ ಆವರಣದಲ್ಲಿ ಆಯೋಜಿಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ವಿನಾಯಕ ನಾಯ್ಕ ಮಾತನಾಡಿ, ಖಾಸಗೀಕರಣದ ಕಾಯಿದೆಯಿಂದ ರೈತರಿಗೆ, ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ ವಿದ್ಯುತ್ ಸ್ಥಗಿತವಾಗುವುದು. ಈ ಉದ್ಯೋಗವನ್ನೆ ನಂಬಿರುವ ಯುವಕ ಯುವತಿಯರು ಭವಿಷ್ಯದಲ್ಲಿ ನಿರುದ್ಯೋಗಿಗಳಾಗುವರು. ನಮ್ಮ ಜೊತೆಗೆ ಹೊರಗುತ್ತಿಗೆ ನೌಕರರ ಭವಿಷ್ಯ, ಗುತ್ತಿಗೆದಾರರ ಭವಿಷ್ಯ ಹಾಳಾಗುವುದು. ಬಂಡವಾಳಶಾಹಿಗಳ ಹಿಡಿತಕ್ಕೆ ಒಳಪಟ್ಟರೆ ಅವರು ನಿಗದಿ ಪಡಿಸುವ ವಿದ್ಯುತ್ ದರಕ್ಕೆ ಒಳಪಡಬೇಕು.
ಇವೆಲ್ಲವನ್ನೂ ಜನಸಾಮಾನ್ಯರಿಗೆ ಅರಿವು ಮೂಡಿಸಿ ನಮ್ಮನ್ನು ಬೆಂಬಲಿಸುವಂತೆ ಪ್ರತಿಯೊಬ್ಬ ನೌಕರರು ಮತ್ತು ಅಧಿಕಾರಿಗಳು ಮುಖ್ಯ ಪಾತ್ರವಹಿಸಬೇಕು. ಸ್ಥಳೀಯ ರೈತ ಸಂಘಟನೆ, ಕನ್ನಡ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆ ನಮ್ಮ ಬೆಂಬಲಕ್ಕೆ ಬರುವ ಹಾಗೆ ಮನವೊಲಿಸಬೇಕು. ಇದು ನಮ್ಮೆಲ್ಲರ ಅಳಿವು ಉಳಿವಿನ ಪ್ರಶ್ನೆ ಸ್ಥಳೀಯವಾಗಿ ನಮ್ಮೆಲ್ಲರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಿ ಮುಂದಿನ ಯಾವುದೇ ಹೋರಾಟಕ್ಕು ನಾವು ಸದಾ ಸಿದ್ದರಾಗಬೇಕು ಎಂದು ಹೇಳಿದರು. ನೌಕಕರ ಸಂಘದ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Leave a Comment