ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಜಲವಳ್ಳಿ ಗ್ರಾಮದ ಕಾನಗೋಡದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯದ ಎರಡು ಕಾಣಿಕೆ ಹುಂಡಿ ಹಾಗೂ ದೇವಾಲಯದಲ್ಲಿದ್ದ ಗಂಟೆಗಳನ್ನು ಕಳ್ಳರು ದೋಚಿದ ಘಟನೆ ವರದಿಯಾಗಿದೆ.
ರವಿವಾರದ ಅನಂತ ಚತುರ್ದಶಿ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಸಹಸ್ರಾರು ಭಕ್ತರು ದೇವಾಲಯಕ್ಕೆ ಬೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದ್ದರು. ಅನಂತ ನೋಪಿ ಸಂಪನ್ನವಾದ ಒಂದು ದಿನದಲ್ಲಿಯೇ ಅದೂ ಹಾಡಹಗಲೇ ಕಳ್ಳತನ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆಘಾತಮೂಡಿಸಿದೆ.
ಮಧ್ಯಾಹ್ನ 1.30 ರಿಂದ 3.30 ಅವಧಿಯಲ್ಲಿ ಕಳ್ಳತನ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದೇವಾಲಯದ ಅರ್ಚಕರ ಮನೆ ದೇವಾಲಯದ ಸಮೀಪವೇ ಇದೆಯಾದರೂ ನಿತ್ಯವೂ ಯಾರಾದರೂ ಸ್ಥಳಿಯರು ದೇವಾಲಯಕ್ಕೆ ಬೇಟಿನೀಡುತ್ತಿರುತ್ತಾರೆ ಎನ್ನುವ ಕಾರಣಕ್ಕೆ ಮಧ್ಯಾಹ್ನ ದೇವಾಲಯಕ್ಕೆ ಬೀಗ ಹಾಕುತ್ತಿರಲಿಲ್ಲ.
ದೇವಾಲಯ ಹೆದ್ದಾರಿಯಿಂದ ಸುಮಾರು ಎರಡು ಕಿಲೋಮೀಟರ್ ಅಷ್ಟು ದೂರ ಇದ್ದು ದಿಬ್ಬಣಗಲ್ ಇಂದ ಮತ್ತು ಸುಳಗೋಡ ಇಂದ ದೇವಾಲಯಕ್ಕೆ ರಸ್ತೆ ಸಂಪರ್ಕವಿದೆ. ನಿತ್ಯವೂ ನೂರಾರು ಭಕ್ತರು ದೇವಾಲಯಕ್ಕೆ ಬೇಟಿ ನೀಡುತ್ತಾರಾದರೂ ಮಧ್ಯಾಹ್ನದ ಪೂಜೆಯ ನಂತರ ದೇವಾಲಯದ ಬಳಿ ಜನರ ಓಡಾಟ ಕಡಿಮೆ ಇರುತ್ತದೆ. ದೇವಾಲಯದ ಕಾಣಿಕೆ ಹುಂಡಿಯನ್ನು ಪ್ರತಿ ತಿಂಗಳ ಮೊದಲೆ ದಿನ ಕಾಣಿಕೆ ಹುಂಡಿಯಿಂದ ಹಣವನ್ನು ಆಡಳಿತ ಮಂಡಳಿಯವರು ತೆಗೆಯುತ್ತಿದ್ದರು.
ಅನಂತ ಚತುರ್ದಶಿ ದಿನ ಸಹಸ್ರಾರು ಭಕ್ತರು ಬೇಟಿ ನೀಡಿರುವ ಹಿನ್ನಲೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿರಬಹುದು ಎನ್ನುವುದನ್ನು, ಮಧ್ಯಾಹ್ನ ಸಮಯದಲ್ಲಿ ದೇವಾಲಯದಲ್ಲಿ ಯಾರೂ ಇರುವುದಿಲ್ಲ ಎನ್ನುವುದನ್ನೆಲ್ಲಾ ಲೆಕ್ಕ ಹಾಕಿಯೇ ಕಳ್ಳರು ದೇವಾಲಯದ ಹುಂಡಿ ಕದ್ದಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಆಡಳಿತ ಕಮಿಟಿ ಕಾರ್ಯದರ್ಶಿ ರಾಜು ಹೆಗಡೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.
Leave a Comment