ವಾಡಿ: ಕುಟುಂಬ ಸದಸ್ಯರನ್ನು ಕಾಡಿದ ಚಿಕನ್ ಫಾಕ್ಸ್ ರೋಗ ಲಕ್ಷಣದ ಕಲೆಗಳು ಇಬ್ಬರು ಬಾಲಕರನ್ನು ಬಲಿ ಪಡೆದ ನಂತರ ನಾಲವಾರ ಗ್ರಾಮದ ಸ್ಟೇಷನ್ ಬಡಾವಣೆಯ ಜನರು ಜೀವ ಭಯ ಎದುರಿಸುತ್ತಿದ್ದಾರೆ. ಪಟೇಲ ಕುಟುಂಬದ ಮೂವರು ಇದೇ ಮಹಾಮಾರಿ ಕಾಯಿಲೆಯಿಂದ ಬಳಲಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತ ಓಣಿಯ ಜನರು ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸಲು ಹೆದರುತ್ತಿದ್ದಾರೆ.
ಮಾರಣಾಂತಿಕವಲ್ಲದ ಚಿಕನ್ ಫಾಕ್ಸ್ ರೋಗ ಗ್ರಾಮಸ್ಥರ ಎದೆ ನಡುವಂತೆ ಮಾಡಿದ್ದು, ಬಾಲಕರಾದ ಇಮ್ರಾನ್ (೯) ಮತ್ತು ರೆಹಮಾನ್ (೧೬) ದೇಹವನ್ನು ವ್ಯಾಪಿಸಿದ್ದ ಕಪ್ಪು ಮತ್ತು ರಕ್ತ ರೂಪದ ಕೆಂಪು ಕಲೆಗಳಿಂದ ಬಳಲಿ ಮೃತಪಟ್ಟ ಘಟನೆಗೆ ಇಡೀ ಊರು ಬೆಚ್ಚಿಬಿದ್ದಿದೆ. ತಾಯಿ ಹಫೀಜಾಬೇಗಂ ಮತ್ತು ಇವರ ಇನ್ನಿಬ್ಬರು ಮಕ್ಕಳಿಗೂ ರೋಗ ಅಂಟಿಕೊಂಡಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.
ಅದೃಷ್ಠವಶಾತ್ ಆಸ್ಪತ್ರೆಗೆ ದಾಖಲಾದ ಬಳಿಕ ಮೃತ ಬಾಲಕರ ತಾಯಿ ಮತ್ತು ಸಹೋದರ-ಸಹೋದರಿಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹತ್ತೇ ದಿನದಲ್ಲಿ ಇಬ್ಬರು ಮಕ್ಕಳನ್ನು ದಫನ್ ಮಾಡಿ ಆಸ್ಪತ್ರೆಯಲ್ಲಿ ತಾಯಿ ಗೋಳಾಡುತ್ತಿದ್ದರೆ, ಮೂರು ತಿಂಗಳ ಹಿಂದಷ್ಟೇ ದುಡಿಯಲು ದುಭೈ ದೇಶಕ್ಕೆ ಹೋಗಿರುವ ಹಫೀಜಾಬೇಗಂ ಅವರ ಪತಿ ಮಹೆಬೂಬ ಪಟೇಲ್, ಮರಳಿ ಭಾರತಕ್ಕೆ ಬರಲಾಗದೆ ಹೆಂಡತಿ ಮಕ್ಕಳ ದುರಂತ ಕಥೆ ಕೇಳಿ ಮನದಲ್ಲೇ ಮಮ್ಮಲ ಮರುಗುತ್ತಿದ್ದಾರೆ.
ಓಣಿ ಜನರ ಆರೋಗ್ಯ ತಪಾಸಣೆ ಆರಂಭ: ಪಟೇಲ ಕುಟುಂಬ ಸದಸ್ಯರ ನಂತರ ಬಡಾವಣೆಯ ಇತರ ಕುಟುಂಬಗಳಿಗೂ ಈ ವಿಚಿತ್ರ ರೋಗ ಹರಡುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು, ಇದು ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಜ.೩೧ ರಂದು ಕಾಯಿಲೆ ಮರಣಮೃದಂಗ ಭಾರಿಸಿದ ಬಳಿಕ ಎಚ್ಚೆತ್ತ ತಾಲೂಕು ಆರೋಗ್ಯ ಇಲಾಖೆ, ರೋಗ ಲಕ್ಷಣ ಇರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ.
ಆಶಾ ಕರ್ಯರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ನಾಲವಾರ ಸ್ಟೇಷನ್ ಬಡಾವಣೆಯ ಜನರ ಮನೆ ಮನೆಗೆ ತೆರಳಿ ರಕ್ತದ ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ. ಬಡಾವಣೆಯ ನಿವಾಸಿಗಳ ರೋಗದ ಲಕ್ಷಣದ ಮೇಲೆ ನಿಗಾವಹಿಸಿರುವ ಆಶಾ-ಆರೋಗ್ಯ ಕರ್ಯರ್ತರು, ಪ್ರತಿದಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಒಟ್ಟಾರೆ ಎರಡು ಎಳೆಯ ಜೀವಗಳು ರೋಗಕ್ಕೆ ಬಲಿಯಾದ ಬಳಿಕ ಆರೋಗ್ಯ ಇಲಾಖೆಯಿಂದ ಜನರ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ರೋಗ ಹರಡಿದ ತಕ್ಷಣ ಆಸ್ಪತ್ರೆಗೆ ಹೋಗದೇ ಮೌಢ್ಯಾಚರಣೆಗೆ ಮುಂದಾಗಿ ಕಾಲಹರಣ ಮಾಡುವ ಪದ್ಧತಿ ಇಲ್ಲಿನ ಜನರಲ್ಲಿದೆ ಎಂಬುದು ವಿಶ್ವಾಸರ್ಹ ಮೂಲಗಳ ಆರೋಪವಾಗಿದೆ.
“ಇಬ್ಬರು ಮಕ್ಕಳು ಮೃತಪಟ್ಟು ಇನ್ನೂ ಮೂವರು ಆಸ್ಪತ್ರೆಗೆ ದಾಖಲಾದ ಬಳಿಕ ನಾಲವಾರ ಗ್ರಾಮದ ಸ್ಟೇಷನ್ ಬಡಾವಣೆಯ ನಿವಾಸಿಗಳ ರಕ್ತ ಮಾದರಿ ಸಂಗ್ರಹಿಸಲಾಗುತ್ತಿದೆ. ಆಶಾ ಕರ್ಯರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದಾರೆ. ಚಿಕನ್ ಪಾಕ್ಸ್ ಕಾಯಿಲೆ ಪತ್ತೆಗಾಗಿ ಪರೀಕ್ಷೆ ನಡೆಯುತ್ತಿದೆ. ಕುಟುಂಬಕ್ಕೆ ವ್ಯಾಪಿಸಿ ಇಬ್ಬರ ಬಲಿ ಪಡೆದ ರೋಗ ಯಾವೂದು ಎಂಬುದು ಪ್ರಯೋಗಾಲಯದ ವರಿದಿ ಬಂದ ನಂತರ ಬಹಿರಂಗ ಪಡಿಸುತ್ತೇವೆ. ಐದಾರು ದಿನದಲ್ಲಿ ಇದು ಬೆಳಕಿಗೆ ಬರಲಿದೆ”
-ಡಾ//ಅಮರದೀಪ ಪವಾರ
THO ಚಿತ್ತಾಪುರ
Leave a Comment