ಸಿದ್ದಾಪುರ: ಸರಕಾರಿ ಭೂಮಿಗಳನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಈ ಮೂಲಕ ಅರಣ್ಯ ರಕ್ಷಣೆ, ಪರಿಸರ ರಕ್ಷಣೆ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ನಾಗರಾಜ ನಾಯ್ಕ ತಿಳಿಸಿದ್ದಾರೆ.
ಅರಣ್ಯ ನಾಶದಿಂದ ಪರಿಸರ ಮಾಲಿನ್ಯ ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ದಿನದಿಂದ ದಿನಕ್ಕೆ ನಾವು ಅರಣ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಅರಣ್ಯವನ್ನು ಕಡಿದು ಅತಿಕ್ರಮಣ ಮಾಡುತ್ತಿರುವುದೇ ಇದಕ್ಕೆ ಮೂಲ ಕಾರಣ. ಕೆಲವು ವಿದ್ಯಾವಂತ, ನ್ಯಾಯದ ಪರ ವಾದಿಸುವವರು ಸರಕಾರಿ ಭೂಮಿ ಅತಿಕ್ರಮಣದಂತಹ ಅಕ್ರಮಗಳಿಗೆ ಜನರನ್ನು ಪ್ರಚೋದಿಸುತ್ತಿದ್ದಾರೆ. ಕೆಲವರು ಹತ್ತಾರು ಎಕರೆ ಸರಕಾರಿ ಭೂಮಿಗಳನ್ನು ಅತಿಕ್ರಮಿಸಿಕೊಂಡಿದ್ದಾರೆ.
ಕೋಟ್ಯಾಂತರ ಜನರು ಭೂ ರಹಿತರಾಗಿದ್ದಾರೆ. ಸರಕಾರ ಭೂ ರಹಿತರಿಗೆ ಭೂಮಿ ನೀಡಬೇಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಕಾರಿ ಭೂಮಿಗಳು ಮಾರಾಟವಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಅರಣ್ಯ ಭೂಮಿ. ಗಾಂವಠಾಣ ಜಾಗ. ಗೋಮಾಳ ಜಾಗ, ಕರಾಬು ಜಾಗ, ಕೆರೆ, ಇದಲ್ಲದೇ ಹಲವಾರು ಸರ್ಕಾರದ ಜಾಗಗಳನ್ನು ಅತಿಕ್ರಮಣ ರಾಜಾರೋಷವಾಗಿ ಮಾರಾಟ ಮಾಡಿ ಮಾಡುತ್ತಿರುವುದು ನಡೆ ಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಕೂಡ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಒಂದು ಇಲಾಖೆಯವರು ಇನ್ನೊಂದು ಇಲಾಖೆಯ ಮೇಲೆ ಹಾಕಿ ಜಾರಿಕೊಳ್ಳುತ್ತಿದ್ದಾರೆ. ಭೂಗಳ್ಳರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹೋರಾಟ ಸಮಿತಿಯ ಘಟಕಗಳನ್ನು ರಚಿಸಿಕೊಂಡು ಸರ್ಕಾರಿ ಭೂಮಿಗಳ ಆಕ್ರಮ ಕಬಳಕೆಯ ಬಗ್ಗೆ ಸರಕಾರದ ಹಾಗೂ ನ್ಯಾಯಾಲಯದ ಮೂಲಕ ನ್ಯಾಯ ಪಡೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಕಾರ್ಯನಿರ್ವಹಿಸಲಿದೆ. ಹಾಗೂ ಭೂರಹಿತರಿಗೆ ಸರಕಾರದಿಂದ ಭೂಮಿಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯಲ್ಲಿ ನಿವೃತ್ತ ಅಧಿಕಾರಿಗಳು. ನ್ಯಾಯವಾದಿಗಳು. ಸಾಮಾಜಿಕ ಹೋರಾಟಗಾರರು, ಮಾಹಿತಿ ಹಕ್ಕು ಕಾರ್ಯಕರ್ತರು, ಪತ್ರಕರ್ತರು ಹೀಗೆ ಎಲ್ಲಾ ವರ್ಗಗಳವರು ಇರಲಿದ್ದು, ಕರ್ನಾಟಕ ರಾಜ್ಯ ಸರಕಾರಿ ಭೂಮಿ ಉಳಿಸಿ ಹೋರಾಟ ಸಮಿತಿಯು ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸಲಿದೆ ಎಂದರು. ಸರಕಾರಿ ಭೂಮಿಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಸಮಿತಿಯ ಸದಸ್ಯರಾಗ ಬಯಸುವ ಸಾಮಾಜಿಕ ಕಳಕಳಿ ಹಾಗೂ ಬದ್ಧತೆ ಇರುವವರು ಮೊ.ಸಂ: 94813 89187, 80731 97439ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment