ಹೊನ್ನಾವರ:
ತಾಲೂಕಿನ ವಿವಿಧೆಡೆಯಲ್ಲಿ ಲಾಭದಾಯಕ ಕಾಮಗಾರಿಗಳ ಸುಳಿವು ಪಡೆದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡು ಕಳಪೆ ಕಾಮಗಾರಿಯನ್ನು ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳವ ಗುತ್ತಿಗೆದಾರನೊಬ್ಬನ ಬಣ್ಣ ಬಯಲಾಗಿದೆ. ಕಡತೋಕಾದ ಶ್ರೀಧರ ನಾಯ್ಕ ಎಂಬುವವನೇ ಅಕ್ರಮ ಮಾರ್ಗವನ್ನು ಉಪಯೋಗಿಸಿ ಗುತ್ತಿಗೆಪಡೆದು ವಂಚಿಸುವ ಗುತ್ತಿಗೆದಾರ. ತಾಲೂಕಿನ ವಿವಿಧ ಭಾಗದಲ್ಲಿ ಈತನ ಕಾಮಗಾರಿಯನ್ನು ನೋಡಿದ ಸ್ಥಳಿಯರು ಅಕ್ರಮವನ್ನು ತಡೆದು ಸರ್ಕಾರದ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದೂರುತ್ತಿದ್ದಾರೆ.
ಗುತ್ತಿಗೆದಾರನ ಅಕ್ರಮದ ವಿರುದ್ಧ ಸಾರ್ವಜನಿಕರ ದೂರು:
ತಾಲ್ಲೂಕಿನ ಹೆರಾವಲಿ ಗ್ರಾಮದ ಬಡ್ನಕೋಡ್ಲ ಮಜರೆಯ ದಟ್ಟಡವಿಯಲ್ಲಿ ಸಿಎಂಜಿಎಸ್ವೈ ಯೋಜನೆಯಡಿಯಲ್ಲಿ 400 ಮೀ. ಉದ್ದದ ಸಿಮೆಂಟ್ ರಸ್ತೆ ನಿರ್ಮಾಣಕ್ಕೆಂದು 30 ಲಕ್ಷ ರೂ. ಮಂಜೂರಾಗಿದ್ದು ಕೆಆರ್ಐಡಿಎಲ್(ಹಿಂದಿನ ಲ್ಯಾಂಡ್ ಆರ್ಮಿ)ಗೆ ಕಾಮಗಾರಿಯ ಅನುಷ್ಠಾನದ ಹೊಣೆ ವಹಿಸಲಾಗಿದೆ. ಇಡೀ ಕಾಮಗಾರಿಯ ಕರ್ಮಕಾಂಡ ಕಮಿಷನ್ ದಂಧೆಯಂತೆ ಕಂಡುಬರುತ್ತಿದೆ. ಗುತ್ತಿಗೆದಾರ ಶ್ರೀಧರ ನಾಯ್ಕನು ಈ ಕಾಮಗಾರಿಯನ್ನು ಅಕ್ರಮ ಮಾರ್ಗವನ್ನು ಉಪಯೋಗಿಸಿಕೊಂಡು ಅನಧಿಕೃತವಾಗಿ ಗುತ್ತಿಗೆಯನ್ನು ಪಡೆದುಕೊಂಡಿದ್ದಾನೆ. `ಹೆರಾವಲಿ ಗ್ರಾಮದ ಜತ್ತುಕ್ಕಿ ಅಡ್ಡರಸ್ತೆಯಿಂದ ಆದಿಶಕ್ತಿ ದೇವಸ್ಥಾನದ ವರೆಗಿನ ರಸ್ತೆ ನಿರ್ಮಾಣ’ ಎಂಬ ಹೆಸರಿನ ಈ ಕಾಮಗಾರಿಯ ಪ್ಲಾನ್ ರಾಜಧಾನಿ ಬೆಂಗಳೂರಿನಲ್ಲಿ ರೆಡಿಯಾಗಿದ್ದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಕೆಟ್ ಹಿಡಿದು ಗುತ್ತಿಗೆಯನ್ನು ಪಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಇಡೀ ಪ್ರಕರಣದಲ್ಲಿ ಗುತ್ತಿಗೆದಾರನೇ ಕಿಂಗ್ಪಿನ್ ಎನ್ನಲಾಗಿದ್ದು ಸರ್ಕಾರದ ಏಜೆನ್ಸಿ ಹಾಗೂ ಜನರು ಇಬ್ಬರಿಂದಲೂ ಕಮಿಷನ್ ಪಡೆಯುವ ವ್ಯವಸ್ಥಿತ ಜಾಲ ಕಂಡುಬರುತ್ತಿದೆ. ಆಶ್ಚರ್ಯವೆಂದರೆ ಊರಿನ ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೂ ಕಾಮಗಾರಿಯ ಕುರಿತಾದ ಯಾವುದೇ ಮಾಹಿತಿ ಇಲ್ಲ. ಈ ಕಾಮಗಾರಿಯಲ್ಲಿನ ಅಕ್ರಮವನ್ನು ತಡೆದು ಸರ್ಕಾರದ ಹಣವನ್ನು ಸದುಪಯೋಗಪಡಿಸಬೇಕು ಎಂದು ಸಹಿ ಹಾಕಿದ ಲಿಖಿತ ಮನವಿಯನ್ನು ಊರಿನ ಯುವಕರನ್ನೊಳಗೊಂಡ ನಿಯೋಗವೊಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಉಪಅರಣ್ಯ ಸಂರಕ್ಷಣಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಸಲ್ಲಿಸಿದೆ.
ಕರ್ಕಿಯ ರೈಲ್ವೇ ನಿಲ್ದಾಣದ ರಸ್ತೆ ದುರಸ್ತಿ ಕಾಮಗಾರಿಯಲ್ಲಿಯೂ ಈ ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ್ದಾನೆ ಎಂದು ಆ ಭಾಗದ ಸಾರ್ವಜನಿಕರು ದೂರಿದ್ದಾರೆ. ಅಲ್ಲದೇ ತಾಲೂಕಿನ ವಿವಿಧ ಭಾಗದಲ್ಲಿ ಹಲವಾರು ಕಾಮಗಾರಿಯನ್ನು ಈತ ಗುತ್ತಿಗೆ ಪಡೆದಿದ್ದು, ಬಹುತೇಕ ಕಾಮಗಾರಿಯು ಕಳಪೆಯಾಗಿ ನಿರ್ವಹಿಸಿದ್ದಾನೆ ಎನ್ನುವುದರ ಕುರಿತು ಸಾರ್ವಜನಿಕರು ಆಕ್ಷಪ ವ್ಯಕ್ತಪಡಿಸುತ್ತಿದ್ದಾರೆ.
Leave a Comment