ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹದಿನಾರನೆಯ ಶತಮಾನದ ಹರಿದಾಸ ಸಾಹಿತ್ಯ ಹೆಚ್ಚು ಜನ ಸಮ್ಮುಖವಾದಂಥದು. ಆದರೆ ವಚನ ಸಾಹಿತ್ಯದ ಸಮಗ್ರತೆ, ವ್ಯಾಪಕತೆ ದಾಸ ಸಾಹಿತ್ಯಕ್ಕೆ ದಕ್ಕಲಿಲ್ಲ ಎಂಬುದು ಸತ್ಯ. ಏಕೆಂದರೆ ಅಲ್ಲಿ ಜಾತಿಗಿಂತ ನೀತಿ ಮುಖ್ಯವಾಯಿತು. ಈ ಹಿನ್ನಲೆಯಲ್ಲಿ ನೋಡಿದಾಗ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಅನೇಕ ಸಾಮಾಜಿಕ ಮತ್ತು ವೈಚಾರಿಕ ಅಂಶಗಳನ್ನು ತಿಳಿಸಿದ್ದಾರೆ. ಕನಕದಾಸರು ಕವಿಯೂ ಹೌದು, ದಾರ್ಶನಿಕರೂ ಹೌದು, ಸಮಾಜಪರ ಚಿಂತಕರೂ ಹೌದು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಮಾನವೀಯ ಅಂತಃಕರಣವುಳ್ಳ ಹೃದಯವಂತರಾಗಿದ್ದರು ಆದ್ದರಿಂದ ಕನಕದಾಸರು ರಾಷ್ಟ್ರೀಯ ಸಂತಕವಿ ಎಂದೆನಿಸಿಕೊಂಡರು ಎಂದು ಕಾ.ತ. ಚಿಕ್ಕಣ್ಣ ಅವರು ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾವರ ಹಾಗೂ ರಾಷ್ಟ್ರೀಯ ಸಂತಕವಿ ಕನಕ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ “ ಮುತ್ತು ಬಂದಿದೆ ಕೇರಿಗೆ” ಎನ್ನುವ ವಿಶೇಷ ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೊನ್ನಾವರದ ಹಿರಿಯ ಸಾಹಿತಿಗಳಾದ ಡಾ. ಶ್ರೀಪಾದ ಶೆಟ್ಟಿಯವರು ಕನಕದಾಸರ ಕೀರ್ತನ ಸಾಹಿತ್ಯ, ಮುಂಡಿಗೆಗಳು ಹಾಗೂ ಅವರ ಕೃತಿಗಳ ಕುರಿತ ವಿಶೇಷ ಉಪನ್ಯಾಸ ನೀಡಿದರು. ಕನಕದಾಸರು ಜಾತಿ ಪದ್ದತಿಯನ್ನು ವಿರೋದಿಸಿ ತಮ್ಮ ಸಾಹಿತ್ಯದ ಮೂಲಕ ಜನಜಾಗ್ರತಿ ಮೂಡಿಸಿರುವುದನ್ನು ಒತ್ತಿ ಹೇಳಿದರು.
ಹೊನ್ನಾವರದ ಎಸ್.ಡಿ.ಎಂ ಕಾಲೇಜಿನ ಡಾ. ಅಶೋಕ ಹುಗ್ಗಣ್ಣರವರು ಮತ್ತು ಅವರ ಸಂಗಡಿಗರು ಕನಕದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ ನಾಯಕ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನಗೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕೆಂದು ಕರೆ ಕೊಟ್ಟರು. ಪ್ರಾರಂಭದಲ್ಲಿ ಕು. ಸಹನಾ ನಾಯ್ಕ ಪ್ರಾರ್ಥನೆ ಹೇಳಿದರು. ಡಾ.ಡಿ.ಎಸ್.ದೊಡ್ಡಮನಿ ಅವರು ಸ್ವಾಗತಿಸಿದರು. ಶ್ರೀ ಶೇಖರ ಮೊಗೇರ ವಂದನಾರ್ಪಣೆ ಮಾಡಿದರು. ಕು. ಕಮಲಾಕ್ಷಿ ನಾಯ್ಕ ಕಾರ್ಯಕ್ರಮದ ನಿರೂಪಣೆ ಮಾಡಿದರು.
Leave a Comment