ಹೊನ್ನಾವರ,
ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ಹೊನ್ನಾವರ ಪ.ಪಂ.ನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸುರಿಯುವ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಕುರಿತು ಹೊನ್ನಾವರ ಪಟ್ಟಣಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಪ.ಪಂ.ನ ಹಿರಿಯ ಸದಸ್ಯ ನೀಲಕಂಠ ನಾಯ್ಕ ಹೆಚ್ಚಿನ ಮಾಹಿತಿ ನೀಡಿ, ಹೊನ್ನಾವರ ಪ.ಪಂ.ನ ಸರ್ವಸದಸ್ಯರ ಸಭೆಯ ನಿರ್ಣಯದಂತೆ ಅಧ್ಯಕ್ಷರು ಮತ್ತು ತಾವು ಹೈಕೋರ್ಟ್ ಮೊರೆ ಹೋಗಿರುವದಾಗಿ ತಿಳಿಸಿದರು.
ಹೊನ್ನಾವರ ಪಟ್ಟಣದ ರಾಮತೀರ್ಥದ ಚಾಂದ್ರಾಣಿ ಬಳಿ ಇರುವ ತ್ಯಾಜ್ಯವಿಲೇವಾರಿ ಘಟಕಕ್ಕೆ ಕುಮಟಾ ಪಟ್ಟಣದ ಘನತ್ಯಾಜ್ಯ ತಂದು ಹಾಕುವ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಆದೇಶದಂತೆ ಕೈಗೊಳ್ಳಲಾಗಿತ್ತು. ಇದಕ್ಕೆ ಸರ್ವಸದಸ್ಯರೂ ಸಹ ವಿರೋಧ ವ್ಯಕ್ತಪಡಿಸಿದ್ದರು.
ಸ್ಥಳೀಯ ಸಾರ್ವಜನಿಕರ ಸಂಘಟನೆಗಳ ವಿರೋಧದ ನಡುವೆಯೂ ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ರಾತ್ರಿವೇಳೆ ಲಾರಿಯಲ್ಲಿ ತಂದು ಹೊನ್ನಾವರ ತ್ಯಾಜ್ಯವಿಲೇವಾರಿ ಘಟಕಕ್ಕೆ ಹಾಕಲಾಗುತ್ತಿತ್ತು.ಪರ್ಯಾಯ ಮಾರ್ಗವಿಲ್ಲದೇ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅವರು ವಿವರಿಸಿದರು. ಪ.ಪಂ.ಸದಸ್ಯರಾದ ಸಿ.ಜೆ.ನಾಯ್ಕ, ಮಂಜುನಾಥ ಖಾರ್ವಿ ಈ ವೇಳೆ ಹಾಜರಿದ್ದರು.
Leave a Comment