ದಾಂಡೇಲಿ :
ನಗರದ ಬೈಲುಪಾರು ಎಂಬಲ್ಲಿ ಮನೆಯೊಂದು ಅಗ್ನಿ ಅವಘಡಕ್ಕೊಳಗಾಗಿ ಲಕ್ಷಾಂತರ ರೂ ಹಾನಿಯಾಗಿರುವ ಘಟನೆ ನಡೆದಿದೆ.
ಬೈಲುಪಾರು ನಿವಾಸಿ, ಕೂಲಿ ಕಾರ್ಮಿಕ ರವಿ.ಕೆ.ನಟರಾಜ ಎಂಬವರ ಮನೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಮನೆಯೊಳಗೆ ಅಗ್ನಿ ಅವಘಡ ಸಂಭವಿಸಿ ಮನೆಯೊಳಗಿದ್ದ ರೂ : 50 ಸಾವಿರ ನಗದು ಮತ್ತು v6 ತೊಲೆ ಬಂಗಾರ ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ರಭಸಕ್ಕೆ ಮನೆಯೊಳಗಿದ್ದ ವಿವಿಧ ಬೆಲೆ ಬಾಳುವ ವಸ್ತುಗಳು, ಪೀಠೋಪಕರಣಗಳು ಹಾಗೂ ಎಲ್.ಐ.ಸಿ ಬಾಂಡ್ ಪೇಪರ್, ಮನೆ ಕಾಗದ ಪತ್ರಗಳು, ಆಧಾರ್ ಕಾರ್ಡ್, ಗುರುತಿನ ಚೀಟಿ, ಮಕ್ಕಳ ಶೈಕ್ಷಣಿಕ ಪ್ರಮಾಣ ಪತ್ರಗಳು ಹಾಗೂ ಇನ್ನಿತರ ದಾಖಲೆ ಪತ್ರಗಳು ಅಗ್ನಿಗೆ ಅಹುತಿಯಾಗಿವೆ.
ಮನೆಯೊಳಗಡೆ ಅಗ್ನಿ ಅವಘಡ ಸಂಭವಿಸಿದ್ದರಿಂದ ಸ್ಥಳೀಯರಿಗೆ ತಕ್ಷಣ ಗೊತ್ತಾಗದಿದ್ದ ಹಿನ್ನಲೆಯಲ್ಲಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ.
ತೀವ್ರ ಬಡತನದ ಬೇಗೆಯಲ್ಲಿ ಬಳಲುತ್ತಿರುವ ರವಿ.ಕೆ.ನಟರಾಜ ಅವರು ಬೆಂಕಿ ಅವಘಡದಿಂದ ತೀವ್ರ ಕಂಗಲಾಗಿದ್ದು, ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ.
Leave a Comment