ಹೊನ್ನಾವರ:
ನಾಮಧಾರಿ ಅಭಿವೃದ್ದಿ ಸಂಘ ಹಾಗೂ ನಾಮಧಾರಿ ವಿದ್ಯಾರ್ಥಿ ನಿಲಯ ಮತ್ತು ಸಭಾಭವನ ಕಟ್ಟಡ ಸಮಿತಿ ಜಂಟಿ ಆಶ್ರಯದಲ್ಲಿ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿರುವ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನದ ಶಿಲಾನ್ಯಾಸ ಶನಿವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಂಘದ ಸ್ಥಳದಲ್ಲಿ ನಡೆಯಿತು.
ನಂತರ ಶರಾವತಿ ಕಲಾಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಜೆ. ಡಿ. ನಾಯ್ಕ ಉದ್ಘಾಟಿಸಿ ಮಾತನಾಡಿ ನಿರ್ಮಿಸಲು ಉದ್ದೇಶಿಸಿರುವ ಈ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನ ನಾಮಧಾರಿ ಸಮಾಜದ ಬಹುವರ್ಷಗಳ ಕನಸಾಗಿದ್ದು ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಕಟ್ಟಡದ ನೀಲಿನಕ್ಷೆ ಅನಾವರಣಗೊಳಿಸಿದ ಉದ್ಯಮಿ ಯಶೋಧರ ನಾಯ್ಕ ಮಾತನಾಡಿ ಸಮಾಜ ಬಂಧುಗಳೆಲ್ಲರೂ ಕಟ್ಟಡ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದರು.
ಶಿಲಾನ್ಯಾಸ ನೆರವೇರಿಸಿದ ಬೆಂಗಳೂರಿನ ನಿವೃತ್ತ ಪೋಲೀಸ್ ಉಪ ಆಯುಕ್ತ ಎಂ. ಟಿ. ನಾಯ್ಕ ಮಾತನಾಡಿ ನಾಮಧಾರಿ ಸಮಾಜದ ಪ್ರತಿ ಮಕ್ಕಳೂ ಶೈಕ್ಷಣಿಕವಾಗಿ ಮುಂದುವರಿಯಬೇಕು. ಸಂಘಟನೆ ಇದ್ದಾಗ ಇದು ಸಾಧ್ಯವಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಹಾಗೂ ಹೊನ್ನಾವರ ನಾಮಧಾರಿ ಸಂಘದ ಅಧ್ಯಕ್ಷ ಆರ್. ಎನ್. ನಾಯ್ಕ ಮಾತನಾಡಿ ಸ್ವಾತಂತ್ರ್ಯದ ಪೂರ್ವದಲ್ಲೇ ನಾಮಧಾರಿ ಸಮಾಜಕ್ಕೆ ದೊರೆತಿರುವ ಈ ಜಾಗವನ್ನು ಇಲ್ಲಿಯವರೆಗೂ ಕಾದಿಟ್ಟುಕೊಂಡು ಬರಲಾಗಿದ್ದು ಈಗ ಅದು ಸಮಾಜದ ಉಪಯೋಗಕ್ಕೆ ಬಂದಿದೆ ಎಂದರು.
ಅತಿಥಿಯಾಗಿ ಪಾಲ್ಗೊಂಡ ಪಿಸಿಎಆರ್ಡಿ ಬ್ಯಾಂಕ್ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ ಹೊನ್ನಾವರದಲ್ಲಿ ನಾಮಧಾರಿ ಸಮಾಜದ ವಿದ್ಯಾರ್ಥಿ ನಿಲಯದ ಅಗತ್ಯವಿದೆ. ಹಳ್ಳಿಗಳಿಂದ ಬರುವ ಸಮಾಜದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು ಸಮಾಜದ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದರು.
ಜಿ.ಪಂ. ಸದಸ್ಯ ಹಾಗೂ ತಾಲೂಕಾ ನಾಮಧಾರಿ ಸಮಾದ ಗುರುಸೇವಾ ಸಮಿತಿ ಅಧ್ಯಕ್ಷ ದೀಪಕ ನಾಯ್ಕ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರು.
ಭಟ್ಕಳ ಪಿಸಿಎಆರ್ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸುನೀಲ ನಾಯ್ಕ, ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ, ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ನಾಮಧಾರಿ ವಿದ್ಯಾರ್ಥಿ ನಿಲಯ ಮತ್ತು ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ಸಿ. ಬಿ. ನಾಯ್ಕ, ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷ ಗೇರುಸೊಪ್ಪಾದ ಮಂಜುನಾಥ ನಾಯ್ಕ, ನಾಮಧಾರಿ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಆರ್. ಡಿ. ನಾಯ್ಕ, ತಾಲೂಕಾ ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಜಿ. ಎಚ್. ನಾಯ್ಕ ಉಪಸ್ಥಿತರಿದ್ದರು.
Leave a Comment