ದಾಂಡೇಲಿ :
ನಗರ ಹಾಗೂ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಜನಮೆಚ್ಚುಗೆಯ ಕೊಡುಗೈ ದಾನಿ, ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಬಡವರಿಗೆ ನಿರ್ಗತಿಕರಿಗೆ, ಅಬಲೆಯರಿಗೆ ಅಭಯಹಸ್ತ ನೀಡಿದ ನಿಸ್ವಾರ್ಥ ರಾಜಕಾರಣಿ ಹಾಗೂ ನಗರದ ಹಿರಿಯ ಸಮಾಜ ಸೇವಕರಾದ ಟಿ.ಆರ್.ಚಂದ್ರಶೇಖರ ಅವರಿಗೆ ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ತೆನೆ ಹೊತ್ತ ಮಹಿಳೆ ಚಿಹ್ನೆಯ ಜೆಡಿಎಸ್ ಪಕ್ಷವನ್ನು ಮುನ್ನಡೆಸುವ ಸಾರಥಿಯಾಗಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹುಬ್ಬಳ್ಳಿಯ ತನ್ನ ಸ್ವಗೃಹ ಕಚೇರಿಗೆ ಕರೆಸಿ ಆಗ್ರಹಿಸಿದ್ದಾರೆಂದು ಪತ್ರಿಕೆಗೆ ತಿಳಿದುಬಂದಿದೆ.
2008 ರಲ್ಲಿ ಈ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸುನೀಲ ಹೆಗಡೆಯವರು ಆರಿಸಿ, ನಂತರದ 2013 ರ ಚುನಾವಣೆಯಲ್ಲಿ ಸೋಲುಂಡು, ಲೋಕಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡಿ ನಂತರದ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸುನೀಲ ಹೆಗಡೆಯವರು ಪಕ್ಷ ಬಿಟ್ಟು ಹೋದ ಬಳಿಕ ಜೆಡಿಎಸ್ ಸ್ವಲ್ಪ ಮಟ್ಟಿಗೆ ಹಿನ್ನಡೆಯನ್ನು ಸಾಧಿಸಿದ್ದೂ ಹೌದಾದರೂ, ಕೆಲವರು ಸುನೀಲ ಹೆಗಡೆಯವರನ್ನು ಹಿಂಬಾಲಿಸದೆ ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡ ಪರಿಣಾಮ ಜೆಡಿಎಸ್ ತನ್ನ ಅಸ್ವಿತ್ವವನ್ನು ಉಳಿಸಿಕೊಂಡಿದೆ.
ನಗರದಲ್ಲಿ ಪ್ರಮುಖವಾಗಿ ಎಂ.ಕಾಂ ಪದವಿದರ ಹಾಗೂ ಪಕ್ಷದ ಯುವ ನಗರ ಸಭಾ ಸದಸ್ಯ ರೋಶನ್ ಬಾವಾಜಿಯವರು ನಗರ ಸಭಾ ಸದಸ್ಯರನ್ನು ಕಟ್ಟಿಕೊಂಡು ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಜೆಡಿಎಸ್ ಪಕ್ಷಕ್ಕೆ ಜೀವ ತುಂಬುವ ಕೆಲಸ ಮಾಡಿದರು. ಇವರ ಕಾರ್ಯವೈಖರಿಯನ್ನು ತಿಳಿದುಕೊಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರೋಶನ್ ಬಾವಾಜಿಯವರನ್ನು ಬೆಂಗಳೂರಿಗೆ ಕರೆಸಿಕೊಂಡು ಈ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಬೇಕೆಂದು ಹಾರೈಸಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು. ಇದರ ಜೊತೆಗೆ ಇತ್ತ ಬೆಂಗೂರಿನ ಉದ್ಯಮಿ, ಹಳಿಯಾಳದ ಅಳಿಯ ಕೆ.ಆರ್.ರಮೇಶ ಅವರನ್ನು ಪಕ್ಷಕ್ಕೆ ಕರೆತರುವುದರ ಜೊತೆಗೆ ಪಕ್ಷದ ಅಭ್ಯರ್ಥಿಯನ್ನಾಗಿಸುವಲ್ಲಿ ರೋಶನ್ ಬಾವಾಜಿಯ ಪಾತ್ರ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ನಂತರದ ದಿನಗಳಲ್ಲಿ ಕೆ.ಆರ್.ರಮೇಶ ಅವರು ಕ್ಷೇತ್ರದೆಲ್ಲೆಡೆ ಓಡಾಡಿ ಪಕ್ಷ ಕಟ್ಟುವಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ.
ಇವೆಲ್ಲವುಗಳ ನಡುವೆ ಸುನೀಲ ಹೆಗಡೆಯವರ ಗೆಲುವಿಗೆ ಪ್ರಮುಖ ಕಾರಣೀಕರ್ತರಾದ ನಗರದ ಉದ್ಯಮಿ ಟಿ.ಆರ್.ಚಂದ್ರಶೇಖರ ಅವರು ಬಿಜೆಪಿಗೆ ಸೇರ್ಪಡೆಗೊಳ್ಳದಿದ್ದರೂ, ಬಿಜೆಪಿಯ ಕೆಲ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಜಕೀಯವಾಗಿ ಯಾವುದೇ ಸ್ವಾರ್ಥವಿಲ್ಲದಿರುವ ಟಿ.ಆರ್.ಚಂದ್ರಶೇಖರ ಅವರಿಗೆ ಮೊದಲಿನಿಂದಲೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಎಲ್ಲಿಲ್ಲದ ಗೌರವ. ಹಾಗಾಗಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಮಾಡುವ ಲಕ್ಷಾಂತರ ನೋಟು ಪುಸ್ತಕಗಳಲ್ಲಿ ದೇವೆಗೌಡರವರದ್ದು ಮತ್ತು ಕುಮಾರಸ್ವಾಮಿಯವರ ಭಾವಚಿತ್ರವನ್ನು ಮುದ್ರಿಸಿ ತನಗಿರುವ ಪ್ರೀತಿಯನ್ನು ಸಾಭೀತುಪಡಿಸಿಕೊಂಡು ಬಂದಿದ್ದರು.
ಕುಮಾರಣ್ಣನಿಗೆ ನೆಚ್ಚಿನ ಅಣ್ಣನಾದ ಚಂದ್ರಶೇಖರ
ಎಚ್.ಡಿ.ಕುಮಾರಸ್ವಾಮಿಯವರು ಈ ಕ್ಷೇತ್ರಕ್ಕೆ ಯಾವತ್ತು ಭೇಟಿ ಮಾಡಿದರೂ, ಅವರ ಮೊದಲ ಭೇಟಿ ಟಿ.ಆರ್.ಚಂದ್ರಶೇಖರ ಅವರ ಕಛೇರಿಗಾಗಿತ್ತು. ಅಲ್ಲಿ ಚಂದ್ರಶೇಖರ್ ನನ್ನ ಹಿರಿಯಣ್ಣ ಎಂದೆ ಸಂಭೋಧಿಸುತ್ತಿದ್ದ ಕುಮಾರಸ್ವಾಮಿಯವರು ನೀವು ಯಾವತ್ತು ಪಕ್ಷ ಬಿಟ್ಟು ಹೋಗಬೇಡಿ, ನೀವೆ ಕಟ್ಟಿದ ಪಕ್ಷವನ್ನು ಸದೃಢಗೊಳಿಸಿ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಆಶೀರ್ವಧಿಸಿ ಎಂದು ವಿನಂತಿಸಿರುವುದು ಟಿ.ಆರ್.ಚಂದ್ರಶೇಖರ ಅವರ ಯೋಗ್ಯತೆ ಮತ್ತು ಅರ್ಹತೆಗೆ ಹಿಡಿದ ಕೈಗನ್ನಡಿ ಎಂದೆ ಹೇಳಲಾಗುತ್ತಿದೆ.
ಟಿ.ಆರ್.ಚಂದ್ರಶೇಖರ ಅವರಿಗೆ ಮತ್ತು ಕುಮಾರಸ್ವಾಮಿಯವರಿಗೆ ಸೇತುವೆಯಾಗಿ ರೋಶನ್ ಬಾವಾಜಿ ಕೆಲಸ ನಿರ್ವಹಿಸಿದ ಫಲವಾಗಿ ಕುಮಾರಸ್ವಾಮಿಯವರು ಟಿ.ಆರ್.ಚಂದ್ರಶೇಖರ ಅವರನ್ನು ರೋಶನ್ ಬಾವಾಜಿಯವರನ್ನು ಹುಬ್ಬಳ್ಳಿಯ ಮನೆಗೆ ಕರೆಸಿ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ, ಪಕ್ಷದ ಸಾರಥಿಯಾಗಬೇಕು, ಕ್ಷೇತ್ರದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯ ನಿಮ್ಮಿಂದಾಗಬೇಕೆಂದು ಒತ್ತಾಯಿಸಿದ ಫಲವಾಗಿ ಮತ್ತು ಆತ್ಮೀಯತೆಯ ಕಾರಣವಾಗಿ ಜೆ.ಡಿಎಸ್ ಪಕ್ಷದ ಸಾರಥಿಯಾಗಲು ಟಿ.ಆರ್.ಚಂದ್ರಶೇಖರ ಅವರು ಸಕರಾತ್ಮಕ ಸ್ಪಂದಿಸಿದ್ದಾರೆಂಬ ಮಾಹಿತಿ ಪತ್ರಿಕಗೆ ಲಭ್ಯವಾಗಿದೆ.
ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಯನ್ನು ಆರಿಸುವ ಕಾರ್ಯವನ್ನು ಟಿ.ಆರ್.ಚಂದ್ರಶೇಖರ ಮತ್ತು ರೋಶನ್ ಬಾವಾಜಿಯವರ ಮೇಲೆ ಹೊರಿಸಲಾಗಿದೆ ಎಂದು ತಿಳಿದುಬಂದಿದ್ದು, ಇದೀಗ ಜೆಡಿಎಸ್ ಕೂಡ ಒಂಟಿ ಸಲಗದಂತೆ ಕ್ಷೇತ್ರದಲ್ಲಿ ತನ್ನ ಸಾಮಾಥ್ರ್ಯವನ್ನು ಪ್ರದರ್ಶಿಸಲು ಅಣಿಯಾಗಿದೆ. ಇವೆಲ್ಲವುಗಳ ಬೆಳವಣಿಗೆ ಸುನೀಲ ಹೆಗಡೆಯವರಿಗೆ ಬಿಸಿ ತುಪ್ಪವಾಗಲಿರುವುದು ನಿಶ್ಚಿತ ಎಂಬ ಮಾತು ಕೇಳಿಬರುತ್ತಿದೆ.
Leave a Comment