ಹೊನ್ನಾವರ:
ಆಚಾರ್ಯ ಶ್ರೀ ಶಂಕರರ ಸಂದೇಶದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ಅದ್ಯೈತ ತತ್ವ ಸಂದೇಶ ನೀಡಿದ್ದಾರೆ. ಬ್ರಹ್ಮಾಂಡದಲ್ಲಿರವುದು ಬ್ರಹ್ಮವೇ ಹೂರತು ಬೇರೆಯಿಲ್ಲ. ಈ ಸತ್ಯ ಅರಿತು ನಡೆದಾಗ ಜೀವನದಲ್ಲಿ ಭವ್ಯತೆ, ದಿವ್ಯತೆ ಕಾಣಲು ಸಾಧ್ಯ ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ನುಡಿದರು.
ಪಟ್ಟಣದ ದುರ್ಗಾಕೇರಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸಭಾಭವನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ರವಿವಾರ ನಡೆದ ಶ್ರೀ ಶಂಕರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿದ ಅವರು ಆರ್ಶೀವಚನ ನೀಡಿದರು. ಶ್ರೀ ಶಂಕರರು ರಚಿಸಿದ ಪ್ರಶ್ನೋತ್ತರ ರತ್ನ ಮಾಲಿಕಾದಲ್ಲಿ ಮಾನವ ಜೀವನದಲ್ಲಿ ಒಳ್ಳೆಯ ವಿದ್ಯೆ, ಒಳ್ಳೆಯ ಹಣ, ಒಳ್ಳೆಯ ಸಾಮಥ್ರ್ಯ, ಒಳ್ಳೆಯ ಕೀರ್ತಿ ಹಾಗೂ ಒಳ್ಳೆಯ ಪುಣ್ಯಕಾರ್ಯವನ್ನು ಸಂಪಾದಿಸಬೇಕು ಆಗ ಜೀವನ ಪರಿಪೂರ್ಣವಾಗುತ್ತದೆ. ಮಾನವ ಜನ್ಮ ಸಾರ್ಥಕತೆ ಪಡೆಯಲು ಸಾಧ್ಯ ಎಂಬ ಸಂದೇಶ ಪಾಲಿಸಬೇಕು. ಜೀವನಧ್ಯೇಯವನ್ನು ಮುನ್ನಡೆಸಿ ನಾವು ಬದುಕುತ್ತ ಇತರರಿಗೂ ಬದುಕಲು ಅವಕಾಶ ಮಾಡುತ್ತೇವೆಯೋ ಆಗ ಜೀವನದಲ್ಲಿ ಸಂತೋಷ ಹೊಂದಲು ಸಾಧ್ಯ ಎಂದರು.
ಹಳದೀಪುರದ ಕೃಷ್ಣಾಶ್ರಮ ಮಠದ ಶ್ರೀ ವಾಮನಾಶ್ರಮ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, ಶ್ರೀ ಶಂಕರರ ಉಪದೇಶದಂತೆ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರು ರಚಿಸಿದ ಭಜಗೋವಿಂದಂ ಶ್ಲೋಕದಲ್ಲಿ ಮಾನವ ಜೀವಂತ ಇರುವಾಗಲೇ ನಾನಾ ಬಗೆಯ ದುಃಖದಿಂದ ಮುಕ್ತಿ ಪಡೆದು ಮೋಕ್ಷ ಪಡೆಯಲು ಸಾಧ್ಯ. ಜೀವನದಲ್ಲಿ ದುಃಖ ಯಾರಿಗೂ ತಪ್ಪಿದ್ದಲ್ಲ. ಸತ್ಸಂಗ, ಸದ್ವಿಚಾರ ತಿಳಿದುಕೊಳ್ಳಬೇಕು. ರಾಮಾಯಣ ಮಹಾಭಾರತಗಳಂತ ಗ್ರಂಥಗಳನ್ನು ಪುನಃ ಪುನಃ ಮನನಮಾಡಿಕೊಳ್ಳಬೇಕು. ಇದರಿಂದ ಸರಿಯಾದ ಜ್ಞಾನದ ಅರಿವಾಗಿ ಜೀವನಮುಕ್ತಿ ಪಡೆಯಲು ಸಾಧ್ಯವಿದೆ ಎಂದರು.
ನೀಲಗೋಡ ಕ್ಷೇತ್ರದ ಮಾದೇವ ಸ್ವಾಮಿ ಮಾತನಾಡಿ ಧಾರ್ಮಿಕ ಮತ್ತು ಗುರುಸೇವಾ ಕಾರ್ಯದಲ್ಲಿ ತೊಡಗಿದಾಗ ಬದುಕಿನಲ್ಲಿ ಸುಖಶಾಂತಿ ಪಡೆಯಲು ಸಾಧ್ಯ ಎಂದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ಶಂಕರರ ಪಲ್ಲಕ್ಕಿಯನ್ನು ಪಟ್ಟಣದ ರಥಬೀದಿಯ ಗಣಪತಿ ದೇವಸ್ಥಾನದಿಂದ ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.
ಸಮಿತಿಯ ಅಧ್ಯಕ್ಷ ಎಂ.ಜಿ.ನಾಯ್ಕ ಸ್ವಾಗತಿಸಿದರು. ಪ್ರೊ. ಪತಂಜಲಿ ವೀಣಾಕರ ಶಂಕರರ ತತ್ವ ಉಪದೇಶ ಕುರಿತು ಮಾತನಾಡಿದರು. ಕಾರ್ಯದಶಿ ಎಂ.ಡಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಕೋಶಾಧ್ಯಕ್ಷ ಸತ್ಯನಾರಾಯಣ ಪಿ. ಶೇಟ್, ಸಂಜಯ ಶೇಟ್ ಇತರರಿದ್ದರು. ದಿನೇಶ ಕಾಮತ ನಿರ್ವಹಿಸಿದರು.
Leave a Comment