ಕಾರವಾರ:
ರಾಜ್ಯ ಸರಕಾರ ಯುವಜನತೆಗೆ ಕೌಶಲ್ಯ ತರಬೇತಿ ನೀಡುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಜಾರಿಗೊಳಿಸಿದ್ದು, ಯುವ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ ಹೇಳಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೋಂದಣಿಗಾಗಿ ಆರಂಭಿಸಲಾಗಿರುವ ವೆಬ್ಪೋರ್ಟಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನರಿಗೆ ಉದ್ಯೋಗ ಮಾರುಕಟ್ಟೆಗೆ ಬೇಕಾದ ಅಗತ್ಯ ನೈಪುಣ್ಯತೆಗಳಲ್ಲಿ ತರಬೇತಿ ಪಡೆಯಲು ತಮ್ಮ ಹೆಸರನ್ನು ಸ್ವಯಂ ನೋಂದಾಯಿಸಿಕೊಳ್ಳಲು ನೆರವಾಗುತ್ತದೆ. ಮುಖ್ಯಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿವಿಧ ಕೌಶಲ್ಯ ತರಬೇತಿಗಳ ಉಪಕ್ರಮಗಳನ್ನು ಒಂದೆಡೆ ತರಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎಂಬ ಹೊಸ ಇಲಾಖೆಯನ್ನು ಆರಂಭಿಸಲಾಗಿದೆ. ಮುಖ್ಯ ಮಂತ್ರಿಗಳ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಆಯೋಜಿಸಿರುವ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.
ವೆಬ್ಪೋರ್ಟಲ್ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ ಈ ಯೋಜನೆ ಅಡಿಯಲ್ಲಿ ಪ್ರತ್ಯೇಕ ಉದ್ಯೋಗಗಳಿಗೆ ಕೌಶಲ್ಯ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಯು ತಮ್ಮ ಹೆಸರನ್ನು ಜಾಲ ತಾಣದ ಪೋರ್ಟಲ್ http://www.kaushalkar.com/ ನಲ್ಲಿ ಸ್ವಯಂ ನೋಂದಾಯಿಸಬಹುದು. ಸದರಿ ಜಾಲತಾಣವನ್ನು ಅಭ್ಯರ್ಥಿಗಳ ಸಾಮಥ್ರ್ಯವನ್ನು ಮತ್ತು ಇವರುಗಳ ಅವಶ್ಯಕತೆಗಳನ್ನು ಗುರುತಿಸುವಂತೆ ವಿನ್ಯಾಸಗೊಳಿಸಲಾಗಿದೆ ಅಲ್ಲದೆ, ಈ ಜಾಲ ತಾಣವು ಪಾಲುದಾರರು, ತರಬೇತಿ ನೀಡುವವರು ಮತ್ತು ಉದ್ಯೋಗದಾತರ ಸಂಸ್ಥೆಗಳಿಗೆ ತಮ್ಮ ಅವಶ್ಯಕತೆಗಳನ್ನು ವೆಬ್ಪೋರ್ಟಲ್ನಲ್ಲಿ ದಾಖಲಿಸಲು ನೆರವಾಗುತ್ತದೆ ಮತ್ತು ರಾಜ್ಯಾದ್ಯಂತ ಅನೇಕ ಭಾಗಗಳಲ್ಲಿ ನೀಡಲಾಗುತ್ತಿರುವ ವಿವಿಧ ಕೌಶಲ್ಯ ತರಬೇತಿ ಯೋಜನೆಗಳ ಸಂಪೂರ್ಣ ಮಾಹಿತಿ ದೊರಕಿಸಿಕೊಡಲು ನೆರವಾಗುತ್ತದೆ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಈ ವಿಶೇಷ ಕೌಶಲ್ಯ ತರಬೇತಿ ನೈಪುಣ್ಯತೆಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಮೇ15ರಿಂದ 22ರ ವರೆಗೆ ತಾಲ್ಲೂಕು ಕಚೇರಿಗಳಲ್ಲಿ ನಡೆಯುವ ಕೌಶಲ್ಯ ಶಿಬಿರದಲ್ಲಿ ಅಲ್ಲದೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ತಾಲ್ಲೂಕು ಕಚೇರಿ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಂತರ ಈ ನೋಂದಣಿಯು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ಮುಂದುವರಿಯಲಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸಂಗೀತಾ ಭಟ್ ಪ್ರಾಸ್ತಾವಿಕಾಗಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಆಡಳಿತ ಅಧಿಕಾರಿ ಆರ್.ಜಿ.ನಾಯ್ಕ ಸ್ವಾಗತಿಸಿದರು. ತಾಲೂಕ ಪಂಚಾಯತ್ ಅಧ್ಯಕ್ಷೆ ಪ್ರಮಿಳಾ ನಾಯ್ಕ ವೇದಿಕೆ ಮೇಲೆ ಉಪಸ್ಥಿತರಿದ್ದರು.ಕಲ್ಪನಾ ಕಲಾಲೋಕ ಸಂಸ್ಥೆ ವಿದ್ಯಾರ್ಥಿನಿ ವಿನುತಾ ಗಾಂವಕರ್ ಪ್ರಾರ್ಥಿಸಿದರು.
Leave a Comment