ದಾಂಡೇಲಿ :
ಸದಾ ಒಂದಿಲ್ಲವೊಂದು ತಗಾದೆಗಳಲ್ಲಿ ಅಗ್ರಣೀಯ ಸ್ಥಾನದಲ್ಲಿರುವ ದಾಂಡೇಲಿ ನಗರ ಸಭೆಯ ಸಾಮಾನ್ಯ ಸಭೆಯು ಗದ್ದಲದ ನಡುವೆಯೆ ಸೋಮವಾರ ಸಂಜೆಯಿಂದ ರಾತ್ರಿಯವರೆಗೆ ನಡೆಯಿತು.
ಸಭೆ ಆರಂಭಗೊಳ್ಳುತ್ತಿದ್ದಂತೆಯೆ ಪ್ರತಿಪಕ್ಷ ನಾಯಕ ರಿಯಾಜ್ ಶೇಖ ಅವರು ನಗರ ಸಭೆಯ ಸಂಡೇ ಮಾರ್ಕೆಟ್ ಬಳಿಯ ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿ ಅನಧಿಕೃತ ಮಳಿಗೆಗಳು ತಲೆಯೆತ್ತಿ ವರ್ಷಗಳೆ ಕಳೆದರೂ ನಗರ ಸಭೆ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಇಳಿಯದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸಾಕಷ್ಟು ಸಲ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡಿದ್ದರೂ, ನಿರ್ಣಯವನ್ನು ಪಾಲಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು. ರಿಯಾಜ ಶೇೀಖ ಅವರ ಪ್ರಶ್ನೆಗೆ ಸಭಾಪತಿ ನಂದೀಶ ಮುಂಗರವಾಡಿ, ಆಡಳಿತ ಪಕ್ಷದ ಸದಸ್ಯರಾದ ಕೀರ್ತಿ ಗಾಂವಕರ, ಮಂಜು ರಾಥೋಡ, ಮಹಮ್ಮದ ಫನಿಬಂದ್ ಧ್ವನಿಗೂಡಿಸಿ ಕೂಡಲೆ ತೆರವುಗೊಳಿಸಬೇಕೆಂದು ಆಗ್ರಹಿಸಿದರು. ನಗರ ಸಭೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆಯಾಯಿತು.
ಅತಿಕ್ರಮಣ ಮುಗಿಲು ಮುಟ್ಟಿದೆ:
ನಗರದ ಮೂಲೆ ಮೂಲೆಗಳಲ್ಲಿ ಅತಿಕ್ರಮಣವಾಗುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಕ್ಷರನ್ನೆ ನೇರವಾಗಿ ಗುರಿಯಾಗಿಸಿ ವರದಿಗಳು ಬರುತ್ತಿದ್ದು, ನಗರ ಸಭೆಯ ಅಧ್ಯಕ್ಷರ ಹೆಸರಿಗೆ ಚ್ಯುತಿ ಬರುವಂತಾಗಿದೆ. ಕೂಡಲೆ ಅತಿಕ್ರಮಣವನ್ನು ತೆರವುಗೊಳಿಸಿ ಎಂದು ಕೀರ್ತಿ ಗಾಂವಕರ ಆಗ್ರಹಿಸಿದಾಗ, ಅತಿಕ್ರಮಣ ತೆರವುಗೊಳಿಸಲು ಪೌರಾಯುಕ್ತರಿಗೆ ಆದೇಶಿಸಿದ್ದೇನೆಂದು ಎನ್.ಜಿ.ಸಾಳೊಂಕೆ ತಿಳಿಸಿದರು. ಇದೀಗ ಅತಿಕ್ರಮಣ ತೆರವು ಕಾರ್ಯಾಚರಣೆಯ ಚೆಂಡು ಪೌರಾಯುಕ್ತರ ಅಂಗಳದಲ್ಲಿದ್ದು, ಸುಮ್ಮನಾಗುತ್ತಾರೋ, ತೆರವುಗೊಳಿಸುತ್ತಾರೋ ಕಾದು ನೋಡಬೇಕಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಂಡೇ ಮಾರ್ಕೆಟ್ ಬಳಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಚಿಕನ್ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಸದಸ್ಯ ಮುಸ್ತಾಕ ಶೇಕ ಹೇಳಿದಾಗ ಈ ಬಗ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಆದ್ದರಿಂದ ತೆರವುಗೊಳಿಸಲು ಅಸಾಧ್ಯವಾಗಿದೆ ಎಂದು ಅಧ್ಯಕ್ಷ ಎನ್.ಜಿ.ಸಾಳೊಂಕೆ ತಿಳಿಸಿದರು. ಈ ಬಗ್ಗೆ ನಾಮ ನಿರ್ದೇಶಿತ ಸದಸ್ಯ ವಿ.ಆರ್.ಹೆಗಡೆ, ಸದಸ್ಯರುಗಳಾದ ರಿಯಾಜ ಶೇಖ, ಮುಸ್ತಾಕ ಶೇಖ, ಕೀರ್ತಿ ಗಾಂವಕರ, ರವಿ ಸುತಾರ ಮೊದಲಾದವರು ಈ ಬಗ್ಗೆ ನಗರ ಸಭೆಯ ವಕೀಲರಿಂದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ತಿಳಿಸಿದರು.
ನಗರ ಸಭೆಯ ವಾಣಿಜ್ಯ ಮಳಿಗೆ ಮತ್ತು ಸಂಡೇ ಮಾರ್ಕೆಟ್ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ ನಡೆಸುವವರು ಟೇಡ್ ಲೈಸನ್ಸ್ ಪಡೆದುಕೊಳ್ಳಬೇಕು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹಿಂದಿನ ಸಭೆಯಲ್ಲಿ ನಿರ್ಣಯಿಸಿದ್ದರೂ, ಅಧಿಕಾರಿಗಳು ನಿರ್ಣಯವನ್ನು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ಕೂಡಲೆ ಎಚ್ಚೆತ್ತು ಎಲ್ಲ ವರ್ತಕರು ಟ್ರೇಡ್ ಲೈಸನ್ಸ್ ಪಡೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಂದೀಶ ಮುಂಗರವಾಡಿ ಆಗ್ರಹಿಸಿದರು.
ಜನಪ್ರತಿನಿಧಿಗಳೆನ್ನುವುದನ್ನು ಮರೆಯದಿರಿ:
ನಗರ ಸಭೆಯ ವಿವಿಧ ವಾಹನಗಳಾದ ಅದರಲ್ಲೂ ಮುಖ್ಯವಾಗಿ ಘನತ್ಯಾಜ್ಯ ಮತ್ತು ನೀರು ವಿತರಣಾ ವಾಹನಗಳಿಗೆ ಹಾಕಲಾಗುವ ಡಿಸೇಲಿನಲ್ಲಿ ಒಂದು ಇಂಡೆಂಟ್ (ಅಂದರೆ 50 ಲೀ ಡಿಸೇಲ್) ಅಥವಾ ಪ್ರತಿ ಚಾಲಕ ರೂ: 10 ಸಾವಿರ ತನಗೆ ಕೊಡಬೇಕೆಂದು ನಗರ ಸಭಾ ಸದಸ್ಯರೆ ಚಾಲಕರಿಗೆ ಪೀಡಿಸುತ್ತಿರುವುದನ್ನು ಆಡಳಿತ ಪಕ್ಷದ ಸದಸ್ಯ ಕೀರ್ತಿ ಗಾಂವಕರ ಸಭೆಯಲ್ಲಿ ವಿವರಿಸುತ್ತಾ, ಒಬ್ಬ ಮಾಡಿದ ತಪ್ಪಿಗೆ ಎಲ್ಲ ನಗರ ಸಭಾ ಸದಸ್ಯರುಗಳ ಮಾನ ಹರಾಜಾಗುವಂತಾಗಿದೆ. ನಾವೆಲ್ಲ ಜನಪ್ರತಿನಿಧಿಗಳೆನ್ನುವುದನ್ನು ಮರೆಯದಿರಿ ಎಂದು ಖಡಕ್ಕಗಾಗಿ ಎಚ್ಚರಿಸಿದರು. ನಗರ ಸಭೆಯ ವಾಹನ ಚಾಲಕರನ್ನು ಒಂದು ವಾಹನದಿಂದ ಒಂದು ವಾಹನಕ್ಕೆ ವರ್ಗಾಯಿಸಬೇಕೆಂದು ರಿಯಾಜ್ ಶೇಖ ಆಗ್ರಹಿಸಿದರು.
ಗಬ್ಬು ನಾರುತ್ತಿದೆ ನಗರ ಸಭೆಯ ಶೌಚಾಲಯ:
ಸಾಮಾನ್ಯ ಸಭೆಯ ದಿನದಂದು ನಗರ ಸಭೆಯೊಳಗಿನ ಶೌಚಾಲಯದಲ್ಲಿ ನೀರು ಇಲ್ಲದಿರುವುದರಿಂದ ಗಬ್ಬು ನಾರುತ್ತಿರುವುದನ್ನು ಗಮನಿಸಿದ ಮಹಮ್ಮದ ಫನಿಬಂದ್ ಅವರು ನಗರ ಸಭೆಯೊಳಗಿನ ಶೌಚಾಲಯವೆ ಗಬ್ಬು ನಾರುತ್ತಿದ್ರೆ, ಇನ್ನೂ ಉಳಿದ ಕಡೆಯ ಪರಿಸ್ಥಿತಿಯೇನು ಎಂದು ವ್ಯಂಗ್ಯವಾಡಿದರು.
ಪಾಗಿಂಗ್ ಯಂತ್ರ ಬಂದ್ -ಆದ್ರೆ ಡಿಸೇಲ್ ಖರ್ಚಾಗುತ್ತಿದೆ:
ನಗರ ಸಭೆಯ ಪಾಗಿಂಗ್ ಯಂತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಅದಕ್ಕೆ ಡಿಸೇಲ್ ಖರ್ಚು ಹಾಕಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಕೀರ್ತಿ ಗಾಂವಕರ, ಮಂಜು ರಾಥೋಡ, ರವಿ ಸುತಾರ ಮೊದಲಾದವರು ಆಗ್ರಹಿಸಿದರು.
ಕಸ ಸಂಗ್ರಹಣಾ ವಾಹನದ ಧ್ವನಿವರ್ಧಕದಲ್ಲಿ ಹಿಂದಿಯ ಜೊತೆಗೆ ಕನ್ನಡಕ್ಕೂ ಆಧ್ಯತೆ ನೀಡಿ:
ಕಸ ಸಂಗ್ರಹಣಾ ಮಾಡುವ ವಾಹನ ಮನೆ ಮನೆಗೆ ಬರುತ್ತಿದ್ದಂತೆ ಹಿಂದಿ ಭಾಷೆಯಲ್ಲಿ ಜಾಗೃತಿ ಘೋಷಣೆಗಳನ್ನು ಕೂಗುತ್ತಿದ್ದು, ಹಿಂದಿಯ ಜೊತೆಗೆ ಕನ್ನಡ ಭಾಷೆಯಲ್ಲಿಯೂ ಜಾಗೃತಿ ಘೋಷಣೆಗಳನ್ನು ಕೂಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೀರ್ತಿ ಗಾಂವಕರ, ರೋಶನ್ ಬಾವಾಜಿ, ಮಂಜು ರಾಥೋಡ ಮೊದಲಾದವರು ಆಗ್ರಹಿಸಿದರು.
ನಗರ ಸಭಾ ಅಧ್ಯಕ್ಷರ ಆದೇಶಕ್ಕೆ ಕಿಮ್ಮತ್ತು ನೀಡದ ಅಧಿಕಾರಿಗಳು:
ನಗರದ ವಿವಿಧ ವೃತ್ತಗಳನ್ನು ಸುಣ್ಣ ಬಣ್ಣ ಹಚ್ಚಿ ಅಲಂಕರಿಸಬೇಕೆಂದು ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ಬಗ್ಗೆ ಅಧ್ಯಕ್ಷರು ಒಂದು ವಾರದೊಳಗಡೆ ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಆದೇಶಿಸಿದ್ದರೂ, ಅಧಿಕಾರಿಗಳು ಮಾತ್ರ ಅಧ್ಯಕ್ಷರ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂದು ರಿಯಾಜ್ ಶೇಖ ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಒಟ್ಟಿನಲ್ಲಿ ಗದ್ದಲ, ಆರೋಪ-ಪ್ರತ್ಯಾರೋಪಗಳಲ್ಲಿ ಸಭೆ ಆರಂಭಗೊಂಡು, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ನಡುವೆ ನಡೆದ ಮಾತಿನ ಚಕಮಕಿಯಿಂದ ಪ್ರತಿ ಪಕ್ಷದ ಸದಸ್ಯರು ಸಭೆಯಿಂದ ಹೊರ ನಡೆದಾಗ ಅಧ್ಯಕ್ಷ ಎನ್.ಜಿ.ಸಾಳೊಂಕೆ ಹೊರ ಬಂದು ಮತ್ತೇ ಎಲ್ಲರನ್ನು ಕರೆದು ವಿನಂತಿಸಿ ಸಭೆ ನಡೆಸಿದರು. ಪೌರಾಯುಕ್ತ ಜತ್ತಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು.
Leave a Comment